ರಾಯರ ಭಕ್ತರಿಗೆ ಶುಭಸುದ್ದಿ: ಮಂತ್ರಾಲಯ ಮಠದಲ್ಲಿ ದರ್ಶನಕ್ಕೆ ದಿನ ನಿಗದಿ
ರಾಯಚೂರು, ಜೂನ್ 28: ಕೋವಿಡ್ 19ನಿಂದಾಗಿ ಭಕ್ತರ ದರ್ಶನಕ್ಕೆ ಬಂದ್ ಆಗಿದ್ದ ಮಂತ್ರಾಯಲದ ರಾಘವೇಂದ್ರಸ್ವಾಮಿ ಮಠ, ಬರುವ ಗುರುವಾರದಿಂದ (ಜುಲೈ 2) ಓಪನ್ ಆಗಲಿದೆ.
"ಸರಕಾರ ಸೂಚಿಸಿರುವ ಮಾರ್ಗಸೂಚಿಯ ಪ್ರಕಾರ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು" ಎಂದು ಮಠದ ಆಡಳಿತ ವ್ಯವಸ್ಥಾಪಕರಾದ ವೆಂಕಟೇಶ್ ಜೋಷಿಯವರು ತಿಳಿಸಿದ್ದಾರೆ.
ತುಂಗಭದ್ರಾ ಪುಷ್ಕರಕ್ಕೆ ಮಂತ್ರಾಲಯದಲ್ಲಿ ಆರಂಭಗೊಂಡ ಸಿದ್ಧತೆ
ಜೂನ್ ಒಂದರಿಂದ ಷರತ್ತಿನೊಂದಿಗೆ ದೇವಸ್ಥಾನ ತೆರೆಯಲು ಸರಕಾರ ಅನುಮತಿ ನೀಡಿದ್ದರೂ, ಮಂತ್ರಾಲಯ ಮಠ ಓಪನ್ ಆಗಿರಲಿಲ್ಲ. ಕೆಲವು ದಿನ ಪರಿಸ್ಥಿತಿಯನ್ನು ಅವಲೋಕಿಸಿ ಮಠಕ್ಕೆ ಭಕ್ತರ ಪ್ರವೇಶದ ಬಗ್ಗೆ ನಿರ್ಧಾರ ಮಾಡುವುದಾಗಿ ಸುಭುದೇಂದ್ರ ತೀರ್ಥ ಸ್ವಾಮೀಜಿಗಳು ಹೇಳಿದ್ದರು.
"ಸರಕಾರದ ಮಾರ್ಗಸೂಚಿಯನ್ನು ಭಕ್ತರು ಕಟ್ಟುನಿಟ್ಟಾಗಿ ಪಾಲಿಸಬೇಕು. 65ವರ್ಷ ಮೇಲ್ಪಟ್ಟ, 10ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ವಯೋಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮಠಕ್ಕೆ ಪ್ರವೇಶವಿಲ್ಲ"ಎಂದು ವೆಂಕಟೇಶ್ ಜೋಷಿಯವರು ಹೇಳಿದ್ದಾರೆ.
"ಮಠದ ವಸತಿ ನಿಲಯದಲ್ಲಿ ಭಕ್ತರಿಗೆ ತಂಗಲು ಅವಕಾಶವನ್ನು ನೀಡಲಾಗುವುದು. ಆದರೆ, ಒಂದು ಕೊಠಡಿಯಲ್ಲಿ ಒಬ್ಬರಿಗೇ ಇರಲು ಮಾತ್ರ ಅವಕಾಶವಿದೆ. ಬೆಳಗ್ಗೆ ಎಂಟರಿಂದ, ಮಧಾಹ್ನ ಎರಡರವರೆಗೆ ಮತ್ತು ಸಂಜೆ ನಾಲ್ಕರಿಂದ ರಾತ್ರಿ ಎಂಟರವರೆಗೆ ದರ್ಶನ ಮಾಡಬಹುದು" ಎಂದು ಜೋಷಿಯವರು ಹೇಳಿದ್ದಾರೆ.
ಮಠಕ್ಕೆ ಬರುವ ಭಕ್ತರು ಆಧಾರ್ ಕಾರ್ಡಿನ ಪ್ರತಿ, ಮೊಬೈಲ್ ಸಂಖ್ಯೆ, ವಿಳಾಸವನ್ನು ನೀಡುವುದು ಕಡ್ಡಾಯ ಮಂತ್ರಾಲಯ ಮಠ ಹೇಳಿದೆ.