ರಾಯಚೂರಿನಲ್ಲಿ ಸತತ ಮಳೆಗೆ ಮಸ್ಕಿ ಜಲಾಶಯ ಭರ್ತಿ
ರಾಯಚೂರು, ಅಕ್ಟೋಬರ್ 21: ರಾಯಚೂರಿನಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮಸ್ಕಿ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ ಸದ್ಯಕ್ಕೆ 500 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಮಸ್ಕಿ ಜಲಾಶಯದ ಮೇಲ್ಭಾಗದಲ್ಲಿ ನೀರು ಹರಿಯುತ್ತಿದ್ದು, ಹೆಚ್ಚುವರಿ ನೀರನ್ನು ಹಳ್ಳಕ್ಕೆ ಹರಿಸಲಾಗಿದೆ. ಇದರಿಂದ ಮಸ್ಕಿ ಹಳ್ಳವೂ ತುಂಬಿ ಹರಿಯುತ್ತಿದ್ದು, ಸುತ್ತಮುತ್ತಲ ಗ್ರಾಮಗಳಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ: ಪ್ರವಾಹದಲ್ಲಿ ಕೊಚ್ಚಿ ಹೋದ ಯುವಕ
ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ರಾಯಚೂರು ಜಿಲ್ಲೆಯಲ್ಲೂ ನಿರಂತರವಾಗಿ ಮಳೆಯಾಗುತ್ತಿದೆ. ಅಕ್ಟೋಬರ್ 11ರಂದು ಮಸ್ಕಿ ನಾಲೆಯ ಜಲಾನಯನ ಪ್ರದೇಶಗಳಾದ ಗಜೇಂದ್ರಗಡ, ಕುಷ್ಟಗಿ ಭಾಗದಲ್ಲಿ ಭಾರೀ ಪ್ರಮಾಣ ಮಳೆಯಾಗಿದ್ದರಿಂದ ಮಸ್ಕಿ ಅಣೆಕಟ್ಟೆಯಿಂದ ನೀರನ್ನು ಹೊರ ಬಿಡಲಾಗಿತ್ತು. ಈ ಕಿರು ಜಲಾಶಯದ ನಾಲ್ಕು ಗೇಟ್ ಗಳ ಮೂಲಕ 1,600 ಕ್ಯೂಸೆಕ್ಸ್ ನೀರು ಹೊರ ಬಿಡಲಾಗಿದ್ದು, ಮಸ್ಕಿ ಹಳ್ಳದ ಕಡೆ ಬಹಿರ್ದೆಸೆಗೆ ತೆರಳಿದ್ದ ಇಬ್ಬರು ಯುವಕರು ಸಿಲುಕಿಕೊಂಡಿದ್ದರು. ಅದರಲ್ಲಿ ಒಬ್ಬರನ್ನು ರಕ್ಷಣೆ ಮಾಡಿದ್ದು, ಮತ್ತೊಬ್ಬರು ಕೊಚ್ಚಿ ಹೋಗಿದ್ದರು. ಶೋಧ ಕಾರ್ಯ ನಡೆದಿದ್ದರೂ ಚನ್ನಬಸವ ಎಂಬುವರು ಪತ್ತೆಯಾಗಿಲ್ಲ.
ನಿನ್ನೆಯಿಂದ ಮತ್ತೆ ಮಳೆ ಬಿರುಸು ಪಡೆದುಕೊಂಡಿದ್ದು, ಮಸ್ಕಿ ಪಟ್ಟಣದ ತಗ್ಗು ಪ್ರದೇಶದ ಬಡಾವಣೆಗಳಿಗೆ ನೀರು ನುಗ್ಗಿದೆ. ಹೀಗಾಗಿ ಜಿಲ್ಲಾಡಳಿತ ಮತ್ತೆ ಎಚ್ಚರಿಕೆ ನೀಡಿದೆ. ಮಸ್ಕಿ ಜಲಾಶಯ 0.5 ಟಿಎಂಸಿ ಸಾಮರ್ಥ್ಯ ಹೊಂದಿದೆ.
Recommended Video