ರಾಯಚೂರು: ಬಿಜೆಪಿ ಅಧಿಕಾರಕ್ಕೆ ತರಲು ರಾಯರಲ್ಲಿ ಸಂಕಲ್ಪ ಮಾಡಿದ್ದೇನೆ: ಬಿಎಸ್ವೈ
ರಾಯಚೂರು, ಆಗಸ್ಟ್ 11: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗುರುವಾರ ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ. ಗುರುರಾಘವೇಂದ್ರ ಸ್ವಾಮಿಗಳ 451ನೇ ಆರಾಧನಾ ಮಹೋತ್ಸವದ ಹಿನ್ನೆಲೆ ಕುಟುಂಬ ಸಮೇತರಾಗಿ ಆಗಮಿಸಿದ್ದರು.
ದರ್ಶನದ ಬಳಿಕ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರ ಆಶೀರ್ವಾದ ಪಡೆದು ಕುಶಲೋಪರಿ ವಿಚಾರಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪವನ್ನು ಮಾಡಿದ್ದೇನೆ ಎಂದರು.
ಮುಖ್ಯಮಂತ್ರಿ ಬದಲಾವಣೆ ಸುದ್ದಿ; ಮೌನ ಮುರಿದ ಯಡಿಯೂರಪ್ಪ!
ರಾಘವೇಂದ್ರ ರಾಯರ ದರ್ಶನ ಪಡೆದು ಹೋಗುತ್ತಿದ್ದೇವೆ. ಮಂತ್ರಾಲಯಕ್ಕೆ ಬಂದಾಗ ನನಗೆ ಮತ್ತು ನನ್ನ ಕುಟುಂಬಕ್ಕೆ ಪ್ರೇರಣೆ ಸಿಕ್ಕಿದೆ. ಬಹುಶಃ ನಾಳೆಯಿಂದಲೇ ನಮ್ಮ ಮುಖಂಡರ ಜೊತೆಗೆ ರಾಜ್ಯದ ಉದ್ದಗಲಕ್ಕೂ ಓಡಾಡಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಸಂಕಲ್ಪ. ರಾಯರಲ್ಲೂ ಅದನ್ನೇ ಬೇಡಿಕೊಂಡಿದ್ದೇನೆ. ರಾಯರು ನನಗೆಲ್ಲವನ್ನೂ ನೀಡಿದ್ದಾರೆ. ರಾಜ್ಯದಲ್ಲಿ ಕೆಲವರು ಮುಖ್ಯಮಂತ್ರಿಯಾಗಿಬಿಟ್ಟೆ ಎನ್ನೋ ರೀತಿ ಮಾತನಾಡುತ್ತಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡಲ್ಲ. ಮತ್ತೊಮ್ಮೆ ಭಾರತೀಯ ಜನತಾ ಪಕ್ಷವನ್ನು ತರುವುದಕ್ಕೆ ರಾಜ್ಯಾದ್ಯಂತ ಓಡಾಡಿ ಯಶಸ್ವಿಯಾಗುತ್ತೇವೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.
ವಿಜಯೇಂದ್ರ ಸ್ಪರ್ಧೆ ಕೇಂದ್ರ ನಾಯಕರ ತೀರ್ಮಾನ
ಇನ್ನು ಶಿಕಾರಿಪುರದಲ್ಲಿ ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ ಮಾತನಾಡಿ, "ನಾನು ಚುನಾವಣೆಗೆ ನಿಲ್ಲಲ್ಲ ಹಾಗಾಗಿ ಅಲ್ಲಿ ವಿಜಯೇಂದ್ರ ನಿಲ್ಲಬಹುದು ಎಂದು ಹೇಳಿದ್ದೇನೆ. ಆದರೆ ಅವನು ನಿಲ್ಲಬೇಕೋ ಅಥವಾ ಬೇಡವೆ ಎನ್ನುವುದನ್ನು ಕೇಂದ್ರದ ನಾಯಕರು ನಿರ್ಧಾರ ಮಾಡುತ್ತಾರೆ," ಎಂದು ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ ಕೋವಿಡ್ನಿಂದ ಗುಣಮುಖ: ಜಿಲ್ಲಾ ಪ್ರವಾಸ ಆರಂಭ
ಸಿಎಂ ಬದಲಾವಣೆಯಿಲ್ಲ
"ರಾಜ್ಯ ವಿಧಾನಸಭಾ ಚುನಾವಣೆ ಸಮೀಪ ಇವೆ. ಈ ಸಂದರ್ಭದಲ್ಲಿ ಸಿಎಂ ಬದಲಾವಣೆ ಆಗುವುದಿಲ್ಲ. ಬಸವರಾಜ ಬೊಮ್ಮಾಯಿ ಸಿಎಂ ಆಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಯಾರು ಏನೇ ಹೇಳಿದರೂ ಬಸವರಾಜ ಬೊಮ್ಮಾಯಿ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಲಾಗುವುದು. ಕಾಂಗ್ರೆಸ್ ಅಧಿಕಾರಕ್ಕೆ ತಂದು ಸಿಎಂ ಆಗಬೇಕೆಂಬ ಕೆಲವರ ಕನಸು ನನಸಾಗುವುದಿಲ್ಲ," ಎಂದು ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಗೆಲ್ಲುವ ಅಭ್ಯರ್ಥಿ ಹುಡುಕಲು ಹೈಕಮಾಂಡ್ ಸೂಚನೆ
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಬರುವುದು ಶತಸಿದ್ದ. ಬರುವ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿ ಹುಡುಕಿ ಕೆಲಸ ಮಾಡಲು ಹೈಕಮಾಂಡ್ ಸೂಚನೆ ನೀಡಿದ್ದು, ಪ್ರವಾಸದ ಮೂಲಕ ಪಕ್ಷ ಸಂಘಟನೆ ಮಾಡಲಾಗುವುದು. ರಾಜ್ಯದ ಜನತೆಗೆ ಬಿಜೆಪಿ ಪರ ಒಲವುವಿದ್ದು, ಕರ್ನಾಟಕದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ತರುವುದೇ ನಮ್ಮ ಗುರಿಯಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ನಿತೀಶ್ ಅನೇಕ ಬಾರಿ ಮೈತ್ರಿ ಮುರಿದುಕೊಂಡಿದ್ದಾರೆ
ಬಿಹಾರದಲ್ಲಿಎನ್ಡಿಎ ಬಿಟ್ಟು ಹೋಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ನಿತೀಶ್ ಅನೇಕ ಸಲ ಮೈತ್ರಿ ಮಾಡಿಕೊಂಡು ನಂತರ ಕೈ ಬಿಟ್ಟಿದ್ದಾರೆ. ಇದರಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಆಗುವುದಿಲ್ಲ. ಮುಂದೆಯೂ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ," ಎಂದರು.
ಇನ್ನು ರಾಜ್ಯಾದಲ್ಲಿ ಸಿಕ್ಕಾಬಟ್ಟೆ ಮಳೆಯಾಗಿದೆ, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರಕಾರ ಪರಿಹಾರ ಕೊಡುವ ಬಗ್ಗೆ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಹಾಗಾಗಿ ರೈತರು ಕಂಗಾಲಾಗುವ ಅಗತ್ಯವಿಲ್ಲ, ಎಲ್ಲಾ ಜಲಾಶಯಗಳು ತುಂಬಿವೆ, ಕೆಲವು ಕಡೆ ತೊಂದರೆಯಾಗಿದೆ, ಅದಕ್ಕೆ ಪರಿಹಾರ ಕೊಡುವ ಬಗ್ಗೆ ಸರಕಾರ ಮಾಡಲಿದೆ ಎಂದರು
Recommended Video