ರಾಯಚೂರು ಕಲುಷಿತ ನೀರು ಕುಡಿದು ಸಾವು: ತನಿಖೆಗೆ ಆದೇಶಿಸಿದ ಲೋಕಾಯುಕ್ತ
ರಾಯಚೂರು, ಜುಲೈ 7: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಎರಡು ಗ್ರಾಮಗಳಲ್ಲಿ ಕಲುಷಿತ ನೀರು ಸೇವಿಸಿ ಮಹಿಳೆ ಸಾವನ್ನಪ್ಪಿದ್ದು, 40 ಮಂದಿ ಅಸ್ವಸ್ಥಗೊಂಡಿರುವ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ನಂತರ, ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಸ್ವಯಂಪ್ರೇರಿತವಾಗಿ ವಿಚಾರಣೆ ಆರಂಭಿಸಿದ್ದಾರೆ. ದುರಂತದ ಬಗ್ಗೆ ತನಿಖೆ ನಡೆಸಲು ಅವರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವಿಭಾಗಕ್ಕೆ ಆದೇಶಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಎಚ್. ಎಂ. ವೆಂಕಟೇಶ್ ಎಂಬುವವರು ಮಾಧ್ಯಮ ವರದಿಯನ್ನು ಲಗತ್ತಿಸಿ ಘಟನೆ ಕಾರಣರಾದವರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಲೋಕಾಯುಕ್ತರಿಗೆ ಇಮೇಲ್ ಮಾಡಿದ್ದರು. ಈ ಇಮೇಲ್ನಲ್ಲಿ ಸ್ವೀಕರಿಸಿದ ನಂತರ ಲೋಕಾಯುಕ್ತ ಪಾಟೀಲ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ.
ನೀರಿಲ್ಲದೆ ನಲ್ಲಿ ಹಾಕುವುದು ಪ್ರಯೋಜನವೇನು? ರಾಯಚೂರು ಜನರ ಪ್ರಶ್ನೆ
ವಿದ್ಯುತ್ ಪೂರೈಕೆಯಲ್ಲಿಉಂಟಾದ ವ್ಯತ್ಯಯದಿಂದಾಗಿ, ನೀರು ಶುದ್ಧೀಕರಣ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಇದರ ಪರಿಣಾಮವಾಗಿ ತುಂಗಭದ್ರಾ ನದಿ ನೀರನ್ನು ಶುದ್ಧೀಕರಿಸದೆ ಸರಬರಾಜು ಮಾಡಿರುವುದು ಜನರ ಆರೋಗ್ಯದ ಹದಗೆಡಲು ಪ್ರಮುಖ ಕಾರಣವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಇದನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಪಾಟೀಲ್, ಸಂವಿಧಾನದ 21 ನೇ ಪರಿಚ್ಛೇದದ ಬದುಕುವ ಹಕ್ಕುಅಡಿಯಲ್ಲಿ ಕುಡಿಯುವ ನೀರು ಮೂಲಭೂತ ಹಕ್ಕಾಗಿದೆ . ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 58 ರ ಪ್ರಕಾರ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರು ಸರಬರಾಜು ಯೋಜನೆಗಳನ್ನು ನಿರ್ವಹಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು ಗ್ರಾಮ ಪಂಚಾಯತ್ನ ಮೂಲ ಕಾರ್ಯವಾಗಿದೆ. ಆದರೆ ನೀರು ಶುದ್ಧೀಕರಣ ಘಟಕಗಳನ್ನು ನಿರ್ವಹಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ, ಇದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಇದು ಕರ್ನಾಟಕ ಲೋಕಾಯುಕ್ತ ಕಾಯಿದೆಯ ಸೆಕ್ಷನ್ 2 (10) ರ ಅರ್ಥದಲ್ಲಿ ಅಸಮರ್ಪಕ ಆಡಳಿತ ಎಂದು ಪಾಟೀಲ್ ಉಲ್ಲೇಖಿಸಿದ್ದಾರೆ.
ನೆನಗುದಿಗೆ ಬಿದ್ದ ಕಾಮಗಾರಿ, ಸಿಎಂ ಆದ್ಮೇಲೆ ರಾಯಚೂರು ಮರೆತ ಬೊಮ್ಮಾಯಿ
ಪಕ್ರರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ನಿರ್ದೇಶಕರು, ರಾಯಚೂರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಮಾನ್ವಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಗೋರ್ಕಲ್ ಗ್ರಾಮ ಪಂಚಾಯಿತಿಯ ಪಿಡಿಒ ಹಾಗೂ ಅಧ್ಯಕ್ಷರಿಗೆ ಘಟನೆ ಬಗೆ ಉತ್ತರ ನೀಡಲು ನೋಟಿಸ್ ಜಾರಿಗೊಳಿಸಿದ್ದಾರೆ.
ಇನ್ನು ರಾಯಚೂರು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿ ಶೌಚಾಲಯ ನಿರ್ಮಿಸಿಕೊಟ್ಟರೂ ಕೆಲವರು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ, ಸರಿಯಾದ ನೀರಿನ ಸೌಲಭ್ಯವಿಲ್ಲ ಎಂದು ರಾಯಚೂರು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಬಯಲು ಶೌಚಕ್ಕೆ ಆಸ್ಪದ ನೀಡುತ್ತಿದ್ದಾರೆ. ಈ ಬಗ್ಗೆ ನ್ಯಾಯಮೂರ್ತಿ ಪಾಟೀಲ್ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ನಿರ್ದೇಶಕರು, ಜಿಲ್ಲಾಧಿಕಾರಿ ಮತ್ತು ರಾಯಚೂರು ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಂದ ವಿವರಣೆ ಕೇಳಿದ್ದಾರೆ.
Recommended Video