ಆಗ ಕೆಎಸ್ಆರ್ಟಿಸಿ ಬಸ್ ಚಾಲಕ, ಈಗ ಕಾಂಗ್ರೆಸ್ ಶಾಸಕ!
Recommended Video
ರಾಯಚೂರು, ಮೇ 21 : ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ ಹೆಸರು ಈಗ ಎಲ್ಲರಿಗೂ ಚಿರಪರಿಚಿತ. ರಾಷ್ಟ್ರೀಯ ಮಾಧ್ಯಮಗಳಲ್ಲೂ ಎರಡು ದಿನಗಳ ಹಿಂದೆ ಅವರ ಹೆಸರು ಕೇಳಿಬಂದಿತ್ತು.
ಮಾಜಿ ಸಚಿವ ಜನಾರ್ದನ ರೆಡ್ಡಿ ಬಸನಗೌಡ ದದ್ದಲ ಅವರಿಗೆ ಬಿಜೆಪಿ ಬೆಂಬಲಿಸಲು ಆಮಿಷ ವೊಡ್ಡಿದ್ದರು. ಈ ಕುರಿತ ಆಡಿಯೋ ಟೇಪ್ ಅನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ನಂತರ ಅವರ ಹೆಸರು ಎಲ್ಲರಿಗೂ ತಿಳಿದಿದೆ.
ಆಗ ರಾಜಕಾರಣಿಗಳ ಗನ್ ಮ್ಯಾನ್, ಈಗ ಜೆಡಿಎಸ್ ಶಾಸಕ!
ಈಗ ಶಾಸಕರಾಗಿರುವ ಬಸನಗೌಡ ದದ್ದಲ ಅವರು ಹಿಂದೆ ಕೆಎಸ್ಆರ್ಟಿಸಿ ಬಸ್ ಚಾಲಕರಾಗಿದ್ದರು. 2008ರ ತನಕ ಅವರು ಚಾಲಕರಾಗಿ ಕೆಲಸ ಮಾಡಿದ್ದರು. ಈಗ ಚುನಾವಣೆಯಲ್ಲಿ ಗೆದ್ದು, ಶಾಸಕರಾಗಿ ಜನ ಸೇವೆ ಮಾಡಲು ಸಿದ್ಧರಾಗಿದ್ದಾರೆ.
ರಾಜಕೀಯಕ್ಕೆ ಬಂದರು : 2008ಕ್ಕೂ ಮೊದಲು ಬಸನಗೌಡ ದದ್ದಲ ಅವರು ಸಕ್ರಿಯ ರಾಜಕಾರಣದಲ್ಲಿ ಇರಲಿಲ್ಲ. ಅವರು ಕೆಎಸ್ಆರ್ಟಿಸಿ ಬಸ್ ಓಡಿಸುತ್ತಿದ್ದರು. ಅವರ ಪತ್ನಿ ಬಿಜೆಪಿಯಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು.
ಅಖಾಡಕ್ಕಿಳಿದ ಜನಾರ್ದನ ರೆಡ್ಡಿ, ಕಾಂಗ್ರೆಸ್ ಶಾಸಕನಿಗೆ ಗಾಳ?
ರಾಯಚೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದ ಬಸವನಗೌಡ ಬಾಗ್ಯವತ್ ಮೂಲಕ ಬಸನಗೌಡ ದದ್ದಲ ರಾಜಕಾರಣದ ಪ್ರವೇಶ ಮಾಡಿದರು. ಬಸವನಗೌಡ ಬಾಗ್ಯವತ್ ಮತ್ತು ಬಸನಗೌಡ ದದ್ದಲ ಅವರು ಸ್ನೇಹಿತರು.
2008ರಲ್ಲಿ ಚಾಲಕ ವೃತ್ತಿಗೆ ರಾಜೀನಾಮೆ ನೀಡಿದ ಬಸನಗೌಡ ದದ್ದಲ ಅವರು ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಕಾಂಗ್ರೆಸ್ನ ರಾಯಪ್ಪ ನಾಯಕ್ ವಿರುದ್ಧ ಸೋಲು ಕಂಡರು.
ಚುನಾವಣೆಯಲ್ಲಿ ಸೋತರೂ ಸಹ ಬಸನಗೌಡ ದದ್ದಲ ಅವರು ಸಕ್ರಿಯರಾಗಿ ಜನಪರ ಕೆಲಸಗಳಲ್ಲಿ ತೊಡಗಿಸಿಕೊಂಡರು. ಆದರೆ, 2013ರ ಚುನಾವಣೆಯಲ್ಲಿ ತಿಪ್ಪರಾಜು ಹವಾಲ್ದಾರ್ ಅವರು ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆದರು.
2018ರ ಚುನಾವಣೆಯಲ್ಲಿಯೂ ತಿಪ್ಪರಾಜು ಹವಾಲ್ದಾರ್ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದನ್ನು ಅರಿತ ಬಸನಗೌಡ ದದ್ದಲ ಅವರು ಕಾಂಗ್ರೆಸ್ ಸೇರಿದರು. ಚುನಾವಣೆಯಲ್ಲಿ66,656 ಮತಗಳನ್ನು ಪಡೆದು ತಿಪ್ಪರಾಜು ಹವಾಲ್ದಾರ್ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದರು.