'ನಡೆಯಲು ರಸ್ತೆಗಳಿಲ್ಲ, ವಿಮಾನ ನಿಲ್ದಾಣ ನಾವೇನ್ ಮಾಡೋಣ?: ರಾಯಚೂರಿಗರ ಪ್ರಶ್ನೆ
ರಾಯಚೂರು ಮಾರ್ಚ್ 4: 'ನಡೆಯಲು ರಸ್ತೆಗಳಿಲ್ಲ, ವಿಮಾನ ನಿಲ್ದಾಣ ನಾವೇನ್ ಮಾಡೋಣ? ಇಂದಿನ ಬಜೆಟ್ ಹಳೆ ಮನೆಗೆ ಸುಣ್ಣ ಬಡಿದಂತಿದೆ. ಜೊತೆಗೆ ರಾಯಚೂರು ಭಾಗದ ಜನರ ನಿರೀಕ್ಷೆಯನ್ನು ಹುಸಿಯಾಗಿಸಿದೆ' ಎಂದು ರಾಯಚೂರು ಜಿಲ್ಲಾ ಜಾತ್ಯತೀತ ಜನತಾದಳ ಅಧ್ಯಕ್ಷ ಎಂ.ವಿರೂಪಾಕ್ಷಿ ಅವರು ಟೀಕಿಸಿದ್ದಾರೆ. ಜೊತೆಗೆ ಇಂದಿನ ಬಜೆಟ್ 'ರಾಯಚೂರು ಭಾಗದ ಜನರ ಆಶಾ ಭಾವನೆಗಳಿಗೆ ನೀರು ಎರಚುವಂತ ಕೆಲಸ' ಎಂದು ಹೈದರಾಬಾದ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ.ರಝಾಕ ಉಸ್ತಾದ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಮಾರ್ಚ್ 4) 2022-2023 ಸಾಲಿನ ಚೊಚ್ಚಲ ಬಜೆಟ್ ಮಂಡಿಸಿದರು. ಮಧ್ಯಾಹ್ನ 12.30ಕ್ಕೆ ಸಿಎಂ ಬೊಮ್ಮಾಯಿ ಅವರಿಂದ ಬಜೆಟ್ ಮಂಡನೆ ಮಾಡಲಾಯಿತು. ಇದರಲ್ಲಿ ರಾಯಚೂರು ಭಾಗಕ್ಕೆ ನೀರಾವರಿ, ಕೃಷಿ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತಹ ಬಜೆಟ್ ಮಂಡನೆ ಮಾಡುತ್ತಾರೆನ್ನುವ ಭರವಸೆ ಹೊಂದಿದ್ದ ರಾಯಚೂರು ಭಾಗದ ಜನರಿಗೆ ನಿರಾಸೆಯಾಗಿದೆ.
ಇಂದಿನ ಬಜೆಟ್ ರಾಯಚೂರು ಭಾಗದ ಜನರ ನಿರೀಕ್ಷೆಯನ್ನು ಹುಸಿಯಾಗಿಸಿದೆ. ನಡಿಯೋಕೆ ರಸ್ತೆಗಳಿಲ್ಲ, ವಿಮಾನ ನಿಲ್ದಾಣ ನಾವೇನ್ ಮಾಡೋಣ? ಇಂದಿನ ಬಜೆಟ್ ಹಳೆ ಮನೆಗೆ ಸುಣ್ಣ ಬಡಿದಂತಿದೆ ಎಂದು ರಾಯಚೂರು ಜಿಲ್ಲಾ ಜಾತ್ಯತೀತ ಜನತಾದಳ ಅಧ್ಯಕ್ಷ ಎಂ.ವಿರೂಪಾಕ್ಷಿ ಅವರು ವ್ಯಂಗ್ಯ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೆ ವಿಶ್ವವಿದ್ಯಾಲಯ ಮತ್ತು ನೀರಾವರಿಗೆ ಬಜೆಟ್ ಕೊಡಬೇಕು ಎನ್ನುವಂತ ಬೇಡಿಕೆಯನ್ನು ಈ ಭಾಗದ ಜನರಿಂದ ಇಡಲಾಗಿತ್ತು. ಇದೆಲ್ಲವನ್ನು ಬಿಟ್ಟು ವಿಮಾನ ನಿಲ್ದಾಣಕ್ಕೆ ಬಜೆಟ್ ನೀಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಐದು ಸಾವಿರ ಕೋಟಿ ನಿರೀಕ್ಷೆ ಇತ್ತು. ನೀರಾವರಿ ಪ್ರಾಜೆಕ್ಟ್ಗಳಿಗೆ ಅನುದಾನ ಬಿಡುಗಡೆ ಮಾಡುತ್ತಾರೆನ್ನುವ ಭರವಸೆ ಇತ್ತು. ಐದು ನೂರು ಕೋಟಿ ವಿಶ್ವವಿಶ್ವದಾಯಕ್ಕೆ ಕೇಳಲಾಗಿತ್ತು. ಆದರೆ ಕೇವಲ ಹದಿನೈದು ಕೋಟಿಯನ್ನು ಬಜೆಟ್ ನಲ್ಲಿ ಮಂಡಿಸಲಾಗಿದೆ. ಇದರಿಂದ ನಮ್ಮ ಭಾಗದ ಜನರಿಗೆ ಮೋಸ ಆಗಿದೆ. ಜನರಿಗೆ ನಡೆಯಲು ರಸ್ತೆಗಳಿಲ್ಲ. ಆ ರಸ್ತೆಗಳಿಗೆ ಸರಿಯಾಗಿ ಅನುದಾನ ನೀಡಿಲ್ಲ. ನೀರಾವರಿ ಯೋಜನೆಗಳಿಗೂ ಅನುದಾನ ನೀಡಿಲ್ಲ. ಹೀಗಾಗಿ ಇಂದಿನ ಬಜೆಟ್ ಹಳೆ ಮನೆಗೆ ಸುಣ್ಣ ಬಡಿದಂತೆ ಎಂದು ಎಂ.ವಿರೂಪಾಕ್ಷಿ ಕಿಡಿ ಕಾರಿದರು.
'ನಡೆಯಲು ರಸ್ತೆಗಳಿಲ್ಲ, ವಿಮಾನ ನಿಲ್ದಾಣ ನಾವೇನ್ ಮಾಡೋಣ?': ಎಂ.ವಿರೂಪಾಕ್ಷಿ
ರಸ್ತೆ ಕಾಮಾರಿಗಳಿಗೆ, ಹಲವಾರು ನೀರಾವರಿ ಯೋಜನೆಗಳಿಗೆ, ಶಿಕ್ಷಣ ವ್ಯವಸ್ಥೆಗೆ ಅನುದಾನ ನೀಡಬೇಕಾಗಿತ್ತು. ಆದರೆ ಕೇವಲ ರಾಯಚೂರಿನಲ್ಲಿ 186 ಕೋಟಿ ರೂ. ವೆಚ್ಚದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆ ಮಾಡಲು ಅನುದಾನವನ್ನು ನೀಡಲಾಗಿದೆ. ಈ ಭಾಗದ ಜನರಿಗೆ ವಿಮಾನ ನಿಲ್ದಾಣಕ್ಕಿಂತ ನೀರಾವರಿ ಯೋಜನೆಗೆ, ರಸ್ತೆ ಕಾಮಗಾರಿಗಳಿಗೆ, ಶಿಕ್ಷಣ ವ್ಯವಸ್ಥೆಗೆ ಅನುದಾನ ನೀಡಬೇಕಾಗಿತ್ತು. ಆದರೆ ಬಸವರಾಜ ಬೊಮ್ಮಾಯಿ ಅವರು ಈ ರಾಯಚೂರು ಭಾಗದ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಇದರಿಂದ ಬಸವರಾಜ ಬೊಮ್ಮಾಯಿ ಅವರ ಪ್ರಥಮ ಬಜೆಟ್ ಕಳಪೆಯಾಗಿದೆ ಎಂದು ಹೇಳಿದರು.
'ರಾಯಚೂರು ಭಾಗದ ಜನರ ಆಶಾ ಭಾವನೆಗಳಿಗೆ ನೀರು ಎರಚುವಂತ ಕೆಲಸ' ಡಾ.ರಝಾಕ ಉಸ್ತಾದ
ಇನ್ನು ಬಜೆಟ್ ಬಗ್ಗೆ 'ಒನ್ಇಂಡಿಯಾ ಕನ್ನಡ' ಜೊತೆ ಮಾತನಾಡಿದ ಹೈದರಾಬಾದ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಡಾ.ರಝಾಕ ಉಸ್ತಾದ ಅವರು, ಕರ್ನಾಟಕದ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರು ಹೊಸ ಯೋಜನೆ ಕೊಡಬಹುದು ಎನ್ನುವ ಆಶಾಭಾವನೆ ಇತ್ತು. ಆದರೆ ಆ ಎಲ್ಲಾ ಆಶಾ ಭಾವನೆಗಳಿಗೆ ನೀರು ಎರಚುವಂತ ಕೆಲಸ ಕರ್ನಾಟಕ ಸರ್ಕಾರ ಮಾಡಿದೆ. ವಿಶೇಷವಾಗಿ ರಾಯಚೂರು ವಿಶ್ವವಿದ್ಯಾಲಯಕ್ಕೆ ಮೂಲಭೂತ ಸೌಕರ್ಯಕ್ಕಾಗಿ ಕನಿಷ್ಠ ನೂರು ಕೋಟಿ ಅನುದಾನವನ್ನು ಕೊಡಬೇಕು ಎನ್ನುವಂತ ಒತ್ತಾಯ ಇತ್ತು. ನೀರಾವರಿ ಯೋಜನೆಗಳಿಗೆ ಅನುದಾನ ನೀಡಲು ಒತ್ತಾಯಿಸಲಾಗಿತ್ತು ಆದರೆ ಇದೆಲ್ಲಾ ಬೇಡಿಕೆಗಳನ್ನು ಗಾಳಿಗೆ ತೂರಿದೆ. ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಈಗಾಗಲೇ ಘೋಷಣೆಯಾಗಿತ್ತು ಅದನ್ನು ಪತ್ತೆ ಘೋಷಣೆ ಮಾಡಿರುವುದನ್ನು ಬಿಟ್ಟರೆ ಮತ್ತೆ ಯಾವುದೇ ಹೊಸ ಘೋಷಣೆಯನ್ನು ಮಾಡಿಲ್ಲ. ರಾಯಚೂರಿನಲ್ಲಿ ರಿಂಗ್ ರಸ್ತೆ ನಿರ್ಮಾಣ ಮಾಡುವಂತ ವಿಚಾರ, ರಾಯಚೂರಿನ ನಾರಾಯಣಪುರ ಬಲದಂಡೆಯನ್ನು ವಿಸ್ತರಣೆ ಮಾಡಬೇಕು ಎನ್ನುವಂತ ಬೇಡಿಕೆ ಇತ್ತು, ಎಡದಂಡೆ ಕಾಲುವೆಗೆ ನೀರನ್ನು ಒದಗಿಸುವಂತದ್ದು, ಜಿಲ್ಲೆಯ ಪ್ರಮುಖ ರಸ್ತೆಗಳ ಅಭಿವೃದ್ದಿಯ ಬಗ್ಗೆ ಬೇಡಿಯನ್ನು ಇಡಲಾಗಿತ್ತು. ಆದರೆ ಇಂತಹ ಯಾವುದೇ ಹೊಸ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಬೇಸರವನ್ನು ವ್ಯಕ್ತಪಡಿಸಿದರು.
ಕಳೆದ ಕ್ಯಾಬಿನೆಟ್ ನಲ್ಲಿ ನಿರ್ಣಯ ತೆಗೆದುಕೊಂಡಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಡಿಎಂಎಫ್ ಫಂಡಿನಲ್ಲಿ ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ನಿರ್ಧರಿಸಲಾಗಿತ್ತು. ಈಗ ಅದನ್ನೇ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಇದು ಹೊಸದಾಗಿ ಅನುದಾನ ನೀಡುವಂತೆ ಘೋಷಣೆ ಮಾಡಿರುವುದು ಆಶ್ಚರ್ಯ ಮತ್ತು ಅಘಾತವಾಗಿದೆ. ಯಾಕೆಂದರೆ ಯಾವುದೇ ಸರ್ಕಾರ ಹೋದ ವರ್ಷ ಕ್ಯಾಬಿನೆಟ್ನಲ್ಲಿ ತೆಗೆದುಕೊಂಡ ನಿರ್ಣಯವನ್ನು ಈಗಿನ ಬಜೆಟ್ನಲ್ಲಿ ಮತ್ತೆ ಘೋಷಣೆ ಮಾಡಿರುವುದು ಜಗತ್ತಿನ ಯಾವುದೇ ಆರ್ಥಿಕ ತಜ್ಞರು ಕೂಡ ಹೀಗೆ ಮಾಡಲು ಆಗುವುದಿಲ್ಲ. ಅದನ್ನ ನಮ್ಮ ಬಿಜೆಪಿ ರಾಜ್ಯ ಸರ್ಕಾರ ಮಾಡಿದೆ ಎಂದರು.