ವಸೂಲಿಯಾಗದ ಕರ: ಆರ್ಥಿಕ ಸಂಕಷ್ದಲ್ಲಿ ರಾಯಚೂರು ನಗರ ಸಭೆ
ರಾಯಚೂರು, ಜನವರಿ 05: ಮೇಲ್ದರ್ಜೆಗೇರಿದ ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸಾಕಷ್ಟು ಬಲಗೊಂಡಿರುತ್ತೆ. ಆದ್ರೆ ರಾಯಚೂರು ನಗರಸಭೆಯು ಬಡತನದಲ್ಲಿ ಕಾಲ ಕಳೆಯುತ್ತಿದೆ. ಕಾರ್ಮಿಕರಿಗೆ, ಸದಸ್ಯರಿಗೆ ಭತ್ಯೆ ನೀಡಲು ಹರಸಾಹಸ ಪಡುವಂತಾಗಿದೆ. ಹೀಗಾಗಿ 10 ವರ್ಷಗಳ ಬಳಿಕ ಕರ ದರದಲ್ಲಿ ಹೆಚ್ಚಳ ಮಾಡಲಾಗಿದೆ.
ರಾಯಚೂರು ನಗರ ವರ್ಷದಿಂದ ವರ್ಷಕ್ಕೆ ಸಾಕಷ್ಟು ಬೆಳೆಯುತ್ತಿದೆ. ಇದರಿಂದ ರಾಯಚೂರು ನಗರಸಭೆಗೆ ಸಾಕಷ್ಟು ಆದಾಯ ಬರಬೇಕು. ಆದರೆ ಪ್ರತಿ ವರ್ಷ ಸಂಗ್ರಹಿಸುವ ವಿವಿಧ ಶುಲ್ಕಗಳು ಹಾಗೂ ತೆರಿಗೆಗಳ ವಸೂಲಿಯಲ್ಲಿ ನಿರೀಕ್ಷಿತ ಗುರಿ ಮುಟ್ಟುತ್ತಿಲ್ಲ.
ಹೀಗಾಗಿ ಆದಾಯ ಸಂಗ್ರಹವಾಗದ ಹಿನ್ನೆಲೆಯಲ್ಲಿ ಗುತ್ತಿಗೆ ಕಾರ್ಮಿಕರ ತಿಂಗಳ ವೇತನ ಹಾಗೂ ನಗರಸಭೆ ಸದಸ್ಯರಿಗೆ ಗೌರವಧನ ನೀಡಲಾಗುತ್ತಿಲ್ಲ. ನಗರದ ವಿವಿಧೆಡೆ ಕೈಗೊಂಡಿರೋ ಕಾಮಗಾರಿಗಳಿಗೆ ಪಾವತಿಸಬೇಕಿದ್ದ ಹಣವನ್ನೂ ನಗರಸಭೆ ಕೊಟ್ಟಿಲ್ಲ. ರಾಯಚೂರು ನಗರಸಭೆಗೆ ಬಾಕಿಯಿರೋ ಎಲ್ಲಾ ಕರವನ್ನೂ ವಸೂಲಿ ಮಾಡಿದರೂ ಆರ್ಥಿಕ ಸಂಕಷ್ಟ ಮುಗಿದಿಲ್ಲ.
ಈ ವರ್ಷದಲ್ಲಿ 8.9 ಕೋಟಿ ರೂಪಾಯಿ ಆಸ್ತಿ ತೆರಿಗೆ ಹಾಗೂ 3.8 ಕೋಟಿ ರೂಪಾಯಿ ನೀರಿನ ಕರ ವಸೂಲಿ ಮಾಡುವ ಗುರಿ ಹೊಂದಲಾಗಿದೆ. ಆದ್ರೆ ಯಾವುದೂ ಕೈಗೂಡುತ್ತಿಲ್ಲ. ಹೀಗಾಗಿ ಇಲ್ಲಿಯವರೆಗೂ ಸುಮಾರು 15 ಕೋಟಿ ರೂಪಾಯಿ ತೆರಿಗೆ ಸಂಗ್ರಹ ಬಾಕಿಯಿದೆ. ಚಾಲ್ತಿಯಿರೋ ವಿವಿಧ ದರಗಳು ಕಳೆದ 2006ರಿಂದಲೂ ಬದಲಾಗಿರಲಿಲ್ಲ. ಜೊತೆಗೆ ವಿವಿಧ ವಿಧಾನದ ಕಟ್ಟಡಗಳು ಹಾಗೂ ವಾಣಿಜ್ಯ ಚಟುವಟಿಕೆಗಳು ನಗರದಲ್ಲಿ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ರಾಯಚೂರು ನಗರಸಭೆ ಕರ ದರಗಳನ್ನು ದ್ವಿಗುಣಗೊಳಿಸಿದೆ. ಇದನ್ನು ಸಾರ್ವಜನಿಕರು ವಿರೋಧ ಮಾಡ್ತಿದ್ದಾರೆ.
ಸದ್ಯದ ಸ್ಥಿತಿಯಲ್ಲಿ ರಾಯಚೂರು ನಗರಸಭೆ ಆರ್ಥಿಕವಾಗಿ ಬಲಗೊಳ್ಳಬೇಕಾದ್ರೆ ಕರ ದರ ಹೆಚ್ಚಳ ಅನಿವಾರ್ಯ ಎನ್ನುವಂತಾಗಿದೆ. ಅದರ ಜೊತೆಗೆ ಬೇರೆ ಆರ್ಥಿಕ ಸಂಪನ್ಮೂಗಳನ್ನು ಸೃಷ್ಟಿಸಬೇಕು. ಜನ ಸಾಮಾನ್ಯರ ಮೇಲೆ ಹೆಚ್ಚು ಹೊರೆಯಾಗಬಾರದು ಎಂಬ ಕೂಗುಯಿದೆ.