ವೈಟಿಪಿಎಸ್ ಖಾಸಗೀಕರಣಕ್ಕೆ ಭೂಸಂತ್ರಸ್ಥರಿಂದ ವಿರೋಧ
ರಾಯಚೂರು, ಮೇ 17: ರಾಯಚೂರು ಜಿಲ್ಲೆಯಲ್ಲಿರುವ ಸೂಪರ್ ಕ್ರಿಟಿಕಲ್ ಥರ್ಮಲ್ ವಿದ್ಯುತ್ ಕೇಂದ್ರ (ವೈಟಿಪಿಎಸ್) ನ್ನು ಸರ್ಕಾರ ಖಾಸಗೀಕರಣ ಮಾಡುತ್ತಿರುವುದಕ್ಕೆ ಭೂಸಂತ್ರಸ್ಥರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದಿನ ಸರ್ಕಾರ ಪವರ್ ಮೇಕ್ ಕಂಪನಿಗೆ ಮೆಂಟೇನೆನ್ಸ್ ಮತ್ತು ಆಪರೇಷನ್ ಖಾಸಗೀಕರಣಕ್ಕೆ ಮುಂದಾಗಿತ್ತು. ಭೂಸಂತ್ರಸ್ಥರ ಹೋರಾಟ ಹಿನ್ನೆಲೆ ತಾತ್ಕಾಲಿಕವಾಗಿ ಈ ಒಪ್ಪಂದವನ್ನು ರದ್ದು ಮಾಡಲಾಗಿತ್ತು.
ಈಗ ಪುನಃ ಸರ್ಕಾರ ವಿದ್ಯುತ್ ಕೇಂದ್ರವನ್ನು ಖಾಸಗಿಯವರಿಗೆ ನೀಡಲು ಮುಂದಾಗಿದೆ ಎಂದು ಹೋರಾಟಗಳು ಆರಂಭವಾಗಿವೆ. ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಭೂಸಂತ್ರಸ್ಥರು ಎಚ್ಚರಿಕೆ ನೀಡಿದ್ದಾರೆ.
ಇದುವರೆಗೆ ವಿದ್ಯುತ್ ಕೇಂದ್ರಕ್ಕೆ 13,250 ಕೋಟಿ ರುಪಾಯಿ ಖರ್ಚು ಮಾಡಿದ್ದಾರೆ. 1600 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಕೇಂದ್ರವನ್ನು 2018 ರಲ್ಲೇ ಆರಂಭಿಸಬೇಕಾಗಿತ್ತು ಆದರೆ ಇನ್ನೂ ಆರಂಭಿಸಿಲ್ಲ.
ಸರ್ಕಾರವು ಸ್ಥಳೀಯರಿಗೆ, ಭೂಸಂತ್ರಸ್ಥರಿಗೆ ಉದ್ಯೋಗ ಕೊಡುತ್ತೇವೆ ಎಂದು ಭರವಸೆ ನೀಡಿದ್ದಕ್ಕೆ ಕಾರ್ಯಾರಂಭಕ್ಕೆ ಎಲ್ಲರೂ ಒಪ್ಪಿಗೆ ಕೊಟ್ಟಿದ್ದರು. ಈಗ ಪವರ್ ಮೇಕ್ ಕಂಪನಿಗೆ ನೀಡಲು ಮುಂದಾಗಿದ್ದು, ಇದಕ್ಕೆ ನಾವು ಬಿಡುವುದಿಲ್ಲ ಎಂದು ಸ್ಥಳೀಯ ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.