ಮಕ್ಕಳ ಭವಿಷ್ಯಕ್ಕಾಗಿ ಗುಳೆ ಹೋಗಿದ್ದ ಗಂಗಮ್ಮ ವಾಪಸ್ ಬರಲಿಲ್ಲ
ರಾಯಚೂರು, ಏಪ್ರಿಲ್ 09 : ಬೆಂಗಳೂರಿಗೆ ದುಡಿಯಲು ಬಂದಿದ್ದ ಗಂಗಮ್ಮ ರಾಯಚೂರಿಗೆ ಮರಳುವಾಗ ಸಾವನ್ನಪ್ಪಿದ್ದಾರೆ. ತಾಯಿ ಸಾವಿನಿಂದ ಮಕ್ಕಳು ಕಣ್ಣೀರು ಹಾಕುತ್ತಿದ್ದು, ಅವರ ಭವಿಷ್ಯ ಮಂಕಾಗಿದೆ. ಶಿಕ್ಷಣ ದೂರದ ಮಾತಾಯಿತು ಹೊತ್ತಿನ ಊಟ ಸಿಕ್ಕಿದರೆ ಸಾಕಾಗಿದೆ.
ಲಾಕ್ ಡೌನ್ ಸಂದರ್ಭದಲ್ಲಿ ರಾಯಚೂರಿಗೆ ನಡೆದುಕೊಂಡು ಹೊರಟಿದ್ದ ಸಿಂಧನೂರಿನ ಗಂಗಮ್ಮ ಮಾರ್ಗ ಮಧ್ಯದಲ್ಲಿ ಸರಿಯಾದ ಆಹಾರ, ನೀರು ಸಿಗದೆ ಮೃತಪಟ್ಟಿದ್ದಾರೆ. ಯಡಿಯೂರಪ್ಪ ಗಂಗಮ್ಮ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ರಾಯಚೂರು; ಗಂಗಮ್ಮ ಕುಟುಂಬದ ನೆರವಿಗೆ ನಿಂತ ಯಡಿಯೂರಪ್ಪ
ಗಂಗಮ್ಮ ಮತ್ತು ಮಲ್ಲಿಕಾರ್ಜುನ ದಂಪತಿಗೆ ಇಬ್ಬರು ಮಕ್ಕಳು. ಸರಿಯಾದ ಕೂಲಿ ಕೆಲಸವಿಲ್ಲದೆ ಜೀವನ ಸಾಗಿಸಲು ಕಷ್ಟ ಪಡುತ್ತಿರುವ ಮಲ್ಲಿಕಾರ್ಜುನ ಮಕ್ಕಳಿಗೆ ಶಿಕ್ಷಣ ಕೊಡಿಸುವಷ್ಟು ಶಕ್ತಿಯನ್ನು ಹೊಂದಿಲ್ಲ. ಗಂಗಮ್ಮ ಮಗ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದಾನೆ. ಪುತ್ರಿಯನ್ನು ಗಂಗಮ್ಮ ತವರು ಮನೆಯಲ್ಲಿ ಬಿಟ್ಟಿದ್ದರು.
ಲಾಕ್ ಡೌನ್; ಸರಿಯಾಗಿ ಆಹಾರ ಸಿಗದೇ ಸಿಂಧನೂರು ಮಹಿಳೆ ಸಾವು
ಸಿಂಧನೂರಿನಲ್ಲಿ ಸರಿಯಾದ ಕೆಲಸ ಸಿಗದ ಕಾರಣಕ್ಕೆ ಮಕ್ಕಳ ಭವಿಷ್ಯಕ್ಕಾಗಿ ಅವರು ಬೆಂಗಳೂರಿಗೆ ಕೂಲಿಗೆ ಬಂದಿದ್ದರು. ಗ್ಲೋಬಲ್ ವಿಲೇಜ್ ಬಳಿಯ ಅಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ ಡೌನ್ ಘೋಷಣೆಯಾದ ಬಳಿಕ ಮಾಲೀಕರು ಸರಿಯಾಗಿ ಹಣ ನೀಡಲಿಲ್ಲ.
ಏಪ್ರಿಲ್ 14ರ ಬಳಿಕ ಲಾಕ್ ಡೌನ್ ತೆರವಿಗೆ ಸಿದ್ಧವಾಗಿದೆ ಸೂತ್ರ
ಮಾರ್ಚ್ 31ರ ತನಕ ಕಾದು ಗಂಗಮ್ಮ ದಂಪತಿ ಕೊನೆಗೆ ಹಣದ ಆಸೆ ಬಿಟ್ಟು ಊರು ಸೇರಿಕೊಳ್ಳಲು ಟ್ರಾಕ್ಟರ್ ಹತ್ತಿದರು. ತುಮಕೂರು ಟೋಲ್ ಗೇಟ್ ಬಳಿ ಪೊಲೀಸರು ಟ್ರಾಕ್ಟರ್ ತಡೆದ ಮೇಲೆ ನಡೆದುಕೊಂಡೇ ಸಿಂಧನೂರಿಗೆ ಹೊರಟಿದ್ದರು.
ಏಪ್ರಿಲ್ 2ರಂದು ಪೊಲೀಸರು ಬಳ್ಳಾರಿಯಲ್ಲಿ ಇವರನ್ನು ತಡೆದರು. ಪುರ್ನವಸತಿ ಕೇಂದ್ರಕ್ಕೆ ಸೇರಿಸಿದರು. ಆದರೆ, ಸರಿಯಾದ ಆಹಾರ, ನೀರು ಸಿಗದೆ ಬಳಲಿದ್ದ ಗಂಗಮ್ಮ ಅಲ್ಲಿ ಅಸ್ವಸ್ಥರಾದರು. ಅವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 5ರಂದು ಮೃತಪಟ್ಟರು.
ಕಟ್ಟಡ ಕಾರ್ಮಿಕರ ಯೋಗಕ್ಷೇಮ ಯೋಜನೆಯಡಿ ಗಂಗಮ್ಮ ಕುಟುಂಬಕ್ಕೆ ಪರಿಹಾರ ನೀಡಬೇಕು. ಗಂಗಮ್ಮ ಪತಿಗೆ ಯಾವುದೇ ಆರ್ಥಿಕ ಸಂಪನ್ಮೂಲಗಳಿಲ್ಲ. ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬ ನಿರ್ವಹಣೆಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ.