ರಾಯಚೂರು: ಕೋತಿಗಳ ಕಾಟದಿಂದ ಬೇಸತ್ತ ಗ್ರಾಮಸ್ಥರಿಂದ ಊರು ತೊರೆಯುವ ನಿರ್ಧಾರ
ರಾಯಚೂರು, ಜು. 03: ಕೋತಿಗಳ ಕಾಟದಿಂದ ಬೇಸತ್ತ ಜನರು, ಅವುಗಳಿಂದ ಆಗುವ ತೊಂದರೆಯಿಂದ ತಪ್ಪಿಸಿಕೊಳ್ಳಲು ನಾನಾ ಕಸರತ್ತು ಮಾಡಿ ಯಾವುದೂ ಪ್ರಯೋಜನವಾಗದ ಕಾರಣ ಊರನ್ನೇ ಬಿಡುವ ನಿರ್ಧಾರಕ್ಕೆ ಬಂದಿರುವ ಘಟನೆ ರಾಯಚೂರಿನ ಪಲವಲದೊಡ್ಡಿ ಗ್ರಾಮದಲ್ಲಿ ನಡೆದಿದೆ.
Recommended Video
ರಾಯಚೂರಿನ ಪಲವಲದೊಡ್ಡಿ ಗ್ರಾಮದಲ್ಲಿ ಜನರಿಗಿಂತ ಕೋತಿಗಳ ಸಂಖ್ಯೆಯೇ ಅಧಿಕವಾಗಿದೆ. ಈ ಕೋತಿಗಳು ಗ್ರಾಮದಲ್ಲಿರುವ ನಿವಾಸಗಳಿಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ದೋಚುತ್ತಿದೆ.
ಯುಕೆಯಲ್ಲಿ ಮಂಕಿಪಾಕ್ಸ್ನ 2 ಪ್ರಕರಣ ಪತ್ತೆ: ಈ ರೋಗದ ಬಗ್ಗೆ ಇಲ್ಲಿದೆ ವಿವರ
ಈ ಕೋತಿಗಳು ತೆಂಗು, ಬಾಲೆ ಮೊದಲಾದ ತೋಟಗಳಿಗೆ ಹಾನಿ ಮಾಡುತ್ತಿರುವುದಲ್ಲದೇ, ನಾನಾ ಹಣ್ಣು, ತರಕಾರಿಗಳ ಗಿಡಗಳನ್ನು ನಾಶ ಮಾಡುತ್ತಿದೆ. ಹಾಗೆಯೇ ಕೆಲವೆಡೆ ವಿದ್ಯುತ್, ಟಿವಿ ಕೇಬಲ್ ವಯರ್ಗಳನ್ನು ಕಚ್ಚಿ ತುಂಡರಿಸುತ್ತಿದೆ. ಆದರೆ ಈ ಕೋತಿಗಳ ಕಾಟ ಇಷ್ಟಕ್ಕೆ ನಿಂತಿಲ್ಲ. ಇಷ್ಟು ಮಾತ್ರವಲ್ಲದೇ, ಮಕ್ಕಳ ಮೈಗಳನ್ನು ಈ ಕೋತಿಗಳು ಪರಚುವ ಯತ್ನ ಮಾಡುತ್ತಿದೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಇನ್ನು ಈ ಸಮಸ್ಯೆಯ ಬಗ್ಗೆ ಪಲವಲದೊಡ್ಡಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೆ ಇದರಿಂದಾಗಿ ತಮಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಹಾಗೆಯೇ ಮನೆಗೆ ಇಷ್ಟು ಎಂದು ಪಟ್ಟಿ ಮಾಡಿ ಹಣ ನೀಡುತ್ತೇವೆ, ಕೋತಿಯನ್ನು ಹಿಡಿದುಕೊಂಡು ಹೋಗಿ ಎಂದರೂ ಯಾರೂ ಮುಂದೆ ಬರುತ್ತಿಲ್ಲ. ಈ ಕೋತಿಗಳು ಈಗ ಗ್ರಾಮಸ್ಥರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಕೋತಿಗಳ ಕಾಟಾದಿಂದ ಬೇಸತ್ತ ಗ್ರಾಮದ ಜನರು ಸಾಮೂಹಿಕವಾಗಿ ಊರು ತೊರೆಯುವ ನಿರ್ಧಾರ ಮಾಡಿದ್ದಾರೆ.
ಈ ಬಗ್ಗೆ ಒನ್ಇಂಡಿಯಾಗೆ ಪ್ರತಿಕ್ರಿಯೆ ನೀಡಿರುವ ಗ್ರಾಮಸ್ಥರಾದ ನರಸಿಂಗರಾವ್, ''ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಎರಡು ವರ್ಷಕ್ಕೂ ಅಧಿಕ ಕಾಲವಾಗಿದೆ. ಆದರೆ ಯಾವುದೇ ಕ್ರಮವನ್ನು ಈವರೆಗೂ ಕೈಗೊಂಡಿಲ್ಲ. ಈ ಹಿನ್ನೆಲೆ ನಾವು ಊರು ಬಿಟ್ಟು, ಹೊಲದಲ್ಲಿ ಅಥವಾ ಬೇರೆ ಊರಲ್ಲಿ ಗುಡಿಸಲು ಮಾಡಿ ಅಲ್ಲೇ ವಾಸಿಸಬೇಕು ಎಂದು ನಿರ್ಧಾರ ಮಾಡಿದ್ದೇವೆ. ಈ ಬಗ್ಗೆ ಅರಣ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಅಧಿಕಾರಿಗಳು ಗ್ರಾಮಕ್ಕೂ ಬಂದಿಲ್ಲ. ನಾವು ಕೊಟ್ಟ ಪತ್ರವನ್ನು ಕಸದ ಬುಟ್ಟಿಗೆ ಹಾಕಿರಬೇಕು,'' ಎಂದು ಹೇಳಿದ್ದಾರೆ.
''ಕೋತಿ ಮನೆಗೆ ಬಂದು ಮನೆಯೊಳಗೆ ಇರುವ ಎಲ್ಲಾ ವಸ್ತುಗಳನ್ನು ಹೊತ್ತೊಯ್ಯುತ್ತದೆ. ಮಕ್ಕಳ ಕೈಯಲ್ಲಿದ್ದ ತಿಂಡಿ, ವಸ್ತುಗಳನ್ನು ಎಳೆದು ಕೊಂಡೊಯ್ಯುತ್ತದೆ. ಟಿವಿ, ವಿದ್ಯುತ್ ವಯರ್ಗಳನ್ನು ತುಂಡರಿಸುತ್ತದೆ. ಯಾವುದೂ ಸಾಮಾಗ್ರಿಗಳು ಉಳಿಯುವುದಿಲ್ಲ. ಎಲ್ಲಿಗೂ ನಾವು ಹೋಗುವಂತಿಲ್ಲ. ಮನೆಯಲ್ಲಿ ಯಾರದರೂ ಒಬ್ಬರು ಕಾದು ಕೂರಲೇ ಬೇಕಾಗುತ್ತದೆ. ನಮ್ಮ ಪರಿಸ್ಥಿತಿ ಈ ರೀತಿ ಆಗಿಬಿಟ್ಟಿದೆ,'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ''ಈ ಸಮಸ್ಯೆಗೆ ಸರಿಯಾದ ಕ್ರಮವನ್ನು ಕೈಗೊಳ್ಳಬೇಕು. ಕೋತಿಗಳ ಕಾಟವನ್ನು ತಪ್ಪಿಸಬೇಕು,'' ಎಂದು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)