ರೇವಣ್ಣ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದ ಎಚ್. ವಿಶ್ವನಾಥ್
ರಾಯಚೂರು, ಮಾರ್ಚ್ 9: ರೇವಣ್ಣನವರು ಸುಮಲತಾ ಬಗ್ಗೆ ಮನಬಂದಂತೆ ಹಗುರವಾಗಿ ಮಾತನಾಡಬಾರದಿತ್ತು. ಆ ಕುರಿತಾಗಿ ನಾನು ಕ್ಷಮೆ ಕೋರುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ತಿಳಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜವಾಬ್ದಾರಿಯುತ ಸಚಿವರಾಗಿ ರೇವಣ್ಣ ಅವರು ಸುಮಲತಾ ಬಗ್ಗೆ ಈ ರೀತಿ ಹಗುರವಾಗಿ ಮಾತನಾಡಬಾರದಿತ್ತು. ಹೇಳಿಕೆ ಕುರಿತು ಖುದ್ದು ಸಿಎಂ ಕುಮಾರಸ್ವಾಮಿ ಕೂಡ ಈ ರೀತಿಯ ಹೇಳಿಕೆಗಳನ್ನು ನೀಡುವುದು ತಪ್ಪು ಎಂದಿದ್ದರು. ಆದರೆ, ರೇವಣ್ಣ ಮಾತ್ರ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವುದು ಬೇಸರದ ವಿಚಾರ ಎಂದರು.
ಸುಮಲತಾ ಬಗ್ಗೆ ರೇವಣ್ಣ ಹೇಳಿಕೆ ವಿಚಾರ:ಪ್ರತಿಕ್ರಿಯೆ ನೀಡಲ್ಲವೆಂದ ಜಿಟಿಡಿ, ಕಾರಣವೇನು?
ಜೆಡಿಎಸ್ ಮಹಿಳೆಯರಿಗೆ ಅಪಾರವಾದ ಗೌರವ ಕೊಡುತ್ತದೆ ಎಂದ ವಿಶ್ವನಾಥ್, ಈ ರೀತಿಯ ಹೇಳಿಕೆಗಳನ್ನು ನೀಡಬಾರದಾಗಿತ್ತು. ಆದರೆ, ರೇವಣ್ಣ ಈ ರೀತಿ ಹೇಳಿಕೆ ನೀಡಿದ್ದಾರೆ. ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ವಿನಂತಿಸಿಕೊಂಡರು.
ಜೆಡಿಎಸ್ ನಲ್ಲಿ ಮಾತ್ರ ಕುಟುಂಬ ರಾಜಕಾರಣವಿಲ್ಲ, ಅದು ಎಲ್ಲಾ ಪಕ್ಷದಲ್ಲಿದೆ. ಕಾಂಗ್ರೆಸ್, ಬಿಜೆಪಿಯಲ್ಲಿರುವುದು ಏನು? ಯಡಿಯೂರಪ್ಪ, ಸಿದ್ದರಾಮಯ್ಯ ಮನೆಯಲ್ಲಿ ರಾಜಕಾರಣವಿಲ್ಲವೇ ಎಂದು ಪ್ರಶ್ನಿಸಿದರು. ಎರಡಾದರೂ ಇರಲಿ, ನಾಲ್ಕಾದರೂ ಇರಲಿ ಅದು ಕುಟುಂಬ ರಾಜಕಾರಣವೇ ಎಂದು ವಿಶ್ವನಾಥ್ ಟೀಕಿಸಿದರು.
ರೇವಣ್ಣ ಸುಮಲತಾ ಅವರ ಕ್ಷಮೆಯಾಚಿಸಲಿ: ಶೋಭಾ ಕರಂದ್ಲಾಜೆ
ಮೋದಿ ಉತ್ತರ ಕರ್ನಾಟಕದ ಕೇಂದ್ರದ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ ಎಂದು ಹರಿಹಾಯ್ದರು. ರಾಜ್ಯದ ಅವಭಿವೃದ್ಧಿ ವಿಷಯದಲ್ಲಿ ಮೋದಿ ತಾರತಮ್ಯ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ವಿಶ್ವನಾಥ್ ಮೋದಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.