ರಾಯಚೂರಿಗೆ ಸರ್ಕಾರ ಕೊಟ್ಟದ್ದೆಷ್ಟು? ಖರ್ಚಾದದ್ದೆಷ್ಟು? ಒನ್ಇಂಡಿಯಾ ಕನ್ನಡ' ನೀಡುತ್ತಿದೆ ಮಾಹಿತಿ
ರಾಯಚೂರು, ಏಪ್ರಿಲ್ 11: ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆ ಹಿಂದುಳಿದ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ನೀಡಿರುವ ಅನುದಾನವೆಷ್ಟು ಇಲ್ಲಿನ ಶಾಸಕರು ಪರಿಷತ್ ಸದಸ್ಯರು ಖರ್ಚು ಮಾಡಿರುವುದೆಷ್ಟು ಇಲ್ಲಿದೆ ಮಾಹಿತಿ.
ತುಮಕೂರು ಜಿಲ್ಲೆಯಲ್ಲಿ ಶಾಸಕರ ನಿಧಿ ಬಳಕೆ: ಸುರೇಶ್ ಗೌಡ ನಂಬರ್ ಒನ್
ರಾಯಚೂರು ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳು ಹಾಗೂ ಒಬ್ಬ ವಿಧಾನ ಪರಿಷತ್ ಸದಸ್ಯರಿದ್ದಾರೆ. ಇವರುಗಳಿಗೆ ವರ್ಷಂಪ್ರತಿ ಸರ್ಕಾರ ಅನುದಾನಗಳನ್ನು ಜನಸಂಖ್ಯೆ, ಅಗತ್ಯತೆ, ಅಭಿವೃದ್ಧಿ ಪ್ರಮಾಣ ಹಾಗೂ ಬೇಡಿಕೆಗೆ ಅನುಗುಣವಾಗಿ ನೀಡಿದೆ.
ಚುನಾವಣೆ ಸಂದರ್ಭದಲ್ಲಿ ನಿಮ್ಮ ನಿಮ್ಮ ಕ್ಷೇತ್ರದ ಶಾಸಕರು ಏನು ಕಾರ್ಯ ಮಾಡಿದ್ದಾರೆ ಎಂದು ತಿಳಿದುಕೊಳ್ಳುವ ಸಮಯವಿದು, ಹಾಗಾಗಿ 'ಒನ್ಇಂಡಿಯಾ ಕನ್ನಡ' ಆರ್.ಟಿ.ಐ ಮೂಲಕ ಅರ್ಜಿ ಸಲ್ಲಿಸಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕಳೆದ 5 ವರ್ಷಗಳಲ್ಲಿ ಬಿಡುಗಡೆಯಾದ ಹಣದ ಮಾಹಿತಿ ಪಡೆದುಕೊಂಡಿದೆ.
ರಾಯಚೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಸರ್ಕಾರ ಕಳೆದ 5 ವರ್ಷಗಳಲ್ಲಿ ನೀಡಿರುವ ಅನುದಾನ ಮತ್ತು ಶಾಸಕರು ಮಾಡಿರುವ ಖರ್ಚಿನ ವಿವರಗಳು ಇಲ್ಲಿವೆ.
2013-2014 ರ ಅನುದಾನ
2013ರಲ್ಲಿ ಸರ್ಕಾರವು ರಾಯಚೂರು ಜಿಲ್ಲೆಯ ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರಿಗೆ 1371.79 ಲಕ್ಷ ರೂಪಾಯಿ ಅನುದಾನ ನೀಡಿದೆ ಅದರಲ್ಲಿ 1228.15 ಲಕ್ಷ ರೂಪಾಯಿ ಖರ್ಚಾಗಿದ್ದರೆ 143.64 ಲಕ್ಷ ರೂಪಾಯಿ ಉಳಿಕೆ ಆಗಿದೆ.
2014-2015ರ ಅನುದಾನ
2014-15ರ ಸಾಲಿನಲ್ಲಿ ಸರ್ಕಾರವು 1599.92 ಲಕ್ಷ ರೂಪಾಯಿ ಅನುದಾನ ನೀಡಿತ್ತು, ಕಳೆದ ಸಾಲಿಗಿಂತ ಈ ಬಾರಿ ಹೆಚ್ಚು ಮಾಡಿತ್ತು, ಆದರೆ ಅದರಲ್ಲಿ 1383 ಲಕ್ಷ ರೂಪಾಯಿ ಮಾತ್ರವೇ ಖರ್ಚಾಗಿ 215.93 ಲಕ್ಷ ಉಳಿಕೆಯಾಗಿದೆ.
2015-2016 ರ ಅನುದಾನ
2015-2016 ಸಾಲಿನಲ್ಲಿ ಸರ್ಕಾರವು ಬರೋಬ್ಬರಿ 1600 ಲಕ್ಷ ರೂಪಾಯಿಗಳನ್ನು ಅನುದಾನವಾಗಿ ಬಿಡುಗಡೆ ಮಾಡಿದೆ. ಆದರೆ ಅದರಲ್ಲಿ ಖರ್ಚಾಗಿದ್ದು ಕೇವಲ 1047.53 ಲಕ್ಷವಷ್ಟೆ, ಇನ್ನು 552.47 ಲಕ್ಷ ರೂಪಾಯಿ ಉಳಿಕೆ ಆಗಿದೆ.
2016-17 ರ ಸಾಲಿನ ಅನುದಾನ
2016-2017ರ ಸಾಲಿನಲ್ಲಿ ರಾಜ್ಯ ಸರ್ಕಾರವು ರಾಯಚೂರು ಜಿಲ್ಲೆಗೆ ನೀಡಿರುವುದು 1800 ಲಕ್ಷ ರೂಪಾಯಿ ಅನುದಾನ. ಇದರಲ್ಲಿ ಖರ್ಚಾದದ್ದು 1095.32 ಲಕ್ಷ. ಉಳಿಕೆ 704.68 ಲಕ್ಷ ರೂಪಾಯಿ.
2017-2018ರ ಸಾಲಿನ ಅನುದಾನ
2017-2018ರ ಸಾಲಿನಲ್ಲಿ ಸರ್ಕಾರವು ಉಳಿದ ಮೂರು ವರ್ಷಗಳಿಗಿಂತ ಕಡಿಮೆ ಅನುದಾನ ನೀಡಿದೆ. ಈ ಬಾರಿ ಸರ್ಕಾರವು 1350 ಲಕ್ಷ ಅನುದಾನವನ್ನು ನೀಡಿದೆ. ಆದರೆ ಚುನಾವಣೆ ಸಮೀಪಿಸಿದ ಕಾರಣ ಹಾಗೂ ಇನ್ನೂ ಹಣಕಾಸು ವರ್ಷ ಮುಗಿಯದ ಕಾರಣ ಈ ವರೆಗೆ 500 ಲಕ್ಷವಷ್ಟೆ ಖರ್ಚಾಗಿದ್ದು, 849 ಲಕ್ಷ ರೂಪಾಯಿ ಅನುದಾನ ಬಾಕಿ ಉಳಿದಿದೆ.
ಖರ್ಚು ಮಾಡದೇ ಉಳಿದದ್ದು ಹೆಚ್ಚು
ರಾಯಚೂರು ಜಿಲ್ಲೆಗೆ ಸಮರ್ಪಕವಾದ ಅನುದಾನವನ್ನೇ ಸರ್ಕಾರ ನೀಡಿರುವುದು ಪಟ್ಟಿಯಿಂದ ಗೊತ್ತಾಗುತ್ತದೆ. ಅದರಲ್ಲಿಯೂ ವರ್ಷಂಪ್ರತಿ ಸರ್ಕಾರವು ಅನುದಾನವನ್ನು ಅವಶ್ಯಕತೆಗೆ ಅನುಗುಣವಾಗಿ ಏರಿಸುತ್ತಲೇ ಬಂದಿದೆ. ಆದರೆ ಸ್ಥಳೀಯ ಶಾಸಕರು ಪೂರ್ಣ ಅನುದಾನವನ್ನು ಖರ್ಚು ಮಾಡಲು ವಿಫಲರಾಗಿ ಅನುದಾನವು ಸರ್ಕಾರಿ ಖಜಾನೆಗೆ ವಾಪಾಸ್ಸಾಗಿದೆ. ಸರ್ಕಾರ ನೀಡಿದ ಅನುದಾನದ ಸಂಪೂರ್ಣ ಲಾಭವನ್ನು ಜನಕ್ಕೆ ತಲುಪಿಸಲು ಸ್ಥಳೀಯ ಶಾಸಕರು ಸಂಪೂರ್ಣವಾಗಿ ಸಫರಾಗಿಲ್ಲ ಎಂದು ಹೇಳಬಹುದಾಗಿದೆ.