ರಾಯಚೂರು: ಶಿವರಾಜ್ ಪಾಟೀಲ್ ಪ್ರಾಬಲ್ಯ ಕೊನೆಗೊಳಿಸಲು ವಿಪಕ್ಷಗಳ ತಂತ್ರ
ರಾಯಚೂರು ನಗರದಲ್ಲಿ ಹಾಲಿ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಅವರ ಪ್ರಾಬಲ್ಯವಿದೆ. ಮುಂದೆ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಈ ಪ್ರಾಬಲ್ಯ ಕೊನೆಗೊಳಿಸಬೇಕು ಎಂದು ವಿಪಕ್ಷಗಳು ತಂತ್ರ ರೂಪಿಸುತ್ತಿವೆ.
ರಾಯಚೂರು ಫೆಬ್ರವರಿ 3: ಸಾಮಾನ್ಯ ಮೀಸಲು ವಿಧಾನಸಭಾ ಕ್ಷೇತ್ರವಾಗಿರುವ ರಾಯಚೂರು ನಗರದಲ್ಲಿ ಹಾಲಿ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಅವರ ಪ್ರಾಬಲ್ಯವಿದೆ. ಈಗ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಈ ಪ್ರಾಬಲ್ಯ ಕೊನೆಗೊಳಿಸಬೇಕು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಬೇರೆ ಬೇರೆ ಪಕ್ಷಗಳಿಂದ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾದ ಡಾ.ಶಿವರಾಜ್ ಪಾಟೀಲ್, ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತ. ಪಕ್ಷ ನಿರ್ದೇಶಿತ ಕಾರ್ಯಕ್ರಮಗಳ ಜೊತೆಗೆ ಸಮುದಾಯಿಕವಾಗಿ ತಮ್ಮದೇ ಆದ ಪ್ರಭಾವ ಕಾಪಾಡಿಕೊಳ್ಳುತ್ತಾ ಬಂದಿದ್ದಾರೆ. ಇದರಿಂದಾಗಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ.
Karnataka Assembly Election 2023: ರಾಯಚೂರು ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು
ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿ ಆಯ್ಕೆಯನ್ನು ಇನ್ನೂ ಅಂತಿಮಗೊಳಿಸಿಲ್ಲ. 2018ರ ಚುನಾವಣೆಯಲ್ಲಿ ಎರಡನೇ ಅತಿಹೆಚ್ಚು ಮತಗಳನ್ನು ಕಾಂಗ್ರೆಸ್ ಪಡೆದಿತ್ತು. ಇದೀಗ ಮಾಜಿ ಶಾಸಕರು, ಮುಖಂಡರು ಹಾಗೂ ಹೊಸದಾಗಿ ಪಕ್ಷ ಸೇರ್ಪಡೆಯಾದವರು ಸೇರಿ ಒಟ್ಟು 17 ಆಕಾಂಕ್ಷಿಗಳು ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಶಾಸಕ ಸೈಯದ್ ಯಾಸೀನ್ ಏಳನೇ ಬಾರಿಯೂ ರಾಯಚೂರು ನಗರದಿಂದ ಸ್ಪರ್ಧಿಸಲು ಟಿಕೆಟ್ ಕೇಳಿದ್ದಾರೆ. ಮಾನ್ವಿ ಕ್ಷೇತ್ರದ ಮಾಜಿ ಶಾಸಕ ಎನ್.ಎಸ್.ಬೋಸರಾಜ ಕೂಡಾ ರಾಯಚೂರು ನಗರದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ತಮಗೆ ಟಿಕೆಟ್ ಕೊಡದಿದ್ದರೆ ಪುತ್ರರಿಗಾದರೂ ಕೊಡಿ ಎನ್ನುವ ಬೇಡಿಕೆ ಇಬ್ಬರದ್ದು ಇದೇ. ಇವರಿಬ್ಬರ ಹೊರತಾಗಿ ಇನ್ನೂ 13 ಅರ್ಜಿದಾರರಿರು ಟಿಕೆಟ್ಗಾಗಿ ಕಾದಿದ್ದಾರೆ.
ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಿಲ್ಲ. ಮೇಲ್ನೊಟದಲ್ಲಿ ರಾಮನಗೌಡ ಏಗನೂರು ಸ್ಪರ್ಧಿಸುತ್ತಾರೆ ಎನ್ನುವುದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪಂಚರತ್ನ ರಥಯಾತ್ರೆ ಬರುವವರೆಗೂ ಚಾಲ್ತಿಯಲ್ಲಿತ್ತು. ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ಪಡೆಯಾಗಿರುವ ಈ. ವಿನಯ ಕುಮಾರ್ಗೆ ಟಿಕೆಟ್ ನೀಡುವ ಸುಳಿವನ್ನು ಕುಮಾರಸ್ವಾಮಿ ಅವರು ನೀಡಿದ್ದಾರೆ. ಆದರೆ, ಅಧಿಕೃತವಾಗಿ ಟಿಕೆಟ್ ಘೋಷಿಸಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪ್ರಬಲರೊಬ್ಬರು ಜೆಡಿಎಸ್ ಟಿಕೆಟ್ ಪಡೆಯುವುದಕ್ಕೆ ಮುಂದಾದರೆ, ಈಗ ಟಿಕೆಟ್ಗಾಗಿ ಕಾದಿರುವ ಇಬ್ಬರಿಗೂ ಕೈ ತಪ್ಪುವ ಸಾಧ್ಯತೆ ಹೆಚ್ಚಾಗಿದೆ. ಮಾತಿಗಿಂತ ಗೆಲುವು ಮುಖ್ಯ ಎನ್ನುವ ಜೆಡಿಎಸ್ ನೀತಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಗಣಿ ಉದ್ಯಮಿ ಜನಾರ್ದನರೆಡ್ಡಿ ಸ್ಥಾಪಿತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್ಪಿಪಿ) ಹಾಗೂ ತೆಲಂಗಾಣದ ಭಾರತ ರಾಷ್ಟ್ರ ಸಮಿತಿ (ಬಿಆರ್ಸಿ) ಪಕ್ಷಗಳು ಕೂಡಾ ರಾಯಚೂರು ನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಜ್ಜಾಗಿವೆ. ಜೆಡಿಎಸ್, ಕಾಂಗ್ರೆಸ್ ಟಿಕೆಟ್ ವಂಚಿತರು ಕೆಕೆಆರ್ಪಿಪಿ, ಬಿಆರ್ಸಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಬಾರಿ ಚುನಾವಣೆ ಕಣದಲ್ಲಿ ತ್ರಿಕೋನ ಪೈಪೋಟಿ ಏರ್ಪಡುವುದು ಖಚಿತವಾಗಿದೆ.