ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.48 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ
ರಾಯಚೂರು, ಆಗಸ್ಟ್ 18: ರಾಯಚೂರು ಜಿಲ್ಲೆಯ ಬಸವ ಸಾಗರ ಜಲಾಶಯ(ನಾರಾಯಣಪುರ ಜಲಾಶಯ) ದಿಂದ ಕೃಷ್ಣಾ ನದಿಗೆ 2.48 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗುತ್ತಿದೆ.
ನಾರಾಯಣಪುರ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಜನತೆಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ
ನೆರೆಯ ರಾಜ್ಯ ಮಹಾರಾಷ್ಟ್ರ ಮತ್ತು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ರಾಯಚೂರು ಜಿಲ್ಲೆಯಲ್ಲಿರುವ ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ.
ಸದ್ಯ ಬಸವ ಸಾಗರ ಜಲಾಶಯಕ್ಕೆ 2.5 ಲಕ್ಷ ಕ್ಯೂಸೆಕ್ಸ್ ನೀರು ಒಳ ಹರಿವಿದ್ದು, ಹೊರ ಹರಿವು 2.48 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಗರಿಷ್ಠ ಜಲಾಶಯದ ಮಟ್ಟ 492.25 ಮೀಟರ್ ಇದ್ದು, ಸದ್ಯ ೪೮೯.೯೫ ಮೀಟರ್ ನೀರಿದೆ. ಈ ಜಲಾಶಯದಲ್ಲಿ 33.31 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು, ಸದ್ಯ 23.82 ಟಿಎಂಸಿ ನೀರು ಸಂಗ್ರಹವಿದೆ.
ಕೃಷ್ಣ ನದಿ ನೀರಿನಲ್ಲಿ ಕೊಚ್ಚಿ ಬಂದಿರುವ ಜೋಡೆತ್ತುಗಳು ಪ್ರವಾಹದಲ್ಲಿ ಈಜಿ ದಡ ಸೇರಿವೆ. ರಾಯಚೂರು ತಾಲೂಕಿನ ಆತ್ಕೂರು ಗ್ರಾಮದ ರೈತರಿಂದ ಎತ್ತುಗಳ ರಕ್ಷಣೆ ಮಾಡಲಾಗಿದೆ.
ಮಹಾರಾಷ್ಟ್ರ ಘಟ್ಟಪ್ರದೇಶದಲ್ಲಿ ವರುಣನ ಅಬ್ಬರ ಮುಂದುವೆರೆದಿದ್ದು, ಅಲ್ಲಿನ ಎಲ್ಲ ಜಲಾಶಯಗಳು ಭರ್ತಿಗೊಂಡಿವೆ. ಹೀಗಾಗಿ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.