ರಾಯಚೂರು: ರಿಮ್ಸ್ ಆಸ್ಪತ್ರೆ ನಿರ್ವಹಣೆ ಹೆಸರಿನಲ್ಲಿ ವೈದ್ಯರಿಂದಲೇ ಅಕ್ರಮ?
ರಾಯಚೂರು, ಜುಲೈ, 28 : ರಾಯಚೂರಿನಲ್ಲಿರುವ ರಿಮ್ಸ್ ಆಸ್ಪತ್ರೆ ನಿರ್ವಹಣೆ ಹೆಸರಿನಲ್ಲಿ ವೈದ್ಯರೇ ಲೂಟಿ ಮಾಡಲು ನಿಂತಿದ್ದಾರೆ ಎಂದು ಗಂಭೀರ ಆರೋಪಗಳು ಕೇಳಿಬರುತ್ತಿವೆ. ಆರ್ಥಿಕ ಪರಿಸ್ಥಿತಿಯಲ್ಲಿ ಕುಗ್ಗಿ ಹೋಗಿರುವಂತಹ ಬಡವರಿಗಾಗಿ ಈ ಆಸ್ಪತ್ರೆಯನ್ನು ಮೀಸಲಿಟ್ಟಿದ್ದಾರೆ. ಆದರೆ ಇಲ್ಲಿ ಪ್ರತಿನಿತ್ಯವೂ ಔಷಧಿಯಿಂದ ಹಿಡಿದು, ರೋಗಿಗಳ ಬೆಡ್ಗಳವರೆಗೂ ಅವ್ಯವಹಾರ ನಡೆಯುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಆಸ್ಪತ್ರೆಯನ್ನು ಕಸಾಯಿ ಖಾನೆಯಂತೆ ಮಾಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿ ನೆಪಕ್ಕೆ ಮಾತ್ರ ವೈದ್ಯರಿದ್ದಾರೆ ಅಷ್ಟೇ. ಇವರು ಕರ್ತವ್ಯ ನಿರ್ವಹಿಸುವುದು ಖಾಸಗಿ ಆಸ್ಪತ್ರೆಗಳಲ್ಲಿ, ಇನ್ನು ಸಮಯ ಸಿಕ್ಕಾಗ ಮಾತ್ರ ರಿಮ್ಸ್ ಅಸ್ಪತ್ರೆಗೆ ಬರುತ್ತಾರೆ ಯಾಕೆ ಅಂತೀರಾ ದಂಧೆ ಮಾಡುವ ಉದ್ದೇಶಕ್ಕೆ ಅಷ್ಟೇ. ಸರ್ಕಾರದಿಂದ ಬಂದ ಔಧಿಗಳನ್ನು ರೀಗಿಗಳಿಗೆ ಕೊಡುವುದಿಲ್ಲ. ಬದಲಾಗಿ ಖಾಸಗಿ ಔಷಧಿ ಅಂಗಡಿಗಳಿಗೆ ಬಿಲ್ ಬರೆಯುತ್ತಾರೆ.
ಹೀಗೆ ವೈದ್ಯೂ ನಾರಾಯಣ ಹರಿ ಎಂಬ ಪದಕ್ಕೆ ವೈದ್ಯರು ಅಪಕೀರ್ತಿ ತರುತ್ತಿದ್ದಾರೆ. ರೋಗಿಗಳು ಉತ್ತಮ ಚಿಕಿತ್ಸೆ, ಉಳಿದುಕೊಳ್ಳಲು ಸ್ವಚ್ಛತೆ ಇಲ್ಲದೇ ಆಸ್ಪತ್ರೆಯಲ್ಲಿ ನರಳಾಡುವಂತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪದೇ ಪದೇ ವಿವಾದ ಮತ್ತು ದೂರುಗಳು ಬರುತ್ತಿವೆ. ಇದನ್ನು ಸುಧಾರಿಸುವಲ್ಲಿ ಅಲ್ಲಿನ ಆಡಳಿತ, ಸ್ಥಳೀಯ ಸಂಸದರು, ಶಾಸಕರು ಹಾಗೂ ಆಸ್ಪತ್ರೆ ನಿರ್ವಹಣಾ ಸಮಿತಿ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ರೋಗಿಗಳು ಪ್ರತಿನಿತ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ನರಕ ದೃಶ್ಯ
ರಿಮ್ಸ್ ಆಸ್ಪತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಒಳ ರೋಗಿಗಳು ಮತ್ತು ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಆದರೆ ವ್ಯಕ್ತಿಗಳ ರೋಗಕ್ಕಿಂತ ಅಲ್ಲಿಯ ಪರಿಸರ, ವೈದ್ಯರು ಹಾಗೂ ಸಿಬ್ಬಂದಿಯ ವರ್ತನೆ ಅತ್ಯಂತ ದಾರುಣವಾಗಿರುತ್ತದೆ. ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗಲು ಆರ್ಥಿಕ ಸಾಮರ್ಥ್ಯವಿಲ್ಲದೆ ರಿಮ್ಸ್ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಮತ್ತು ಸಿಬ್ಬಂದಿ ವರ್ಗ ಮಾಡುವ ಅಪಚಾರಗಳು ರೋಗಿಗಳ ಪಾಲಿಗೆ ನರಕವಾಗಿದೆ.
ವೈದ್ಯರ ವಿರುದ್ಧ ಆರೊಪಗಳ ಸುರಿಮಳೆ
ಸಣ್ಣ ಮಾತ್ರೆಯಿಂದ ಹಿಡಿದು ಭಾರೀ ಮೊತ್ತದ ಚುಚ್ಚು ಮದ್ದುಗಳನ್ನು ಕೂಡ ಖಾಸಗಿ ಔಷಧಿ ಅಂಗಡಿಯಿಂದ ತರಬೇಕು ಎನ್ನುವುದು ಇಲ್ಲಿ ಕಡ್ಡಾಯವಾಗಿದೆ. ಇದು ಈ ಆಸ್ಪತ್ರೆ ವೈದ್ಯರ, ಸಿಬ್ಬಂದಿಗಳ ದ್ಯೇಯ ವಾಕ್ಯವಾಗಿದೆ. ಆಸ್ಪತ್ರೆಗೆ ದಾಖಲಾದ ನಂತರ ವೈದ್ಯರು ಕಾಲ ಕಾಲಕ್ಕೆ ಉಪಚಾರ ಮಾಡುತ್ತಿಲ್ಲ. ಇಲ್ಲಿಯ ಬಹುತೇಕ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ನಂತರ ಈ ಆಸ್ಪತ್ರೆಗೆ ಭೇಟಿ ನೀಡಿ, ತರಾತುರಿಯಾಗಿ ಕೆಲ ರೋಗಿಗಳನ್ನು ಮಾತ್ರ ನೋಡುತ್ತಾರೆ. ಉಳಿದ ರೋಗಿಗಳ ತಪಾಸಣೆಯನ್ನು ಶುಶ್ರೂಷಕರಿಗೆ ಬಿಡಲಾಗುತ್ತದೆ. ಹೀಗೆ ವೈದ್ಯರು, ಶುಶ್ರೂಷಕರು ಬೇಕಾಬಿಟ್ಟಿಯಾಗಿ ತಮಗೆ ಇಷ್ಟ ಬಂದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವ ಗಂಭೀರ ಆರೋಗಳು ಕೇಳಿಬರುತ್ತಿವೆ.
ಅವ್ಯವಸ್ಥೆ ವಿರುದ್ಧ ಧ್ವನಿ ಎತ್ತದ ಜನಪ್ರತಿನಿಧಿಗಳು
ವೈದ್ಯರು, ಶುಶ್ರೂಕರು ನೆಪ ಮಾತ್ರಕ್ಕೆ ಇದ್ದು, ರೋಗಿಗಳ ಕಡೆಯಿಂದ ಬಂದ ವ್ಯಕ್ತಿಗಳೇ ಅಲ್ಲಿನ ಬೆಡ್ಗಳನ್ನು ಸ್ವಚ್ಛಗೊಳಿಸಬೇಕು. ಮತ್ತು ಅಗತ್ಯವಾದ ವ್ಯವಸ್ಥೆಯನ್ನು ಅವರೇ ಮಾಡಿಕೊಳ್ಳುವಂತಾಗಿದೆ. ಈ ಅವ್ಯವಸ್ಥೆ ಬಗ್ಗೆ ಆಸ್ಪತ್ರೆಯ ಡೀನ್ ಅವರಿಗೆ ಗೊತ್ತಿದ್ದರೂ, ಅವರು ಇದನ್ನು ಸುಧಾರಿಸುವ ಪ್ರಯತ್ನವನ್ನೂ ಮಾಡುತ್ತಿಲ್ಲ. ರಿಮ್ಸ್ ಆಸ್ಪತ್ರೆ ವೈದ್ಯರ ವಿರುದ್ಧ ಆರೋಪಗಳು ಕೇಳಿ ಬರುತ್ತಿದ್ದರೂ ಶಾಸಕರು, ಸಂಸದರು ಈ ಬಗ್ಗೆ ಗಮನ ಹರಿಸುತ್ತಿಲ್ಲ.
ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಅಸಲಿ ವೃತ್ತಿ
ಬಡವರ ಪಾಲಿಗೆ ಸಂಜೀವಿನಿ ಆಗಬೇಕಾಗಿದ್ದ ರಿಮ್ಸ್ ಆಸ್ಪತ್ರೆ ಸಮಸ್ಯೆಗಳ ಆಗರವಾಗಿದೆ. ಈ ಬಗ್ಗೆ ಯಾರು ಕೇಳುವವರು ದಿಕ್ಕಿಲ್ಲದಂತಾಗಿದೆ. ಬಡವರಿಗಾಗಿ ನಿರ್ಮಿಸಿದ ಈ ಆಸ್ಪತ್ರೆಯು ಇದೀಗ ಬಹುತೇಕ ವೈದ್ಯರು, ಸಿಬ್ಬಂದಿ ವರ್ಗಕ್ಕೆ ತಿಂಗಳು ವೇತನದ ಕೇಂದ್ರವಾಗಿ ಮಾರ್ಪಟ್ಟಿದೆ. ಸೇವಾ ಮನೋಭಾವನೆಗಿಂತ ರೋಗಿಗಳ ಬಳಿ ಹಣ ವಸೂಲಿ ಮಾಡುವಂತಹ ಸುಲಿಗೆ ಕೆಲಸ ನಡೆಯುತ್ತಿದೆ. ರಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಜನರ ಪಕ್ಕದಲ್ಲಿಯೇ ಹಂದಿಗಳು ಅಡ್ಡಾಡುತ್ತಿರುತ್ತವೆ. ಇಂತಹ ಸನ್ನಿವೇಶಗಳು ಇದ್ದರೂ, ಅಲ್ಲಿನ ಆಡಳಿತ ವ್ಯವಸ್ಥೆ ಮಾತ್ರ ಕ್ಯಾರೆ ಅನ್ನದೇ ಕೇವಲ ದುಡ್ಡು ಮಾಡುವ ದಾರಿಯನ್ನು ಹಿಡಿದಿದೆ ಎನ್ನುವ ಆರೋಪಗಳು ವ್ಯಕ್ಯವಾಗುತ್ತಿವೆ.
ಜಿಲ್ಲಾ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿ ಮಾಡುವ ಕನಿಷ್ಟ ಪ್ರಯತ್ನಗಳು ನಡೆಯುತ್ತಿಲ್ಲ. ಇಲ್ಲಿಯ ಸಂಸದರು, ಶಾಸಕರ ವೈಫಲ್ಯಕ್ಕೆ ನಿದರ್ಶನವಾಗಿದೆ. ಪ್ರತಿ ವರ್ಷ ಲಕ್ಷಾಂತರ ಜನ ಚಿಕಿತ್ಸೆ ಪಡೆಯುವ ಈ ಆಸ್ಪತ್ರೆಯಲ್ಲಿ ನಿರ್ವಹಣೆಗೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅಲ್ಲಿಯ ಸಿಬ್ಬಂದಿಗಳು ಮತ್ತು ಕೆಲ ರಾಜಕಾರಣಿಗಳ ಹಿಂಬಾಲಕರು ಸಾಮಾಗ್ರಿ ಪೂರೈಕೆ ಹೆಸರಿನಲ್ಲಿ ಬಡವರಿಗಾಗಿ ಮೀಸಲಿಟ್ಟ ಔಷಧಿಗಳನ್ನು ಲೂಟಿ ಮಾಡುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿವೆ.
Recommended Video