ರಾಯಚೂರು : ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು, ಚಾರ್ಜ್ ಶೀಟ್ ಸಲ್ಲಿಕೆ
ರಾಯಚೂರು, ಜುಲೈ 17 : ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣದ ಕುರಿತು ಸಿಐಡಿ ಚಾರ್ಜ್ಶೀಟ್ ಸಲ್ಲಿಸಿದೆ. ಆರೋಪಿ ಸುದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾನೆ.
23 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಕುರಿತು ತನಿಖೆ ನಡೆಸಿದ ಸಿಐಡಿ ಒಂದು ಸಾವಿರ ಪುಟದ ಚಾರ್ಜ್ಶೀಟ್ಅನ್ನು ರಾಯಚೂರಿನ 3ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ. ಏಪ್ರಿಲ್ನಲ್ಲಿ ವಿದ್ಯಾರ್ಥಿನಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣ ಸಿಐಡಿಗೆ
ವಿದ್ಯಾರ್ಥಿನಿ ಹತ್ಯೆಗೆ ಸಂಬಂಧಿಸಿದಂತೆ ಸುದರ್ಶನ್ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆತ್ಮಹತ್ಯೆಗೆ ಪ್ರಚೋದನೆ, ಕಿರುಕುಳ, ಅಡ್ಡಗಟ್ಟಿ ಹಲ್ಲೆ ಮಾಡಿದ್ದಾನೆ ಎಂಬ ಆರೋಪಗಳು ಆತನ ಮೇಲಿದೆ.
ರಾಯಚೂರು ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣಕ್ಕೆ ತಿರುವು
60 ಸಾಕ್ಷಿಗಳು, 45 ದಾಖಲೆಗಳನ್ನು ಸಿಐಡಿ ಪೊಲೀಸರು ಚಾರ್ಜ್ಶೀಟ್ ಜೊತೆಗೆ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಸಾವನ್ನಪ್ಪಿದ ಕೆಲವು ದಿನಗಳ ಬಳಿಕ ಶವ ಪತ್ತೆಯಾದ ಕಾರಣ ಕಪ್ಪು ಬಣ್ಣಕ್ಕೆ ತಿರುಗಿದೆ. ಯಾವುದೇ ಸುಟ್ಟಗಾಯಗಳು ಆಗಿಲ್ಲ ಎಂದು ಮರಣೋತ್ತರ ವರದಿ ಹೇಳಿದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ರಾಯಚೂರು ವಿದ್ಯಾರ್ಥಿನಿ ಸಾವು : ಆರೋಪಿಗೆ ನ್ಯಾಯಾಂಗ ಬಂಧನ
ಇಬ್ಬರು ಪ್ರೀತಿಸುತ್ತಿದ್ದರು : ಆರೋಪಿ ಸುದರ್ಶನ ಮತ್ತು ವಿದ್ಯಾರ್ಥಿನಿ ಪಿಯುಸಿಯಲ್ಲಿ ಸಹಪಾಠಿಗಳಾಗಿದ್ದರು. ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಕೆಲವು ದಿನಗಳಿಂದ ಆರೋಪಿಗೆ ವಿದ್ಯಾರ್ಥಿನಿ ನಡವಳಿಕೆ ಬಗ್ಗೆ ಅನುಮಾನ ಉಂಟಾಗಿತ್ತು. ಈ ಬಗ್ಗೆ ಇಬ್ಬರ ನಡುವೆ ಜಗಳವಾಗಿತ್ತು.
ಇದರಿಂದಾಗಿ ಆರೋಪಿಯಿಂದ ವಿದ್ಯಾರ್ಥಿನಿ ಅಂತರ ಕಾಯ್ದುಕೊಂಡಿದ್ದಳು. ಏಪ್ರಿಲ್ 13ರಂದು ಆಕೆ ಕಾಲೇಜಿಗೆ ತೆರಳುವಾಗ ದಾರಿಯಲ್ಲಿ ಅಡ್ಡಗಟ್ಟಿದ್ದ ಆರೋಪಿ ಜಗಳವಾಡಿದ್ದನು. ಕಾಲೇಜಿಗೆ ಹಿಂಬಾಲಿಸಿಕೊಂಡು ಬಂದು ತನ್ನನ್ನು ಮಾತ್ರ ಪ್ರೀತಿಸಬೇಕು ಎಂದು ಕೂಗಾಡಿದ್ದನು.
ಕಾಲೇಜು ಪಾರ್ಕಿಂಗ್ ಆವರಣದಲ್ಲಿ ಆಕೆ ಮೊಬೈಲ್, ಬೈಕ್ ಕೀ ಕಸಿದುಕೊಂಡಿದ್ದನು. ಪ್ರೀತಿಸದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದನು. ಇದರಿಂದಾಗಿ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಚಾರ್ಜ್ಶೀಟ್ನಲ್ಲಿ ಸಿಐಡಿ ಹೇಳಿದೆ.
ಏನಿದು ಪ್ರಕರಣ : ರಾಯಚೂರಿನ ನವೋದಯ ಇಂಜಿನಿಯರಿಂಗ್ ಕಾಲೇಜಿನ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಏಪ್ರಿಲ್ 13ರಂದು ಪರೀಕ್ಷೆ ಬರೆಯಲು ಹೋದವಳು ನಾಪತ್ತೆಯಾಗಿದ್ದಳು. ಏಪ್ರಿಲ್ 16ರಂದು ಕಾಲೇಜಿನಿಂದ 4 ಕಿ.ಮೀ.ದೂರದ ನಿರ್ಜನ ಪ್ರದೇಶದಲ್ಲಿ ಆಕೆಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಮೊದಲು ರಾಯಚೂರು ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದರು. ಆದರೆ, ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಆದ್ದರಿಂದ, ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು.