ರಾಯಚೂರು ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣಕ್ಕೆ ತಿರುವು
ರಾಯಚೂರು, ಮೇ 11: ರಾಯಚೂರು ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದ್ದು, ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳುತ್ತಿದೆ.
ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಅರ್ಧ ಕೊಳೆತ ಶವ ನೇಣು ಬಿಗಿದ ಸ್ಥಿತಿಯಲ್ಲಿ ಏಪ್ರಿಲ್ 16 ರಂದು ಪತ್ತೆಯಾಗಿತ್ತು, ಯಾರೋ ಅತ್ಯಾಚಾರ ಮಾಡಿ, ಕೊಲೆ ಮಾಡಿ ಆಕೆಯ ಶವವನ್ನು ನೇಣು ಹಾಕಿದ್ದಾರೆ ಎಂದು ನಂಬಲಾಗಿತ್ತು.
ರಾಯಚೂರು ವಿದ್ಯಾರ್ಥಿನಿ ಸಾವು, ಅನುಮಾನಕ್ಕೆ ಕಾರಣವಾದ ಅಂಶಗಳು
ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಒದಗಿಸುವಂತೆ ರಾಯಚೂರಿನಲ್ಲಿ ವಿದ್ಯಾರ್ಥಿಗಳು ಭಾರಿ ಪ್ರತಿಭಟನೆ ಮಾಡಿದ್ದರು, ರಾಯಚೂರು ಬಂದ್ ಸಹ ಮಾಡಲಾಗಿತ್ತು, ಪ್ರಕರಣವು ರಾಜ್ಯದ, ದೇಶದ ಗಮನ ಸೆಳೆದಿತ್ತು, ಈಗ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಇದು ಆತ್ಮಹತ್ಯೆಯೇ ಎಂದು ವರದಿ ಹೇಳುತ್ತಿದೆ. ಆದರೆ ಆತ್ಮಹತ್ಯೆಗೆ ಕಾರಣ ಏನೆಂಬುದು ಪತ್ತೆ ಆಗಬೇಕಿದೆ.
ಮರಣೋತ್ತರ ಪರೀಕ್ಷೆ ವರದಿಯಂತೆ, ವಿದ್ಯಾರ್ಥಿನಿಯ ಕತ್ತಿನ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ ಬಿಟ್ಟರೆ ದೇಹದ ಮೇಲೆ ಯಾವುದೇ ಗಾಯ ಇಲ್ಲ, ಏಪ್ರಿಲ್ 13ರಂದೇ ಆಕೆ ನೇಣು ಹಾಕಿಕೊಂಡಿರುವ ಸಾಧ್ಯತೆ ಇರುವ ಕಾರಣ ಆಕೆಯ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ವರದಿಯ ಪ್ರಕಾರ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವಾದ ಕುರುಹುಗಳೂ ಇಲ್ಲ.
ಯುವತಿ ಸಾವಿನ ಕುರಿತು ಯೋಗರಾಜ್ ಭಟ್ ಬರೆದ ಮನಮಿಡಿಯುವ ಪತ್ರ
ಆದರೆ ಆಕೆ ನಾಪತ್ತೆಯಾದ ದಿನದಂದು ಕಾಲೇಜಿನ ಬಳಿ ಆಕೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಸುದರ್ಶನ್ ಸಿಕ್ಕಿ, ಅಂದೂ ಸಹ ಪ್ರೀತಿಸುವಂತೆ ಬಲವಂತಪಡಿಸಿದ್ದ ಮತ್ತು ಆಕೆಯ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಅಂದು ಮಾತ್ರವಲ್ಲದೆ ಅದಕ್ಕೆ ಮುನ್ನವೂ ವಿದ್ಯಾರ್ಥಿನಿಯನ್ನು ಸಾರ್ವಜನಿಕವಾಗಿ ನಿಂದಿಸಿದ್ದ ಮತ್ತು ಹಲ್ಲೆ ಮಾಡಿದ್ದ, ಇದರಿಂದಲೇ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಅನುಮಾನ ವ್ಯಕ್ತವಾಗಿದೆ.
ರಾಯಚೂರು ವಿದ್ಯಾರ್ಥಿನಿ ಸಾವು : ಆರೋಪಿಗೆ ನ್ಯಾಯಾಂಗ ಬಂಧನ
ವಿದ್ಯಾರ್ಥಿನಿಯ ದೇಹ ಕಪ್ಪು ಬಣ್ಣಕ್ಕೆ ತಿರುಗಿತ್ತು, ಇದು ಅನುಮಾನಕ್ಕೆ ಕಾರಣವಾಗಿತ್ತು, ಆದರೆ ಈ ಬಗ್ಗೆ ಮಾಹಿತಿ ನೀಡಿರುವ ಸಿಐಡಿ ಅಧಿಕಾರಿ, ಆತ್ಮಹತ್ಯೆ ಮಾಡಿಕೊಂಡ ಎರಡೇ ದಿನದಲ್ಲಿ ದೇಹ ಕೊಳೆಯುತ್ತದೆ, ಕಪ್ಪು ಬಣ್ಣಕ್ಕೆ ತಿರುಗುತ್ತದೆ, ಈ ಪ್ರಕರಣದಲ್ಲಿ ನಾಪತ್ತೆ ಆದ ಮೂರನೇ ದಿನಕ್ಕೆ ದೇಹ ಸಿಕ್ಕಿದೆ, ಬಿಸಿಲು ಹಾಗೂ ಕೊಳೆತ ಕಾರಣ ದೇಹ ಕಪ್ಪು ಬಣ್ಣಕ್ಕೆ ತಿರುಗಿದೆ, ಯಾರೂ ದೇಹವನ್ನು ಸುಟ್ಟಿಲ್ಲ ಎಂದಿದ್ದಾರೆ.
ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಪತ್ರವೊಂದು ದೊರೆತಿದ್ದು, ಅದರಲ್ಲಿ ಶೈಕ್ಷಣಿಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಲ್ಲೇಖಿತವಾಗಿದೆ, ಪತ್ರವನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ನಿರೀಕ್ಷಿಸಲಾಗುತ್ತಿದೆ. ಪ್ರಕರಣ ಸಂಬಂಧ ಸುದರ್ಶನ್ ಎಂಬಾತನನ್ನು ಬಂಧಿಸಲಾಗಿದೆ.