ಪ್ರವಾಹದಲ್ಲಿ ಆಂಬುಲೆನ್ಸ್ಗೆ ದಾರಿ ತೋರಿ ಸಾಹಸ ಮೆರೆದ ಬಾಲಕ
ರಾಯಚೂರು, ಆಗಸ್ಟ್ 15: ರಾಯಚೂರಿನ ಪ್ರವಾಹ ಪರಿಸ್ಥಿತಿಯಲ್ಲಿ ಆಂಬುಲೆನ್ಸ್ ಒಂದಕ್ಕೆ ದಾರಿ ತೋರಿಸುವ ಮೂಲಕ ಅಪ್ರತಿಮ ಸಾಹಸ ಮೆರೆದಿದ್ದ ಅರನೇ ತರಗತಿ ಬಾಲಕನಿಗೆ ರಾಯಚೂರು ಜಿಲ್ಲಾಡಳಿತ ಸಾಹಸ ಸೇವಾ ಪ್ರಶಸ್ತಿ ನೀಡಿ ಗೌರವಿಸಿದೆ.
ರಾಯಚೂರಿನ ದೇವದುರ್ಗದಲ್ಲಿ ಕೃಷ್ಣಾ ನದಿಯ ಪ್ರವಾಹದಿಂದ ಹಿರೇರಾಯಕುಂಪೆ-ಗೂಗಲ್ ನಡುವೆ ಸಂಪರ್ಕ ಕಲ್ಪಿಸುವ ಮಚನೂರ್ ಸೇತುವೆ ಮುಳುಗಿತ್ತು. ಅಲ್ಲಿ ಸೇತುವೆ ಎಲ್ಲಿದೆ, ಅದರ ಮೇಲೆ ಎಷ್ಟು ನೀರಿದೆ ಎನ್ನುವುದೇ ತಿಳಿಯುತ್ತಿರಲಿಲ್ಲ. ಅಲ್ಲಿಗೆ ಬಂದಿದ್ದ ಆಂಬುಲೆನ್ಸ್ನಲ್ಲಿ ಚಾಲಕ ದಿಕ್ಕೆಟ್ಟು ವಾಹನ ನಿಲ್ಲಿಸಿಕೊಂಡಿದ್ದರು.
ನೆರೆ ಪೀಡಿತ ರಾಯಚೂರು, ಬಾಗಲಕೋಟೆ ತಲುಪಿದ ಇನ್ಫಿ ನೆರವು
ಸೇತುವೆಯ ಎರಡೂ ಕಡೆ ಅನೇಕ ಜನರು ನೆರೆದಿದ್ದರೂ ಅವರು ಅಸಹಾಯಕರಂತೆ ನಿಂತಿದ್ದರು. ಈ ಸಂದರ್ಭದಲ್ಲಿ ಆಂಬುಲೆನ್ಸ್ ಚಾಲಕನ ನೆರವಿಗೆ ಬಂದಿದ್ದು 12 ವರ್ಷ ವೆಂಕಟೇಶ್. 'ನಾನು ಮುಂದೆ ನಡೆದುಕೊಂಡು ಹೋಗುತ್ತೇನೆ. ನನ್ನ ಹಿಂದೆ ನಿಧಾನವಾಗಿ ಬನ್ನಿ. ಸೇತುವೆಯ ಮೇಲೆ ಎಷ್ಟು ನೀರು ಇದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ' ಎಂದು ಚಾಲಕನಿಗೆ ಧೈರ್ಯ ತುಂಬಿದ ಬಾಲಕ, ಸುಮಾರು 100 ಮೀಟರ್ ಉದ್ದದ ಸೇತುವೆ ಮೇಲೆ ನೀರು ತುಂಬಿದ್ದರೂ ದೃತಿಗೆಡದ ಬಾಲಕ ನಡೆದುಕೊಂಡು ಮುಂದೆ ಸಾಗಿದ್ದ.
ಒಂದು ಭಾಗದಲ್ಲಿ ಬಾಲಕನ ಎದೆಮಟ್ಟದವರೆಗೂ ನೀರು ಬಂದಿತ್ತು. ಒಮ್ಮೆ ಭಯವಾದರೂ ಈಜು ಕಲಿತಿದ್ದರಿಂದ ಇನ್ನೊಂದು ದಡ ಸೇರುವ ವಿಶ್ವಾಸ ಇತ್ತು ಎಂದು ಆತ ಹೇಳಿಕೊಂಡಿದ್ದಾನೆ.
ಭಾರಿ ಮಳೆ ಮುನ್ಸೂಚನೆ: ಕರ್ನಾಟಕದ 6 ಜಿಲ್ಲೆಗಳಿಗೆ ರೆಡ್ ಅಲರ್ಟ್
ಬಾಲಕನ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಆತ ತೋರಿದ ಧೈರ್ಯದ ವಿಡಿಯೋ ವೈರಲ್ ಆಗಿದೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿಯ ಸಾಹಸವನ್ನು ಮೆಚ್ಚಿದ್ದ ಸರ್ಕಾರದ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಪಿ. ಅವರು, ಪ್ರಸಕ್ತ ಸಾಲಿನ ಶೌರ್ಯ ಪ್ರಶಸ್ತಿಗಳ ಪಟ್ಟಿಯಲ್ಲಿ ವೆಂಕಟೇಶ್ ಹೆಸರನ್ನೂ ಸೇರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದು ಶಿಫಾರಸು ಮಾಡಿದ್ದರು.
ರಾಯಚೂರಿನ ಪೊಲೀಸ್ ಕವಾಯತ್ ಮೈದಾನದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶರತ್ ಅವರು ಬಾಲಕನ ಸಾಹಸವನ್ನು ಮೆಚ್ಚಿ ಸಾಹಸ ಸೇವಾ ಪ್ರಶಸ್ತಿ ನೀಡಿದರು.