ರಾಯಚೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಬಂಧಿಸಿದ್ದ ಯುವಕ ಸಾವು; ಪಿಎಸ್ ಐ ಅಮಾನತು
ರಾಯಚೂರು, ಸೆಪ್ಟೆಂಬರ್ 16: ಗಣೇಶ ವಿಸರ್ಜನೆ ಸಂದರ್ಭ ಬಂಧಿಸಲಾಗಿದ್ದ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಈ ಸಂಬಂಧ ರಾಯಚೂರು ಜಿಲ್ಲೆಯ ಗಬ್ಬೂರು ಪೊಲೀಸ್ ಠಾಣೆ ಪಿಎಸ್ ಐ ಮುದ್ದುರಂಗಸ್ವಾಮಿ ಹಾಗೂ ಇಬ್ಬರು ಕಾನ್ ಸ್ಟೆಬಲ್ ಗಳನ್ನು ಅಮಾನತು ಮಾಡಲಾಗಿದೆ.
ಪೊಲೀಸ್ ವಶದಲ್ಲಿದ್ದ ಮಗ ತಾಯಿಯ ಎದುರೇ ಸಾವು: ಠಾಣೆಯ ವಿರುದ್ಧ ದೂರು
ಗಣೇಶ ವಿಸರ್ಜನೆ ಸಂದರ್ಭ ಅತಿರೇಕ ವರ್ತನೆ ತೋರಿದ್ದ ಎಂಬ ಕಾರಣಕ್ಕೆ ಶಿವು ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ನಂತರ ಆತನನ್ನು ರಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಪಿಎಸ್ ಐ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶಿವು ಸಾವನ್ನಪ್ಪಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವು ಸಾವಿನಿಂದ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸ್ ಠಾಣೆ ಮೇಲೆ, ಪಿಎಸ್ ಐ, ಸಿಪಿಐ ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಿದ್ದರು. ಇದೀಗ ಪಿಎಸ್ ಐ ಮುದ್ದುರಂಗಸ್ವಾಮಿ ಹಾಗೂ ಕಾನ್ ಸ್ಟೆಬಲ್ ಗಳಾದ ಬಾಲಪ್ಪ ಮತ್ತು ಪಂಚಮುಖಿ ಎಂಬವರನ್ನು ಅಮಾನತುಗೊಳಿಸಿ ಪೊಲೀಸ್ ವರಿಷ್ಠಾಧಿಕಾರಿ ಡಾ.ವೇದಮೂರ್ತಿ ಆದೇಶ ಹೊರಡಿಸಿದ್ದಾರೆ.