ಮಸ್ಕಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಹೋದರ ಪೊಲೀಸ್ ವಶಕ್ಕೆ!
ರಾಯಚೂರು, ಮೇ 2: ಚುನಾವಣಾ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಕಾರಣ ಮಸ್ಕಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ್ ಹಾಗೂ ಅವರ ಸಹೋದರ ಸಿದ್ದನಗೌಡ ತುರವಿಹಾಳ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಸ್ಕಿ ವಿಧಾನಸಭೆ ಉಪ ಚುನಾವಣೆಯ ಮತ ಎಣಿಕೆ ವೇಳೆ ಚುನಾವಣಾ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ್ ಹಾಗೂ ಅವರ ಸಹೋದರ ಸಿದ್ದನಗೌಡ ತುರವಿಹಾಳ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
Karnataka By Elections Results 2021 Live Updates: ಮತ ಎಣಿಕೆ ಆರಂಭ, ಯಾರಿಗೆ ಮುನ್ನಡೆ?
ನಂತರ ಪೊಲೀಸರೊಂದಿಗೂ ಜಗಳವಾಡಿದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ್ ಹಾಗೂ ಅವರ ಸಹೋದರ ಸಿದ್ದನಗೌಡ ತುರವಿಹಾಳ್ ಅವರನ್ನು ಬಂಧಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ರಾಯಚೂರು ಜಿಲ್ಲಾಧಿಕಾರಿ ಸೂಚಿಸಿದರು.
ಬಂಧನಕ್ಕೊಳಗಾದ ನಂತರ ಮಾತನಾಡಿದ ಸಿದ್ದನಗೌಡ ತುರವಿಹಾಳ್, ಚುನಾವಣಾಧಿಕಾರಿಗಳು ಮತ ಎಣಿಕೆಯ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು. ಸಿದ್ದನಗೌಡ ತುರವಿಹಾಳ್ ಅವರು ಮಸ್ಕಿ ಭಾಗದಲ್ಲಿ ಮುಂಚೂಣಿ ನಾಯಕರಾಗಿದ್ದಾರೆ.
ಮಸ್ಕಿ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, 10ನೇ ಸುತ್ತಿನ ವೇಳೆಗೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರು 20,906 ಮತಗಳನ್ನು ಪಡೆದು ಹಿನ್ನಡೆಯಲ್ಲಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ್ 32,322 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ.