ರಾಯಚೂರಿನ ಕೆಮಿಕಲ್ ಕಂಪನಿಯಲ್ಲಿ ರಾಸಾಯನಿಕ ಸೋರಿಕೆ; ವ್ಯಕ್ತಿ ಸಾವು
ರಾಯಚೂರು, ಅಕ್ಟೋಬರ್ 21: ರಾಯಚೂರಿನ ವಡ್ಲೂರು ಗ್ರಾಮದ ಬಳಿ ಇರುವ ರಾಯಚೂರು ಲ್ಯಾಬೊರೇಟರಿ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಸಿಪಿಪಿ ಎಂಬ ರಾಸಾಯನಿಕವು ಸೋರಿಕೆಯಾಗಿ, ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಘಟನೆಯಲ್ಲಿ ಮೂರು ಮಂದಿ ಅಸ್ವಸ್ಥರಾಗಿದ್ದಾರೆ.
ಅಕ್ಟೋಬರ್ 20ರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ ನೆರೆ ರಾಜ್ಯ ಹೈದರಾಬಾದ್ ನ ಲಿಂಗಮಪಲ್ಲಿ ಮೂಲದ ಲಕ್ಷ್ಮಣ (28) ಎಂಬುವರು ಮೃತಪಟ್ಟಿದ್ದಾರೆ. ಇಂದಪೂರಿನ ಅರವಿಂದ (24), ದೇವಸಗೂರಿನ ಅನಿಲ (25) ಹಾಗೂ ಚಿಕ್ಕಸೂಗೂರಿನ ಮಾರುಫ್ (22) ಎಂಬುವರು ರಾಸಾಯನಿಕದಿಂದಾಗಿ ಅಸ್ವಸ್ಥರಾಗಿದ್ದು, ರಾತ್ರಿಯೇ ಸ್ಥಳೀಯ ಆಸ್ಪತ್ರೆಗೆ ಈ ಮೂವರನ್ನು ದಾಖಲಿಸಲಾಗಿತ್ತು. ಇದರಲ್ಲಿ ಇಬ್ಬರು ಚೇತರಿಸಿಕೊಂಡಿದ್ದಾರೆ. ಒಬ್ಬರು ಇನ್ನೂ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.
ವೈಜಾಗ್ ಅನಿಲ ಸೋರಿಕೆ: ಎಲ್ ಜಿ ಪಾಲಿಮರ್ ಸಿಇಒ ಬಂಧನ
Recommended Video
ಲ್ಯಾಬೊರೇಟರಿಯಲ್ಲಿ ಸಿಪಿಪಿ ಎಂಬ ರಾಸಾಯನಿಕವನ್ನು ನಿನ್ನೆ ಲೋಡ್ ಮಾಡುವ ಸಂದರ್ಭದಲ್ಲಿ ರಾಸಾಯನಿಕವು ಸೋರಿಕೆಯಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ಘಟನೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ ಈ ಸಂಬಂಧ ಯಾವುದೇ ಪ್ರಕರಣವನ್ನು ದಾಖಲಿಸಲಾಗಿಲ್ಲ.