ರಾಯಚೂರು ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ, ಸಂಧಾನ ಯತ್ನ
ರಾಯಚೂರು, ಮಾರ್ಚ್ 24: ರಾಯಚೂರು ಜಿಲ್ಲೆಯಲ್ಲಿ ಬಿಜೆಪಿ ಭಿನ್ನಮತ ಸ್ಪೋಟಗೊಂಡಿದೆ. ಜಿಲ್ಲೆಯ ಬಿಜೆಪಿ ಮುಖಂಡರ ಪಕ್ಷಾಂತರ ಪರ್ವ ಬಿಜೆಪಿ ವರಿಷ್ಠರನ್ನು ಕಂಗಾಲು ಮಾಡಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇದೀಗ ರಾಯಚೂರು ನಗರ ಕ್ಷೇತ್ರದ ಬಿಜೆಪಿ ಆಕಾಂಕ್ಷಿಗಳು ರಾಜ್ಯ ಬಿಜೆಪಿ ಮುಖಂಡರ ಮೇಲೆ ಸಿಟ್ಟಾಗಿದ್ದು ಜಿಲ್ಲೆಯಲ್ಲಿ ಬಿಜೆಪಿ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ರಾಯಚೂರು ನಗರ ಕ್ಷೇತ್ರದ ಬಿಜೆಪಿ ಆಕಾಂಕ್ಷಿಗಳು ಸೇರಿ ಹಲವು ಮುಖಂಡರು ಖಾಸಗಿ ಹೋಟೆಲ್ನಲ್ಲಿ ಸಭೆ ಸೇರೋ ಮೂಲಕ ಬಿಜೆಪಿ ವರಿಷ್ಠರಿಗೆ ಸೆಡ್ಡು ಹೊಡೆದಿದ್ದಾರೆ. ಇತ್ತೀಚೆಗೆ ಜೆಡಿಎಸ್ನಿಂದ ಬಿಜೆಪಿ ಸೇರಿರುವ ಮಾಜಿ ಶಾಸಕ ಡಾ.ಶಿವರಾಜ ಪಾಟೀಲ್ಗೆ ಯಾವುದೇ ಕಾರಣಕ್ಕೂ ಬಿಜೆಪಿ ಟಿಕೆಟ್ ನೀಡಬಾರದು ಎಂದು ಬಿಜೆಪಿ ಆಕಾಂಕ್ಷಿಗಳು ಒತ್ತಡ ಹೇರಿದ್ದಾರೆ.
ಸ್ಥಳೀಯ ಮುಖಂಡರ ವಿರೋಧದ ನಡುವೆಯೂ ಮಾಜಿ ಶಾಸಕ ಡಾ.ಶಿವರಾಜ ಪಾಟೀಲ್ರನ್ನ ಬಿಜೆಪಿಗೆ ಸೇರ್ಪಡಿಸಿಕೊಳ್ಳಲಾಗಿದೆ. ಅಲ್ಲದೇ ಇತ್ತೀಚೆಗೆ ಲಿಂಗಸುಗೂರಿನಲ್ಲಿ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಡಾ.ಶಿವರಾಜ ಪಾಟೀಲ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಇದು ಮೂಲ ಬಿಜೆಪಿಗರಿಗೆ ಆಕ್ರೋಶ ಉಂಟು ಮಾಡಿದೆ.
ಬಿಜೆಪಿಯಲ್ಲಿ ಭಿನ್ನಮತ ಸಾರಿರೋ 12 ಜನ ಆಕಾಂಕ್ಷಿಗಳನ್ನು ರಾಯಚೂರಿನ ಖಾಸಗಿ ಹೋಟೆಲ್ನಲ್ಲಿ ಭೇಟಿಯಾದ ಮಾಜಿ ಸಚಿವರಾದ ವಿ.ಸೋಮಣ್ಣ ಹಾಗೂ ಸಿ.ಟಿ.ರವಿ ಅಸಮಧಾನಗೊಂಡಿರೋ ಆಕಾಂಕ್ಷಿಗಳ ಮನವೊಲಿಸೊ ಪ್ರಯತ್ನ ಮಾಡಿದರು. ಭಿನ್ನಮತಿಯರ ಬೇಡಿಕೆಗಳನ್ನು ಕೇಳಿದ ವಿ.ಸೋಮಣ್ಣ ಹಾಗೂ ಸಿಟಿ ರವಿ ವರಿಷ್ಠರ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.
ಇನ್ನು ಬಿಜೆಪಿಯ ಯಾವುದೇ ಅಭ್ಯರ್ಥಿಗಳು ಅಂತಿಮವಾಗಿಲ್ಲ. ಪಕ್ಷದ ಸಂಸದೀಯ ಮಂಡಳಿಯ ತೀರ್ಮಾನವೇ ಅಂತಿಮವಾಗಿದ್ದು ಕಾಯಲು ಸೂಚಿಸಿದ್ದಾರೆ. ಜೊತೆಗೆ ಬಿ.ಎಸ್.ಯಡಿಯೂರಪ್ಪ ಘೋಷಿಸಿದ ಅಭ್ಯರ್ಥಿಗಳೇ ಅಂತಿಮವಲ್ಲ ಎಂಬುದನ್ನು ಪರೋಕ್ಷವಾಗಿ ಸಿ.ಟಿ.ರವಿ ಹೇಳಿದ್ದಾರೆ.
ರಾಯಚೂರು ನಗರ ಕ್ಷೇತ್ರಕ್ಕೆ 12 ಜನ ಆಕಾಂಕ್ಷಿಗಳಲ್ಲಿ ಯಾರಿಗಾದರೂ ಬಿಜೆಪಿ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಮುಂದಿನ ನಡೆಯನ್ನು ನಾವು ತೀರ್ಮಾನಿಸುತ್ತೇವೆ ಎಂಬ ಮುನ್ಸೂಚನೆಯನ್ನು ನೀಡಿದ್ದಾರೆ. ಪಕ್ಷ ಸಂಘಟನೆಗೆ ಶ್ರಮಿಸಿದವರನ್ನು ಬಿಟ್ಟು ಬೇರೆ ಪಕ್ಷದಿಂದ ಬಂದವರಿಗೆ ಮಣೆ ಹಾಕಿದ್ದು ಭಿನ್ನಮತಕ್ಕೆ ಕಾರಣವಾಗಿದೆ. ಬಿಜೆಪಿಯಲ್ಲಿನ ಭಿನ್ನಮತ ಹಾಗೂ ಬಿಜೆಪಿಯಿಂದ ಪಕ್ಷಾಂತರ ಮಾಡುತ್ತಿರುವುದನ್ನ ಗಮನಿಸಿದರೆ ಯಾವುದೂ ನೆಟ್ಟಗ್ಗಿಲ್ಲ ಎಂಬುದು ಸ್ಪಷ್ಟ.