ರಾಯಚೂರು: ಲವ್ ಕೇಸರಿ ಹೇಳಿಕೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಕಾಂಗ್ರೆಸ್, ಜೆಡಿಎಸ್
ರಾಯಚೂರ ಏಪ್ರಿಲ್ 12: ಕಳೆದ ಏಪ್ರಿಲ್ 10ರಂದು ರಾಯಚೂರಿನಲ್ಲಿ ಆಯೋಜಿಸಿದ್ದ ಶ್ರೀರಾಮ ನವಮಿ ಕಾರ್ಯಕ್ರಮದಲ್ಲಿ ಅನ್ಯಧರ್ಮದ ಕುರಿತು ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ್ದ ಜಿಲ್ಲಾ ಸಂಚಾಲಕ ರಾಜಾಚಂದ್ರ ರಾಮನಗೌಡ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದಲಿತ ಹಿಂದುಳಿದ ಅಲ್ಪಸಂಖ್ಯಾತ ಐಕ್ಯ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಪತ್ರ ಸಲ್ಲಿಸಿದೆ.
ಶ್ರೀರಾಮನವಮಿ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲವ್ ಜಿಹಾದ್ ಬದಲಿಗೆ ಲವ್ ಕೇಸರಿ ಎನ್ನುವ ಟ್ರೆಂಡ್ ಸೃಷ್ಟಿಯಾಗಬೇಕು ಎಂದು ಶ್ರೀರಾಮಸೇನೆ ಕರೆ ನೀಡಿದೆ. ಹೆಣ್ಣು ಮಕ್ಕಳನ್ನು ಮಕ್ಕಳು ಹೆರುವ ಯಂತ್ರ ಎಂದು ಅವರು ಅಂದುಕೊಂಡಿದ್ದಾರೆ. ನಮ್ಮ ಪ್ರತಿ ಕಾರ್ಯಕರ್ತ ಕೂಡಾ ಲವ್ ಜಿಹಾದ್ ಪ್ರತಿಯಾಗಿ ಲವ್ ಕೇಸರಿ ಮಾಡಬೇಕು. ರಾಯಚೂರಿನಲ್ಲಿ ಒಂದೇ ಒಂದು ಲವ್ ಜಿಹಾದ್ ಪ್ರಕರಣ ಬರಬಾರದು ಎಂದು ರಾಮಚಂದ್ರನಗೌಡ ಹೇಳಿರುವುದು ವಿವಾದಕ್ಕೆ ಎಡೆ ಮಾಡಿದೆ.
'ನಡೆಯಲು ರಸ್ತೆಗಳಿಲ್ಲ, ವಿಮಾನ ನಿಲ್ದಾಣ ನಾವೇನ್ ಮಾಡೋಣ?: ರಾಯಚೂರಿಗರ ಪ್ರಶ್ನೆ
ಮಾತ್ರವಲ್ಲದೆ ಬಹಿರಂಗವಾಗಿ ಆಯುಧಗಳನ್ನು ಪ್ರದರ್ಶಿಸಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ.
ಜೊತೆಗೆ ಕಾರ್ಯಕ್ರಮಕ್ಕೆ ಹಣಕಾಸಿನ ನೆರವು ನೀಡಿ ಜನರಲ್ಲಿ ಭಯವುಂಟು ಮಾಡುವ ಶಡ್ಯಂತ್ರದಲ್ಲಿ ಭಾಗವಹಿಸಿದವರು ಹಾಗೂ ಖಡ್ಗಗಳನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಿರುವ ಶ್ರೀರಾಮಸೇನೆಯ ನಾಯಕರು ಹಾಗೂ ಉದ್ರೇಕಕಾರಿ ಭಾಷಣ ಮಾಡಿ ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿರುವ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷರು ಹಾಗೂ ವೇದಿಕೆಯ ಮೇಲೆ ಹಾಜರಿದ್ದ ವಿವಿಧ ಮುಖಂಡರ ಮೇಲೆ ಕ್ರಿಮಿನಲ್ ಮುಕದ್ದಮೆ ಹೂಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಗಿದೆ. ವೇಳೆ ರಾಜ್ಯ ಕಾಂಗ್ರೆಸ್ ಕೆಪಿಸಿಸಿ ವಕ್ತಾರ ವಸಂತ್ ಕುಮಾರ್, ರಾಯಚೂರು ಜಿಲ್ಲಾ ಜಾತ್ಯತೀತ ಜನತಾದಳ ಅಧ್ಯಕ್ಷ ಎಂ.ವಿರೂಪಾಕ್ಷಿ ಇತರರು ಭಾಗಿಯಾಗಿದ್ದರು.
ಈ ಬಗ್ಗೆ ಒನ್ಇಂಡಿಯಾ ಕನ್ನಡದೊಂದಿಗೆ ಮಾತನಾಡಿ ಬಿಜೆಪಿ ಶಾಸಕ ಶಿವರಾಜ ಪಾಟೀಲ್, 'ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಹೇಳಿಕೆ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆದಿದೆ ಎಂದು ಹೇಳಿದರು. ಈ ರೀತಿಯಾದ ಹೇಳಿಕೆ ಯಾರೂ ಕೂಡ ಸಹಿಸುವುದಿಲ್ಲ. ಇಂತಹ ಹೇಳಿಕೆಗಳು ಸಮಾಜದಲ್ಲಿ ಶಾಂತಿ ಕದಡುತ್ತವೆ ಎಂದು ಅವರು ಹೇಳಿದರು. ಜೊತೆಗೆ ಇಂಥಹ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿದ್ದಾರೆ' ಎಂದು ಅವರು ತಿಳಿಸಿದ್ದಾರೆ.