ರಾಯಚೂರು: ಹಟ್ಟಿ ಚಿನ್ನದ ಗಣಿಗೆ 75ರ ಹೊಳಪು
ರಾಯಚೂರು ಆಗಸ್ಟ್, 15: ದೇಶದ ಖ್ಯಾತಿಯ ಹಟ್ಟಿ ಚಿನ್ನದ ಗಣಿಯಲ್ಲಿ 75ನೇ ಸಂಭ್ರಮವನ್ನು ಆಚರಿಸಲಾಗಿದೆ. ಈವರೆಗೆ ಸುಮಾರು 84 ಟನ್ ಚಿನ್ನ ಉತ್ಪಾದಿಸಿರುವ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಈ ಸಾಧನೆಗೆ ಕಾರ್ಮಿಕರ ಶ್ರಮವೂ ಪ್ರಮುಖ ಕಾರಣವಾಗಿದೆ. ಈವರೆಗೆ 2,800 ಅಡಿ ಆಳಕ್ಕೆ ಗಣಿಯನ್ನು ಅಗೆಯಲಾಗಿದೆ. ಅಗೆದಷ್ಟು ಚಿನ್ನ ಆಗರವಾಗಿ ಸಿಗುತ್ತಲೇ ಇದೆ.
ಬಾಹ್ಯ ಲೋಕಕ್ಕೆ ಅಗೋಚರ ಪ್ರಪಂಚದಂತೆ ಕಾಣುವ, ಭೂ ಗರ್ಭದಾಳದಲ್ಲಿ ಸರಿಸುಮಾರು 2,500ಕ್ಕೂ ಅಧಿಕ ಕಾರ್ಮಿಕರು ಇಂದಿಗೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಗಣಿ ಈಗ ಯಾಂತ್ರೀಕರಣದಲ್ಲಿ ತುಂಬಾ ಅಭಿವೃದ್ಧಿ ಆಗಿದೆ. ಇಲ್ಲಿ ಇದೀಗ ಶೇಕಡಾ 80ರಷ್ಟು ಕೆಲಸ ಯಂತ್ರಗಳಿಂದಲೇ ನಡೆಯುತ್ತದೆ. ಈಗೇನಿದ್ದರೂ ನಿರ್ವಹಣೆಗೆ ಮಾತ್ರ ಮಾನವ ಸಂಪನ್ಮೂಲದ ಬಳಕೆ ಆಗುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಸೊಳ್ಳೆ ಕಾಟದಿಂದ ರಾಯಚೂರು ಜನ ಹೈರಾಣ
ಗಣಿ ವಿಶೇಷತೆ: ಜುಲೈ 8ಕ್ಕೆ 75 ವರ್ಷ ಪೂರೈಸಿರುವ ಹಟ್ಟಿ ಗಣಿ ಕಂಪನಿಯಲ್ಲಿ ಗಣಿಗಾರಿಕೆ ನಡೆಸಿದ ಬಗ್ಗೆ ನೂರಾರು ವರ್ಷಗಳ ಇತಿಹಾಸವಿದೆ. 1947ರ ಜುಲೈ, 8ರಂದು ಅಧಿಕೃತವಾಗಿ ಹೈದರಾಬಾದ್ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತವೆಂದು ನೋಂದಾಣಿ ಆಗಿದೆ. ನಂತರ ರಾಜ್ಯಗಳನ್ನು ಭಾಷಾವಾರು ಪುನರ್ ವಿಂಗಡನೆ ಆದಾಗ ಮೈಸೂರು ರಾಜ್ಯಕ್ಕೆ ಸೇರಿದ ಮೇಲೆ 1956ರಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿ ಎಂದು ನಾಮಕರಣಗೊಂಡಿತು.
ಸರ್ಕಾರದ ಅಧೀನದಲ್ಲಿರುವ ಕಂಪನಿ
ಹಟ್ಟಿ ಚಿನ್ನದ ಗಣಿ ಕಂಪನಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಂಸ್ಥೆ ಆಗಿದೆ. ಆದರೂ ಇದು ಸ್ವಾಯತ್ತ ಸಂಸ್ಥೆಯಾಗಿಯೇ ಕಾರ್ಯ ನಿರ್ವಹಿಸುತ್ತಿದೆ. ಮುಖ್ಯಸ್ಥರು, ವ್ಯವಸ್ಥಾಪಕ ನಿರ್ದೇಶಕರು ಮಾತ್ರ ಸರ್ಕಾರದಿಂದ ನಿಯೋಜಿಸಲ್ಪಟ್ಟರೆ, ಉಳಿದೆಲ್ಲ ನೌಕರರನ್ನು ಆಡಳಿತ ಮಂಡಳಿಯಿಂದಲೇ ನೇಮಕಕ್ಕೆ ಒಳಪಡುತ್ತಾರೆ. ಇದು ಸ್ವಾಯತ್ತ ಸಂಸ್ಥೆ ಆಗಿರುವುದರಿಂದ ಇಲ್ಲಿನ ಕಾಮಿರ್ಕರಿಗೆ ಸರ್ಕಾರದ ಯಾವೊಂದು ಸೌಲಭ್ಯಗಳು ಸಿಗುವುದಿಲ್ಲ. ಇಲ್ಲಿ ಐದು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತದೆ. ಆದರೆ ಕಂಪನಿಯ ಒಟ್ಟಾರೆ ಆದಾಯದ ಆಧಾರದ ಮೇಲೆ ವೇತನ ಪರಿಷ್ಕರಣೆ ಮಾಡಲಾಗುತ್ತಿದೆ. ಕೆಲವೊಮ್ಮೆ ಶೇಕಡಾ 10ರಷ್ಟು ವೇತನ ಹೆಚ್ಚಳ ಆದರೆ, ಕೆಲವೊಮ್ಮೆ 12, 15ರವರೆಗೂ ಹೆಚ್ಚಿಸಲಾಗುತ್ತದೆ.
ಚಿನ್ನದ ಘಟಕಗಳಿರುವ ಸ್ಥಳಗಳು?
ಗಣಿ ಇದೀಗ 75ನೇ ವರ್ಷಕ್ಕೆ ದಾಪುಗಾಲಿಡುತ್ತಿದೆ. 75 ವರ್ಷದಲ್ಲಿ ಗಣಿ ಕಂಪನಿ ಅನೇಕ ಏಳುಬೀಳುಗಳನ್ನು ಕಂಡಿದ್ದರೂ, ಇಂದು ಚಿನ್ನದ ಬೆಲೆ ಏರಿಕೆ ಆಗುತ್ತಲಿದ್ದು, ಸಾಧನೆಯ ಹಾದಿಯಲ್ಲಿ ಬೆಳೆಯುತ್ತಾ ಇದೆ. ಗಣಿ ಕಂಪನಿಯು ರಾಜ್ಯದಲ್ಲಿ ಚಿನ್ನದ ನಿಕ್ಷೇಪಗಳ ಪತ್ತೆ, ಅಭಿವೃದ್ಧಿ ಹಾಗೂ ಉತ್ಪಾದನೆಯಲ್ಲಿ ತೊಡಗಿದೆ. ಚಿತ್ರದುರ್ಗದಲ್ಲಿ ಚಿನ್ನದ ಘಟಕ, ತುಮಕೂರು ಜಿಲ್ಲೆ ಅಜ್ಜನಹಳ್ಳಿಯಲ್ಲಿಯೂ ಒಂದು ಚಿನ್ನದ ಘಟಕವನ್ನು ಹೊಂದಿದೆ. ದೇವದುರ್ಗ ತಾಲೂಕಿನ ಊಟಿ ಹಾಗೂ ಮಾನ್ವಿ ತಾಲೂಕಿನ ಹೀರಾಬುದ್ಧಿನ್ನಿ ಗ್ರಾಮಗಳಲ್ಲೂ ಚಿನ್ನದ ಅದಿರು ತೆಗೆದು ಹಟ್ಟಿ ಚಿನ್ನದಗಣಿ ಘಟಕಕ್ಕೆ ರವಾನಿಸಲಾಗುತ್ತಿದೆ.
ಸಂಸ್ಕರಣೆ ಮಾಡುವ ವಿಧಾನಗಳು
ಹಟ್ಟಿಯಲ್ಲಿನ ಅದಿರು ನಿಕ್ಷೇಪಗಳಲ್ಲಿ ಚಿನ್ನ ಇರುವುದು ನಿಜ. ಆದರೆ ಚಿನ್ನವನ್ನು ನೇರವಾಗಿ ಪಡೆಯಲು ಸಾಧ್ಯವಿಲ್ಲ. ಹಲವು ಬಾರಿ ಸಂಸ್ಕರಣೆ ಮಾಡಿದ ನಂತರವೇ 24 ಕ್ಯಾರೆಟ್ ಚಿನ್ನ ಸಿಗುತ್ತದೆ. ಮೊದಲು ಭೂಮಿಯ ಒಳಗಡೆ ಸಿಡಿಮದ್ದು ಅಳವಡಿಸಿ ಬ್ಲಾಸ್ಟ್ ಮಾಡುವ ಮೂಲಕ ಅದಿರು ಹೊರ ತೆಗೆಯಲಾಗುತ್ತದೆ. ನಂತರ ಅದನ್ನು ಗೇಜ್ಗಳ ಮೂಲಕ ಮೇಲೆ ಕಳುಹಿಸಲಾಗುತ್ತದೆ. ಇವು ದೊಡ್ಡ ಗಾತ್ರದ ಕಲ್ಲಿನ ರೂಪದಲ್ಲಿರುತ್ತವೆ. ಮಿಲ್ನಲ್ಲಿ ಯಂತ್ರದ ಮೂಲಕ ಅವುಗಳನ್ನು ಸಣ್ಣ ಪುಡಿ ಮಾಡಲಾಗುತ್ತದೆ. ನಂತರ ಆ ಪುಡಿಯನ್ನು ಗ್ರೇಂಡರ್ ಬಳಸಿ ಅವುಗಳನ್ನು ಹಿಟ್ಟಿನ ರೂಪದಲ್ಲಿ ಸಿದ್ಧಪಡಿಸಲಾಗುತ್ತದೆ.
ಚಿನ್ನ ತೆಗೆಯುವ ವಿಧಾನಗಳು
ನಂತರ ಸೈಕ್ಲೋನ್ ಬಾಕ್ಸ್ನಲ್ಲಿ ಸಣ್ಣಗಾಗದ ಅದಿರನ್ನು ಬೇರ್ಪಡಿಸಲಾಗುತ್ತದೆ. ಆ ಹಿಟ್ಟಿನ ರೂಪದ ಅದಿರನ್ನು ನೆಲ್ಸನ್ ಕಾನ್ಸಂಟ್ರೇಟ್ಗೆ ಹಾಕಿದಾಗ ಅದು ಚಿನ್ನವನ್ನು ಹಿಡಿದಿಟ್ಟುಕೊಳ್ಳುತ್ತದೆ.
ಅಲ್ಲಿ ಶೇಕಡಾ 40ರಿಂದ 50ರಷ್ಟು ಚಿನ್ನ ಸಿಗುತ್ತದೆ. ಆ ಚಿನ್ನವನ್ನು ರಾಸಾಯನಿಕ ಬಳಸಿ ಸುಡಲಾಗುತ್ತದೆ. ಈ ವೇಳೆ 24 ಕ್ಯಾರೆಟ್ ಚಿನ್ನ ಲಭ್ಯವಾಗುತ್ತದೆ. ಮುಂಚೆಯೆಲ್ಲ ನೆಲ್ಸನ್ ಕಾನ್ಸಂಟ್ರೆಟ್ ಬದಲು ಕಂಬಳಿ ಬಳಸಲಾಗುತ್ತಿತ್ತು. ಆದರೆ ಈಗ ಹಟ್ಟಿ ಚಿನ್ನದ ಗಣಿಯಲ್ಲಿಯೇ ಶೇಕಡಾ 99.9ರಷ್ಟು ಚಿನ್ನವನ್ನು ಹೊರತೆಗೆಯುವ ಯಂತ್ರವನ್ನು ಉದ್ಘಾಟಿಸಲಾಗಿದೆ. ಇದರಿಂದ ಹಟ್ಟಿಯಿಂದ ಹೊರ ಹೋಗುವ ಚಿನ್ನ ಶುದ್ಧವಾಗಿರಲಿದೆ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದರು.