ಬಾಗಿಲು ತೆರೆಯದ ರಾಯರ ಮಂತ್ರಾಲಯ: ಭಕ್ತರು ವಾಪಸ್
ರಾಯಚೂರು, ಜೂನ್ 8: ಕೊರೊನಾ ವೈರಸ್ ದಾಳಿ ದೇಶದಲ್ಲಿ ಹೆಚ್ಚಾಗುತ್ತಿದ್ದಂತೆ ಧಾರ್ಮಿಕ ಸ್ಥಳಗಳ ಪ್ರವೇಶವನ್ನು ರದ್ದುಗೊಳಿಸಲಾಗಿತ್ತು.
ಇದೀಗ ಜೂನ್ 8 ರಿಂದ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ ಆದರೆ ಗುರು ರಾಘವೇಂದ್ರ ಸ್ವಾಮಿಗಳ ಮಂತ್ರಾಲಯದ ಬಾಗಿಲು ಮಾತ್ರ ತೆರೆಯದೆ ಭಕ್ತರ ಮುಖದಲ್ಲಿ ನಿರಾಸೆ ಮೂಡಿಸಿದೆ.
ಬಾಗಿಲು ತೆರೆಯುವುದನ್ನೇ ಕಾದು ನೂರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಆದರೆ ಬಾಗಿಲು ತೆರೆಯದ ಕಾರಣ ಎಲ್ಲರೂ ಹೊಂದಿರುಗಿದ್ದಾರೆ.
ರಾಜ್ಯಾದ್ಯಂತ ಇಂದಿನಿಂದ ಭಕ್ತರಿಗೆ ತೆರೆದುಕೊಂಡ ದೇಗುಲಗಳು...
ಮಂತ್ರಾಲಯದಲ್ಲಿ ಅಗತ್ಯ ಸಿದ್ಧತೆಯ ಕೊರತೆ ಹಿನ್ನೆಲೆ ಮಠ ಮಹಾದ್ವಾರವನ್ನ ತೆರೆದಿಲ್ಲ. ದೇವಾಲಯಗಳಲ್ಲಿ ಸಾಮಾಜಿಕ ಅಂತರದ ಮಾರ್ಕ್ ಮಾಡಲಾಗಿದ್ದು, ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗಿದೆ.
ಆದರೆ ದೇವಾಲಯಕ್ಕೆ ಬರುವ ಕೆಲ ಭಕ್ತರು ಮಾಸ್ಕ್ ಧರಿಸದೇ ನೇರವಾಗಿ ಬರುತ್ತಿದ್ದಾರೆ. ದೇವಾಲಯದಲ್ಲಿ ಒಳಬರುವವರಿಗೆ ಹಾಗೂ ಹೊರ ಹೋಗುವವರಿಗೆ ಪ್ರತ್ಯೇಕ ವ್ಯವಸ್ಥೆಯಿದೆ.
ಹೀಗಿದ್ದರೂ ಬಹಳಷ್ಟು ದೇವಾಲಯಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯಿಲ್ಲ. ಭಕ್ತರ ಸಂಖ್ಯೆ ಕಡಿಮೆಯಿದ್ದು ದೇವಾಲಯಗಳು ಇನ್ನೂ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ.
ಭಕ್ತರಿಗೆ ರಾಯರ ದರ್ಶನವಿಲ್ಲ
ಮಂತ್ರಾಲಯ ಮಠದ ಮಹಾದ್ವಾರವನ್ನು ತೆರೆಯದೆ ಇರುವುದರಿಂದ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಭಾಗ್ಯ ಇಂದು ಭಕ್ತರಿಗೆ ಸಿಕ್ಕಿಲ್ಲ. ಕೇಂದ್ರ ಹಾಗೂ ಆಂಧ್ರ ಸರ್ಕಾರದ ಸೂಚನೆ ಹಿನ್ನೆಲೆ ಇಂದಿನಿಂದ ದರ್ಶನಕ್ಕೆ ಮುಕ್ತವಾಗಬೇಕಿತ್ತು. ಆದರೆ ಬಾಗಿಲು ತೆರೆಯದೆ ಇರುವುದು ಭಕ್ತರಲ್ಲಿ ನಿರಾಸೆ ಮೂಡಿಸಿದೆ.
ಮಂತ್ರಾಲಯದ ಸಿಬ್ಬಂದಿ ಹಾಗೂ ಸ್ಥಳೀಯರಿಗೆ ಮಾತ್ರ ಅವಕಾಶ
ಮಂತ್ರಾಲಯ ಮಠದ ಸಿಬ್ಬಂದಿ ಹಾಗೂ ಸ್ಥಳೀಯರಿಗೆ ಮಾತ್ರ ರಾಯರ ವೃಂದಾವನ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಹೊರರಾಜ್ಯ ಹಾಗೂ ಬೇರೆ ಜಿಲ್ಲೆಯ ಭಕ್ತರಿಗೆ ಜೂನ್ 15ರ ನಂತರ ರಾಯರ ದರ್ಶನಕ್ಕೆ ಅವಕಾಶ ಎಂದು ಹೇಳಲಾಗಿತ್ತು. ಆದರೆ ಮಂತ್ರಾಲಯದಲ್ಲಿ ದರ್ಶನಕ್ಕೆ ಪೂರ್ವ ತಯಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರಾಯರ ಮಠದ ಬಾಗಿಲು ತೆಗೆಯಲಿಲ್ಲ.
ಹೊರಗಡೆಯಿಂದಲೇ ರಾಯರಿಗೆ ನಮಿಸಿದ ಭಕ್ತರು
ರಾಯರ ವೃಂದಾವನ ದರ್ಶನಕ್ಕೆ ಬಂದವರಿಗೆ ದರ್ಶನ ಭಾಗ್ಯ ಸಿಕ್ಕಿಲ್ಲ. ಹೀಗಾಗಿ ಭಕ್ತರು ಹೊರಗಡೆಯಿಂದಲೇ ರಾಯರಿಗೆ ನಮಿಸಿ ಮರಳುತ್ತಿದ್ದಾರೆ. ಮಠದ ಆಡಳಿತ ಮಂಡಳಿಯ ಸಭೆಯ ನಂತರ ಬಾಗಿಲು ತೆಗೆಯುವ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ಮಠದ ಮೂಲಗಳು ಹೇಳಿವೆ.
ಎಲ್ಲಾ ದೇವಸ್ಥಾನಗಳಿಗೂ ಅವಕಾಶ
ರಾಯಚೂರು ನಗರದ ಚಂದ್ರಮೌಳೇಶ್ವರ ದೇವಾಲಯ, ನಂದೀಶ್ವರ ದೇವಾಲಯ, ದೇವಸುಗೂರಿನ ಸೂಗುರೇಶ್ವರ ದೇವಾಲಯ ಸೇರಿದಂತೆ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲೂ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಯಾವುದೇ ಹರಕೆ, ಪ್ರಸಾದ ವಿತರಣೆಗೆ ಅವಕಾಶ ನೀಡಿಲ್ಲ. ಪೂಜೆ, ಅಭಿಷೇಕಗಳು ಮೊದಲಿನಂತೆ ನಡೆಯುತ್ತಿವೆ.