ಜುಲೈ 2ಕ್ಕೂ ಭಕ್ತರಿಗೆ ಮಂತ್ರಾಲಯ ರಾಯರ ದರ್ಶನ ಇಲ್ಲ
ರಾಯಚೂರು, ಜೂನ್ 30: ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಕಾರಣ ಮಂತ್ರಾಲಯ ದೇವಸ್ಥಾನದಲ್ಲಿ ಭಕ್ತರ ಪ್ರವೇಶಕ್ಕಿದ್ದ ನಿರ್ಬಂಧವನ್ನು ಇದೀಗ ಇನ್ನಷ್ಟು ವಿಸ್ತರಿಸಲಾಗಿದೆ.
Recommended Video
ಈ ಮುನ್ನ ಜುಲೈ 2ಕ್ಕೆ ಮಂತ್ರಾಲಯ ದೇವಸ್ಥಾನವನ್ನು ತೆರೆಯುವುದಾಗಿ ಮಠದ ಆಡಳಿತ ಮಂಡಳಿ ತಿಳಿಸಿತ್ತು. ಇದೀಗ ಮತ್ತೆ ಆ ಅವಧಿಯನ್ನು ಮುಂದೂಡಲಾಗಿದೆ. ದಿನೇ ದಿನೇ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಜೂನ್ ಒಂದರಿಂದ ಷರತ್ತಿನೊಂದಿಗೆ ದೇವಸ್ಥಾನ ತೆರೆಯಲು ಸರ್ಕಾರ ಅನುಮತಿ ನೀಡಿದ್ದರೂ ಮಠ ತೆರೆದಿರಲಿಲ್ಲ. ಕೆಲವು ದಿನ ಪರಿಸ್ಥಿತಿಯನ್ನು ಅವಲೋಕಿಸಿ ಮಠಕ್ಕೆ ಭಕ್ತರ ಪ್ರವೇಶದ ಬಗ್ಗೆ ನಿರ್ಧಾರ ಮಾಡುವುದಾಗಿ ಸುಭುದೇಂದ್ರ ತೀರ್ಥ ಸ್ವಾಮೀಜಿಗಳು ಈ ಹಿಂದೆ ತಿಳಿಸಿದ್ದರು.
ತುಂಗಭದ್ರಾ ಪುಷ್ಕರಕ್ಕೆ ಮಂತ್ರಾಲಯದಲ್ಲಿ ಆರಂಭಗೊಂಡ ಸಿದ್ಧತೆ
ದೇಶದಾದ್ಯಂತ ಕೊರೊನಾ ಸೋಂಕು ವೇಗಗತಿಯಲ್ಲಿ ಹರಡುತ್ತಿದ್ದು, ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ವಿಧಿಸಲಾಗಿದೆ. ಹೀಗಾಗಿ ಮಂತ್ರಾಲಯ ಮಠದ ಭಕ್ತರು, ಶಿಷ್ಯರು, ತಜ್ಞರು ಚರ್ಚೆ ನಡೆಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ಪ್ರತ್ಯಕ್ಷ ದರ್ಶನವನ್ನು ಮುಂದೂಡಿರುವುದಾಗಿ ಮಂತ್ರಾಲಯ ಮಠದ ಆಡಳಿತ ಮಂಡಳಿಯ ವ್ಯವಸ್ಥಾಪಕ ವೆಂಕಟೇಶ್ ಜೋಷಿ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಮಠವನ್ನು ತೆರೆಯುವ ದಿನಾಂಕವನ್ನು ತಿಳಿಸಲಾಗಿಲ್ಲ.