'ರಾಯಚೂರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿಲ್ಲ': ಬಜೆಟ್ ಬಗ್ಗೆ ಕಾಂಗ್ರೆಸ್ ಅಸಮಾಧಾನ
ರಾಯಚೂರು ಮಾರ್ಚ್ 4: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022-2023 ಸಾಲಿನ ಬಜೆಟ್ ಮಂಡಿಸಿದರು. ಆದರೆ ಇದಕ್ಕೆ ಸಾಕಷ್ಟು ಪರ ವಿರೋಧಗಳು ವ್ಯಕ್ತವಾಗಿವೆ. ರಾಯಚೂರಿನಲ್ಲಿ 186 ಕೋಟಿ ರೂ. ವೆಚ್ಚದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆ ಮಾಡಲು ಅನುದಾನವನ್ನು ನೀಡಲಾಗಿರುವುದು ಸ್ವಾಗತಾರ್ಹ ಎಂದು ಬಿಜೆಪಿ ಶಾಸಕ ಶಿವರಾಜ ಪಾಟೀಲ್ ಅವರು ಹೇಳಿದ್ದಾರೆ. ಬಿಜೆಟ್ ಬಗ್ಗೆ ಕೆಲವರು ಮೊಸರಿನಲ್ಲಿ ಕಲ್ಲು ಹುಡುಕುವಂತ ಕೆಲಸ ಮಾಡುತ್ತಾರೆ. ಆದರೆ ಬಜೆಟ್ ನಮಗೆ ತೃಪ್ತಿದಾಯಕವಾಗಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಇಂದು 2022-2023 ಸಾಲಿನ ಬಜೆಟ್ ಮಂಡಿಸಿದೆ. ಇದರಲ್ಲಿ ರಾಯಚೂರು ಭಾಗಕ್ಕೆ 186 ಕೋಟಿ ರೂ. ವೆಚ್ಚದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆಗೆ ಆಧ್ಯತೆ ನೀಡಲಾಗಿದೆ. ಇದರಿಂದ ರಾಯಚೂರು ಅಭಿವೃದ್ಧಿಯತ್ತ ಸಾಗಲು ಅನುಕೂಲವಾಗುತ್ತದೆ. ಎಲ್ಲಾ ದೊಡ್ಡ ಇಂಡಸ್ಟ್ರಿಗಳಿಗೆ ವ್ಯವಹರಿಸಲು ಇದು ಅನುವು ಮಾಡಿಕೊಡುತ್ತದೆ ಎಂದು ಶಿವರಾಜ ಪಾಟೀಲ್ ಹೇಳಿದರು.
ಈ ವರ್ಷದ ಬಜೆಟ್ ಇದೇ ವರ್ಷ ಮಾಡಲೇಬೇಕು. ಇಲ್ಲವಾದರೆ ಆ ಬಜೆಟ್ಗೆ ಬೆಲೆ ಇರುವುದಿಲ್ಲ. ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಡಿಎಂಎಫ್ ಫಂಡಿನಲ್ಲಿ ಇದಕ್ಕೆ ಹಣವನ್ನು ನೀಡಲಾಗುತ್ತಿಲ್ಲ. ಒಂದು ವೇಳೆ ನೀಡಿದರು 186 ಕೋಟಿ ರೂ. ನೀಡಲು ಆಗುವದಿಲ್ಲ. ಇದು ಶೇಕಡ ಮೂವತ್ತರಷ್ಟು ಮಾತ್ರ ನೀಡಬಹುದು. ರಾಜ್ಯ ಸರ್ಕಾರ ಮಾತ್ರ ಪೂರ್ಣ ಅನುದಾನ ನೀಡಲು ಸಾಧ್ಯ. ಹೀಗಾಗಿ ಈ ವಿಚಾರವನ್ನು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ಹೀಗಾಗಿ ರಾಯಚೂರಿಗೆ ಗ್ರೀನ್ ಫೀಲ್ಡ್ ವಿಮಾನ ಸ್ಥಾಪನೆ ಬಗ್ಗೆ ಮಾತನಾಡುವವರು ಮೊಸರಿನಲ್ಲಿ ಕಲ್ಲು ಹುಡುಕುವಂತ ಕೆಲಸ ಮಾಡುತ್ತಿದ್ದಾರೆ ಎಂದರು.
'ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿಲ್ಲ'
ವಿಮಾನ ನಿಲ್ದಾಣ ಒಂದೇ ಅಲ್ಲ. ರಾಯಚೂರು ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನ ನೀಡಬೇಕಿತ್ತು. ನೂರು ಕೋಟಿ ಅನುದಾನ ಕೇಳಲಾಗಿತ್ತು. ಅದರಲ್ಲಿ ಹದಿನೈದು ಕೋಟಿ ಘೋಷಿಸಿದ್ದಾರೆ. ಅದು ಎಲ್ಲೂ ಕೂಡ ಸಾಲುವುದಿಲ್ಲ. ರೈತರ ಸಮಸ್ಯೆ ತೀರಿಸಬೇಕು ಅಂದರೆ ನೀರಾವರಿ ಯೋಜನೆಗಳಿಗೆ ಒತ್ತು ನೀಡಬೇಕಿತ್ತು. ಈ ಭಾಗದ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಲಾಗಿಲ್ಲ. ನವಿಲು ಜಲಾಶಯಕ್ಕೆ ಅನುದಾನ ನಿಖರವಾಗಿ ತೋರಿಸಿಲ್ಲ.
ಜೊತೆಗೆ ಸಿಂಧನೂರು ರಾಯಚೂರು ರೈಲ್ವೆ ಲೈನ್ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿತ್ತು. ಅದನ್ನೂ ಬಜೆಟ್ ನಲ್ಲಿ ಮಂಡನೆ ಮಾಡಿಲ್ಲ. ಹೀಗೆ ಹಲವಾರು ಸಮಸ್ಯೆಗಳು ಬಜೆಟ್ ಅನುದಾನದಲ್ಲಿ ಕೈಬಿಟ್ಟು ಹೋಗಿವೆ. ರಾಯಚೂರು ಭಾಗದ ಜನರನ್ನು ರಾಜ್ಯ ಸರ್ಕಾರ ನಿರಾಸೆಗೊಳಿಸಿದೆ ಎಂದು ರಾಜ್ಯ ಕಾಂಗ್ರೆಸ್ ಕೆಪಿಸಿಸಿ ವಕ್ತಾರ ವಸಂತ್ ಕುಮಾರ್ ಹೇಳಿದರು.