ಜಲಚರಗಳ ಜೀವಕ್ಕೆ ಕುತ್ತು ತಂದ ರಾಯಚೂರಿನ ವಿದ್ಯುತ್ ಸ್ಥಾವರಗಳು
ರಾಯಚೂರು, ಜುಲೈ.30: ರಾಜ್ಯಕ್ಕೆ ವಿದ್ಯುತ್ ನೀಡುವ ರಾಯಚೂರು ಜಿಲ್ಲೆಯ ಆರ್ ಟಿಪಿಎಸ್, ವೈಟಿಪಿಎಸ್ ಘಟಕಗಳಿಂದ ಕೃಷ್ಣಾ ನದಿ ವಿಷಕಾರಿಯಾಗುತ್ತಿದೆ. ಇತ್ತೀಚೆಗೆ ಪದೇ ಪದೇ ವಿದ್ಯುತ್ ಸ್ಥಾವರಗಳಿಂದ ಕೃಷ್ಣಾ ನದಿಗೆ ರಾಸಾಯನಿಕ ಮಿಶ್ರಿತ ಕಲುಷಿತ ನೀರನ್ನು ಹರಿಸಲಾಗುತ್ತಿದೆ.
ವಿದ್ಯುತ್ ಉತ್ಪಾದನಾ ಘಟಕಗಳಿಗೆ ಬಳಸುವ ತೈಲ, ಇನ್ನಿತರ ರಾಸಾಯನಿಕ ಮಿಶ್ರಿತ ನೀರು ಕೃಷ್ಣಾ ನದಿಯ ಒಡಲಿಗೆ ರಾಜಾರೋಷವಾಗಿ ಸೇರುತ್ತಿದೆ. ರಾಯಚೂರು ತಾಲೂಕಿನ ಕಾಡ್ಲೂರು ಮಾರ್ಗದ ನಾಲೆಗಳಿಂದ ಕೃಷ್ಣಾ ನದಿಗೆ ಕಲುಷಿತ ನೀರು ಹರಿಯುತ್ತಿದೆ.
ಧೂಳು ಮಿಶ್ರಿತ ಬಿರುಗಾಳಿ ಉತ್ತರ ಭಾರತ ತತ್ತರ! ಸ್ಥಿತಿ ಹೇಗಿದೆ?
ಇದರಿಂದ ಜನರ ಜೀವನಾಡಿ ಕೃಷ್ಣಾ ನದಿಯ ಒಡಲು ವಿಷವಾಗುತ್ತಿದೆ. ಸಹಜವಾಗಿ ಕೃಷ್ಣಾ ನದಿ ದಡದ ಗ್ರಾಮಗಳ ಗ್ರಾಮಸ್ಥರಲ್ಲಿ ಆತಂಕ ಕಾಡುತ್ತಿದೆ. ಅಲ್ಲದೇ ವಿದ್ಯುತ್ ಘಟಕಗಳ ರಾಸಾಯನಿಕ ಮಿಶ್ರಿತ ಕಲುಷಿತ ನೀರು ಕೃಷ್ಣಾ ನದಿಗೆ ಸೇರುವುದರಿಂದ ಜಲಚರಗಳ ಜೀವಕ್ಕೆ ಕುತ್ತು ಬರುತ್ತಿದೆ.
ಆರ್ ಟಿಪಿಎಸ್, ವೈಟಿಪಿಎಸ್ ಘಟಕಗಳ ನಿರ್ಲಕ್ಷ್ಯದ ವಿರುದ್ಧ ಸಂಬಂಧಿಸಿದ ಅಧಿಕಾರಿಗಳ ಗಮನ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಆರ್.ಟಿಪಿಎಸ್, ವೈಟಿಪಿಎಸ್ ವಿರುದ್ಧ ಈ ಭಾಗದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಕೂಡ ಆರ್,ಟಿಪಿಎಸ್ ಘಟಕದಿಂದ ರಾಸಾಯನಿಕ ಮಿಶ್ರಿತ ನೀರು ನೀರಿನ ಹೊಂಡಕ್ಕೆ ಸೇರಿ ಎರಡು ಮೊಸಳೆ, ಸಾವಿರಾರು ಮೀನುಗಳು ಸಾವನ್ನಪ್ಪಿದ್ದವು.