ಪ್ರವೀಣ್ ಕುಟುಂಬಕ್ಕೆ ಮಾತ್ರ ಪರಿಹಾರ: ಸರ್ಕಾರದ ಕಿವಿ ಹಿಂಡಿದ ಮಂತ್ರಾಲಯ ಶ್ರೀಗಳು
ರಾಯಚೂರು, ಆಗಸ್ಟ್ 2: ಹತ್ಯೆಯಾದ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ ತೋರಬಾರದೆಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ಚಾತುರ್ಮಾಸ ವೃತದಲ್ಲಿರುವ ಶ್ರೀಗಳು ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್ ನೆಟ್ಟಾರು ಕುಟುಂಬದವರನ್ನು ಮುಖ್ಯಮಂತ್ರಿಗಳು ಭೇಟಿಯಾಗಿ, ಪರಿಹಾರ ನೀಡಿದ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, "ನಾವು ಒಂದು ವಿಚಾರವನ್ನು ಅರಿತುಕೊಳ್ಳಬೇಕು, ಪ್ರಾಣ ಕಳೆದುಕೊಂಡವರು ಮನುಷ್ಯರು, ಅವರೆಲ್ಲರೂ ಸಮಾನರು. ಪರಿಹಾರ ನೀಡುವ ವಿಚಾರದಲ್ಲಿ ಸರ್ಕಾರ ತಾರತಮ್ಯ ಮಾಡಬಾರದೆಂದು" ಶ್ರೀಗಳು ಹೇಳುವ ಮೂಲಕ, ಸರಕಾರದ ಕಿವಿ ಹಿಂಡಿದ್ದಾರೆ.
ಮಂಗಳೂರು ಕೊಲೆ ಪ್ರಕರಣ, ಹಿಂದೂ-ಮುಸ್ಲಿಂ ನಡುವೆ ಬಿಜೆಪಿ ತಾರತಮ್ಯ : ಡಿಕೆಶಿ ಖಂಡನೆ
"ಸರ್ಕಾರಕ್ಕೆ ನನ್ನ ಮನವಿ ಏನೆಂದರೆ, ಹತ್ಯೆಯಾದ ಇತರ ಕುಟುಂಬಕ್ಕೂ ಪರಿಹಾರವನ್ನು ನೀಡಲಿ. ಹತ್ಯೆಯಾದ ಕುಟುಂಬಕ್ಕೆ ಹಣಕಾಸಿನ ಸಹಾಯ ಮಾಡುವುದು ಅಥವಾ ಕೆಲಸ ನೀಡುವುದು ಖಂಡಿತ ಪರ್ಯಾಯ ಮಾರ್ಗವಲ್ಲ. ಜೀವಕ್ಕೆ ಹಣದಿಂದ ತುಲನೆ ಮಾಡುವುದು ತಪ್ಪು"ಎಂದು ಶ್ರೀಗಳು ಹೇಳಿದ್ದಾರೆ.
"ದೇಶ ಅಭಿವೃದ್ದಿ ಪಥದ ಸಾಗಬೇಕಾದರೆ, ಶಾಂತಿ, ಸಹಬಾಳ್ವೆ ಮುಖ್ಯವಾಗುತ್ತದೆ. ಒಂದು ಸಮುದಾಯದವರು ಇನ್ನೊಂದು ಕೋಮಿನವರ ಮೇಲೆ ಆಕ್ರಮಣ ಮಾಡುವುದು ಅಥವಾ ದಬ್ಬಾಳಿಕೆ ನಡೆಸುವುದು ತಪ್ಪು. ಇದನ್ನು ಸರ್ಕಾರ ನಿಯಂತ್ರಿಸಬೇಕು"ಎಂದು ಮಂತ್ರಾಲಯ ಪೀಠದ ಶ್ರೀಗಳು ಹೇಳಿದ್ದಾರೆ.
ಹತ್ಯೆಯಾದ ಬಿಜೆಪಿ ಯುವಮೋರ್ಚಾ ಘಟಕದ ಸದಸ್ಯ ಪ್ರವೀಣ್ ಮನೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬೊಮ್ಮಾಯಿಯವರು, ಕೊಲೆಯಾಗಿದ್ದ ಮುಸ್ಲಿಂ ಯುವಕರಿಬ್ಬರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿರಲಿಲ್ಲ. ಇದು, ವ್ಯಾಪಕ ಚರ್ಚೆಗೆ ಒಳಗಾಗಿತ್ತು.
"ಕೊಲೆಯಾದ ಹಿಂದುಗಳ ಮನೆಗೆ ಎಲ್ಲರೂ ಹೋಗಿ ಸಾಂತ್ವನ ಹೇಳುತ್ತಿದ್ದಾರೆ, ಪರಿಹಾರ ನೀಡುತ್ತಿದ್ದಾರೆ. ಆದರೆ ಮುಸ್ಲಿಂ ಬಾಂಧವರ ಮನೆಗೆ ಹೋಗುತ್ತಿಲ್ಲ. ಕರಾವಳಿಯಲ್ಲಿ ಹಿಂದೂಗಳ ಕೊಲೆ ನಡೆದಿದೆ, ಹಾಗೆಯೇ ಮುಸ್ಲಿಂ ಯುವಕರ ಕೊಲೆ ನಡೆದಿದೆ. ಕೊಲೆ ಯಾರದ್ದೇ ಆಗಿದ್ದರೂ ನಾವು ಖಂಡಿಸುತ್ತೇವೆ. ಸರ್ಕಾರ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡಬೇಕು" ಎಂದು ಡಿ.ಕೆ.ಶಿವಕುಮಾರ್ ಸರ್ಕಾರದ ದ್ವಂದ್ವ ನೀತಿಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದರು.
Recommended Video