ಅರಣ್ಯ ಇಲಾಖೆಯವರ ಕೈಗೆ ಸಿಗದ ಮೊಸಳೆ ಮೀನುಗಾರರಿಗೆ ಸಿಕ್ಕಿತು!
ರಾಯಚೂರು, ಜೂನ್.10: ಕೆರೆಯಲ್ಲಿ ಕಾಣಿಸಿಕೊಂಡಿದ್ದ ಮೊಸಳೆಯನ್ನು ಮೀನುಗಾರರು ಸೆರೆ ಹಿಡಿದ ಘಟನೆ ಮರ್ಚೆಡ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಕೆರೆಯಲ್ಲಿ ನಾಲ್ಕೈದು ದಿನಗಳ ಹಿಂದೆ ಮೊಸಳೆ ಪತ್ತೆಯಾಗಿತ್ತು.
ಹೀಗಾಗಿ ಸುತ್ತಲಿನ ಜನರಲ್ಲಿ ಆತಂಕ ಮನೆ ಮಾಡಿತ್ತು. ಅಲ್ಲದೇ ಮೀನುಗಾರರು ಕೆರೆಗೆ ಇಳಿಯಲು ಹಿಂದೇಟು ಹಾಕುತ್ತಿದ್ದರು. ಮೊಸಳೆ ಹಿಡಿಯಲು ಅರಣ್ಯ ಇಲಾಖೆಯವರು ಹರಸಾಹಸ ಪಟ್ಟಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ ಆ ಮೊಸಳೆ ಭಾನುವಾರ ಮೀನುಗಾರರ ಕೈಗೆ ಸಿಕ್ಕಿಬಿದ್ದಿದೆ.
ಕಾವೇರಿ ನದಿಗೆ ಸ್ನಾನಕ್ಕೆಂದು ತೆರಳಿದ್ದ ವ್ಯಕ್ತಿ ಮೊಸಳೆಗೆ ಬಲಿ
ಇಂದು ಭಾನುವಾರ ಮನ್ಸಲಾಪೂರ ಗ್ರಾಮ ಮೀನುಗಾರರು ಮೊಸಳೆ ಹಿಡಿದಿದ್ದಾರೆ. ಅರಣ್ಯ ಇಲಾಖೆಗೆ ಮೀನುಗಾರರು ಮಾಹಿತಿ ನೀಡಿದ್ದು, ಸ್ಥಳಕ್ಕೆ ತೆರಳುತ್ತಿದ್ದಾರೆ.
ತಿಂಗಳ ಹಿಂದೆಯಷ್ಟೇ ಕೃಷ್ಣಾ ನದಿಯಿಂದ ಬಂದ 10 ಅಡಿ ಉದ್ದದ ಮೊಸಳೆಯನ್ನು ಝುಂಜರವಾಡ ಗ್ರಾಮಸ್ಥರು ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದರು. ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಮೊಸಳೆಗಳು ಆಗಾಗ ಆಹಾರ ಅರಸಿ ನದಿಯಿಂದ ಮೇಲೆ ಬರುವುದು, ಕೆರೆಗಳಲ್ಲಿ ಕಾಣಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.