ರಾಯಚೂರು ಬಂದ್ ಯಶಸ್ವಿ: ನವೋದಯ ಶಿಕ್ಷಣ ಸಂಸ್ಥಗೆ ಖಡಕ್ ಎಚ್ಚರಿಕೆ
ರಾಯಚೂರು ಮಾರ್ಚ್ 7: ಸೋಮವಾರ ಕರೆ ನೀಡಲಾಗಿದ್ದ ರಾಯಚೂರು ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದ್ದು ನವೋದಯ ಶಿಕ್ಷಣ ಸಂಸ್ಥಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಕಲಂ 371(ಜೆ) ಅನ್ವಯಿಸದಂತೆ ರಾಯಚೂರಿನ ನವೋದಯ ಸಂಸ್ಥೆ ಕೋರ್ಟ್ ಮೊರೆ ಹೋಗಿದ್ದು ಕೋರ್ಟ್ಗೆ ಹಾಕಿದ ಅರ್ಜಿ ವಾಪಸ್ ಪಡೆಯುವಂತೆ ಒತ್ತಾಯಿಸಿ ಇಂದು ರಾಯಚೂರಿನಲ್ಲಿ ಬಂದ್ ನಡೆಸಲಾಯಿತು. ನವೋದಯ ಶಿಕ್ಷಣ ಸಂಸ್ಥೆ ನಿಲುವಿನ ವಿರುದ್ಧ ವಿವಿಧ ಸಂಘಟನೆಗಳು ಮತ್ತು ಎಲ್ಲಾ ಪಕ್ಷಗಳು ಜೊತೆಗೂಡಿ ಹೋರಾಟ ನಡೆಸಿವೆ.
ಕಲಂ 371(ಜೆ) ಅನ್ವಯ ಪ್ರವೇಶ ಹಂಚಿಕೆಗೆ ಆಗ್ರಹಿಸಿ ಈ ಹೋರಾಟ ನಡೆಸಲಾಗುತ್ತಿದೆ. ಮೊದಲ ಹಂತದ ಹೋರಾಟದಲ್ಲಿ ನವೋದಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ನವೋದಯ ಶಿಕ್ಷಣ ಸಂಸ್ಥೆ ಒಪ್ಪಿಕೊಂಡಿತು. ಆದರೆ ಕಲಂ 371(ಜೆ)ಗೆ ಸಂಬಂಧಿಸಿ ನ್ಯಾಯಾಲಯದ ದಾವೆಯನ್ನು ಮುಂದುವರೆಸಲಾಗಿದೆ. ಈ ಹಿನ್ನೆಲೆಯಲ್ಲಿ ರಿಟ್ ಅರ್ಜಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ಇಂದು ರಾಯಚೂರು ಬಂದ್ಗೆ ಕರೆ ನೀಡಲಾಗಿತ್ತು. ಒಂದು ವೇಳೆ ನವೋದಯ ಶಿಕ್ಷಣ ಸಂಸ್ಥೆ ದಾವೆ ಹಿಂಪಡೆಯದೇ ಇದ್ದರೆ ದಾವೆ ವಿರುದ್ಧ ನ್ಯಾಯಾಲಯ ಮತ್ತು ಸರ್ಕಾರ ಮಟ್ಟದಲ್ಲಿ ಹೋರಾಟ ಮುಂದುವರೆಸಲಾಗುತ್ತದೆ ಎಂದು ಪ್ರತಿಭಟನೆಯ ನೇತೃತ್ವದ ವಹಿಸಿದ ಬಿಜೆಪಿ ಶಾಸಕ ಶಿವರಾಜ್ ಪಾಲೀಟ್ ಎಚ್ಚರಿಕೆ ನೀಡಿದ್ದಾರೆ.
ಜೊತೆಗೆ ಹೈದರಾಬಾದ್ ಕರ್ನಾಟಕದ ಭಾಗದ ನುರಿತ ನ್ಯಾಯಾವಾದಿಗಳ ಮೂಲಕ ಹೈಕೋರ್ಟ್ನಲ್ಲಿ ಕಾನೂನು ಸಮರ ನಡೆಸಲಾಗುತ್ತದೆ. ಅನುದಾನಿತ ಮತ್ತು ಅದುದಾನ ರಹಿತ ಒಕ್ಕೂಟದಿಂದ ನ್ಯಾಯಾಲಯದಲ್ಲಿ ದಾವೆ ಹೂಡಲಾಗುತ್ತದೆ. ದಾವೆ ಹಿಂಪಡೆಯುವಂತೆ ಮಾಡಲಾಗುತ್ತದೆ ಎಂದು ಹೇಳಿದರು.
ಬಂದ್ ಹಿನ್ನೆಲೆ ರಾಯಚೂರು-ಲಿಂಗಸುಗೂರು ಬೈಪಾಸ್ ರಸ್ತೆ ಬಳಿ ಟೈಯರ್ಗೆ ಬೆಂಕಿ ಹಚ್ಚಿ ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋರ್ಟ್ಗೆ ಸಲ್ಲಿಸಿರುವ ರಿಟ್ ಅರ್ಜಿ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ರಸ್ತೆ ಮಧ್ಯೆ ವಾಹನಗಳನ್ನು ತಡೆದು ಧರಣಿ ನಡೆಸಿದ್ದಾರೆ. ರಸ್ತೆಯಲ್ಲಿ ಕುಳಿತಿದ್ದ ಪ್ರತಿಭಟನಾಕಾರರನ್ನು ತಡೆದ ಪೊಲೀಸರು ವಾಹನಗಳು ಚಲಾಯಿಸಲು ಬಿಟ್ಟರು.
ಇನ್ನೂ ನವೋದಯ ವೈದ್ಯಕೀಯ ಕಾಲೇಜಿನ ವಿರುದ್ಧ ನಿರಂತರ ಹೋರಾಟಕ್ಕೆ ನಿರ್ಧರಿಸಲಾಗಿದೆ. ಹಿರಿಯ ನ್ಯಾಯವಾದಿಯೊಬ್ಬರನ್ನು ನೇಮಕ ಮಾಡಿಕೊಂಡು ಕಾನೂನಾತ್ಮಕ ಹೋರಾಟ ನಡೆಸಲು ಪಕ್ಷಾತೀತ ಹೋರಾಟ ಸಮಿತಿ ನಿರ್ಧರಿಸಿದೆ ಎಂದು ರಾಯಚೂರು ಜಿಲ್ಲಾ ಜಾತ್ಯತೀತ ಜನತಾದಳ ಅಧ್ಯಕ್ಷ ಎಂ.ವಿರೂಪಾಕ್ಷಿ ಹೇಳಿದರು.
ಇಂದಿನ ಹೋರಾಟ ಯಶಸ್ವಿಯಾಗಿದೆ. ಇಂದು ರಾಯಚೂರು ಬಂದ್ ಯಶಸ್ವಿಯಾಗಿದೆ. ಈ ಮೂಲಕ ಎಚ್ಚರಿಕೆ ಗಂಟೆಯನ್ನು ಕೊಟ್ಟಿದ್ದೇವೆ. ಜೊತೆಗೆ ಹೋರಾಟದ ರೂಪರೇಷಿಗಳನ್ನು ಬದಲಾಯಿಸಬೇಕು ಎಂದು ನಿರ್ಧರಿಸಿದ್ದೇವೆ. ಒಂದು ವೇಳೆ ರಿಟ್ ಅರ್ಜಿ ವಾಪಸ್ ಪಡೆಯದೇ ಹೋದರೆ ನ್ಯಾಯಾಂಗದ ಮುಖಾಂತರ ಮತ್ತು ನಿರಂತರ ಹೋರಾಟದ ಮುಖಾಂತರ ಬಿಸಿ ಮುಟ್ಟಿಸುವಂತ ಕೆಲಸ ಮಾಡುತ್ತೇವೆ ಎಂದು ಹೇಳಿದರು.
Recommended Video