ರಾಯಚೂರಲ್ಲಿ ಕಲುಷಿತ ನೀರು: ವಾಂತಿ ಬೇಧಿಯಿಂದ ಒಬ್ಬ ಮಹಿಳೆ ಬಲಿ, ನೂರಾರು ಜನರು ಅಸ್ವಸ್ಥ
ರಾಯಚೂರು, ಮೇ 31: ಕಲುಷಿತ ಕುಡಿವ ನೀರು ಪೂರೈಕೆಯಿಂದ ವಾಂತಿ ಬೇಧಿ ಉಲ್ಬಣಗೊಂಡು ನಗರದ ಓರ್ವ ಮಹಿಳೆ ಮೃತಪಟ್ಟು, ವಿವಿಧ ವಾರ್ಡ್ಗಳ ನೂರಾರು ಜನ ಗಂಭೀರ ಪರಿಸ್ಥಿತಿಯಲ್ಲಿ ರಿಮ್ಸ್ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ನರಳುವಂತಿದ್ದಾರೆ.
ಕುಡಿವ ನೀರು ಪೂರೈಕೆಗೆ ಸಂಬಂಧಿಸಿದಂತೆ ಕಳೆದ 15 ದಿನಗಳಿಂದ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ನಗರಸಭೆ ನಿರ್ಲಕ್ಷ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸಕಾಲಕ್ಕೆ ಎಚ್ಚೆತ್ತುಕೊಳ್ಳದ ಪರಿಣಾಮ ನೂರಾರು ಜನರು ವಾಂತಿ, ಬೇಧಿಯ ಶಾಪಕ್ಕೆ ಗುರಿಯಾಗಿ ರಿಮ್ಸ್ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 24x7 ಶುದ್ಧ ಕುಡಿವ ನೀರು ಪೂರೈಕೆಗೆ 135 ಕೋಟಿ ಯೋಜನೆಯಲ್ಲಿ70 ಕೋಟಿ ರೂ. ಗುತ್ತೇದಾರರಿಗೆ ಪಾವತಿಸಿದರೂ, ಹನಿ ನೀರು ಪೂರೈಕೆಯಾಗದೇ, ಹಣ ಲೂಟಿ ಮಾಡಿದ ಜನ ಒಂದೆಡೆ ಮಜಾ ಮಾಡುತ್ತಿದ್ದರೇ, ಜನರು ಮಾತ್ರ ಕಲುಷಿತ ನೀರಿನಿಂದ ಸಾಯುವ ಮತ್ತು ಆಸ್ಪತ್ರೆಯಲ್ಲಿ ನರಳುವಂತಹ ದುಸ್ಥಿತಿ ನಗರದಲ್ಲಿದೆ.
ರಾಯಚೂರಿನಲ್ಲಿ ಸಾವಿರಾರು ಮೀನುಗಳ ಸಾವು: ಆತಂಕ
ಕಲುಷಿತ ಕುಡಿವ ನೀರು ಪೂರೈಕೆಯಿಂದ ನಾಗರೀಕರ ಮೇಲೆ ಉಂಟಾಗುವ ದುಷ್ಪರಿಣಾಮಗಳ ನಿರ್ಲಕ್ಷ್ಯ ನೀರು ಪೂರೈಕೆ ವಾರ್ಡ್ ಗಳಲ್ಲಿ ಕೊಂಚ ಕಡಿಮೆ ಪ್ರಮಾಣದಲ್ಲಿದೆ. ನಗರಸಭೆಯಿಂದ ಶುದ್ಧ ಕುಡಿವ ನೀರು ಪೂರೈಕೆ ಮಾಡುವುದು ಕಡ್ಡಾಯವಾಗಿದೆ. ಇದಕ್ಕಾಗಿಯೇ ನಗರದ 3 ಲಕ್ಷ ಸಾರ್ವಜನಿಕರು ನೀರಿನ ಶುಲ್ಕ, ಆಸ್ತಿ ಶುಲ್ಕ ಮತ್ತು ಇನ್ನಿತರ ಶುಲ್ಕಗಳನ್ನು ತುಂಬುತ್ತಾರೆ. 100 ಕೋಟಿ ಬಜೆಟ್ ಮಂಡಿಸುವ ನಗರಸಭೆಗೆ ಸಾರ್ವಜನಿಕರಿಗಾಗಿ ಶುದ್ಧ ಕುಡಿವ ನೀರು ಪೂರೈಸಲು ಸಾಧ್ಯವಾಗದಿದ್ದರೇ, ನಗರಸಭೆ ಮತ್ತು ಇಲ್ಲಿಯ ಜನಪ್ರತಿನಿಧಿಗಳು ಮಾಡುವುದಾದರೂ ಏನು?.
ಶುದ್ಧ ಕುಡಿವ ನೀರಿಗಾಗಿ ಆಲಂ, ಬ್ಲಿಚಿಂಗ್ ಮತ್ತಿತರ ಪ್ರತಿ ತಿಂಗಳಿಗೆ ಲಕ್ಷಾಂತರ ರೂ. ಬಿಲ್ ಎತ್ತುವಳಿ ಮಾಡಿದ ನಂತರವೂ ಸಾರ್ವಜನಿಕರು ವಾಂತಿ, ಬೇಧಿಯಿಂದ ಆಸ್ಪತ್ರೆ ಪಾಲಾಗಬೇಕೇ?. ಬಹುಕೋಟಿ ವೆಚ್ಚದಲ್ಲಿ ನಗರದ ಕೃಷ್ಣಾ ಮತ್ತು ರಾಂಪೂರು ಜಲಾಶಯಗಳ ಬಳಿ ಶುದ್ಧೀಕರಣ ಘಟಕ ನಿರ್ಮಿಸಿದರೂ, ಸಾರ್ವಜನಿಕರಿಗೆ ಮಾತ್ರ ಕಲುಷಿತ ನೀರೇ ಖಾಯಂ ಎನ್ನುವ ರೀತಿಯಲ್ಲಿ ಕುಡಿವ ನೀರು ಪೂರೈಸಲಾಗುತ್ತದೆ. ಕಲುಷಿತ ನೀರು ಸೇವನೆಯಿಂದ ವಾಂತಿ, ಬೇಧಿ, ಕಾಮಾಲೆ ಸೇರಿದಂತೆ ಇನ್ನಿತರ ಆರೋಗ್ಯದ ಸಮಸ್ಯೆಗಳಿಗೆ ಜನರು ತುತ್ತಾಗುತ್ತಾರೆಂಬ ಅರಿವಿದ್ದು, ನಗರಸಭೆ ಶುದ್ಧ ಕುಡಿವ ನೀರು ಪೂರೈಕೆಗೆ ಕ್ರಮ ಕೈಗೊಳ್ಳದಿರುವುದು ಜನರಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.
ಸೂಗೂರೇಶ್ವರ ಸ್ವಾಮಿ ದೇವಾಲಯದಲ್ಲಿ ಮೊಸರುಬಾನ ಬುತ್ತಿ ನೈವೇದ್ಯ
ರಿಮ್ಸ್ ಆಸ್ಪತ್ರೆಯಲ್ಲಿ ವಾಂತಿ ಬೇಧಿ ಪ್ರಕರಣಗಳ ಸಂಖ್ಯೆ ಹೆಚ್ಚಳ
ನಗರಸಭೆ ನಿರ್ಲಕ್ಷ್ಯದಿಂದ ಮಕ್ಕಳು, ವಯೋವೃದ್ಧರು ತೀವ್ರ ಅನಾರೋಗ್ಯದಿಂದ ಬಳಲುವಂತಹ ಪರಿಸ್ಥಿತಿಗೆ ಕಾರಣವಾಗಿದೆ. ಶುದ್ಧ ಕುಡಿವ ನೀರಿನ ಪೂರೈಕೆಗೆ ಕೋಟ್ಯಾಂತರ ರೂ. ಪ್ರತಿ ವರ್ಷ ವೆಚ್ಚವಾಗುವುದು ಬಿಟ್ಟರೇ, ಸಾರ್ವಜನಿಕರಿಗೆ ಉತ್ತಮ ಕುಡಿವ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಪದೇ ಪದೇ ವಿವಿಧ ವಾರ್ಡ್ ಜನ ನಗರಸಭೆ ಗಮನಕ್ಕೆ ತಂದರೂ ಯಾವುದೇ ಉಪಯೋಗವಾಗಿಲ್ಲ. ಅನಾಹುತ ಸಂಭವಿಸಿದಾಗಲೇ ಎಚ್ಚೆತ್ತುಕೊಳ್ಳುವುದು ಬಿಟ್ಟರೇ, ಶಾಶ್ವತ ಪರಿಹಾರ ಒದಗಿಸುವ ಯಾವುದೇ ಪರ್ಯಾಯ ಕ್ರಮ ಕೈಗೊಳ್ಳದ ಜಡತ್ವ ನಗರಸಭೆ ಭಾಗವಾಗಿದೆ. ಅಶುದ್ಧ ಕುಡಿವ ನೀರಿನ ಪೂರೈಕೆಯಿಂದ ಇಂದು ಕಳೆದ ಎರಡು ದಿನಗಳಿಂದ ರಿಮ್ಸ್ ಆಸ್ಪತ್ರೆಯಲ್ಲಿ ವಾಂತಿ ಬೇಧಿ ಪ್ರಕರಣಗಳ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಳವಾಗಿವೆ.
ಶುದ್ಧ ಕುಡಿವ ನೀರು ಪೂರೈಕೆಗೆ ಕ್ರಮಕ್ಕೆ ಆಗ್ರಹ
ಇನ್ನಾದರೂ ನಗರಸಭೆ, ಜನಪ್ರತಿನಿಧಿಗಳು ಎಚೆತ್ತುಕೊಂಡು ಶುದ್ಧ ಕುಡಿವ ನೀರು ಪೂರೈಕೆಗೆ ಕ್ರಮಕೈಗೊಳ್ಳದ್ದಿರೇ, ಜನ ಮತ್ತಷ್ಟು ವಾಂತಿ ಬೇಧಿ ಪ್ರಕರಣಗಳಿಗೆ ಗುರಿಯಾಗಬೇಕಾಗುತ್ತದೆ. ನಗರದ ಜನರಿಗೆ ಉತ್ತಮ ರಸ್ತೆಗಳಿಲ್ಲ. ಕತ್ತಲಾದರೇ ಬೀದಿ ದೀಪಗಳಿಲ್ಲ, ಚರಂಡಿ ಹೂಳು ತುಂಬುವುದರಿಂದ ಬಹುತೇಕ ನಗರದ ವಾರ್ಡ್ ಗಳಲ್ಲಿ ತಿಪ್ಪೆ, ಕಸ ವಿಲೇವಾರಿಯಿಲ್ಲ. ಇದರ ಮಧ್ಯೆ ಶುದ್ಧ ಕುಡಿವ ನೀರು ನೀಡದಿದ್ದರೇ, ಮೂಲಭೂತ ಸೌಕರ್ಯಗಳಿಗೆ ಜನ ಎಲ್ಲಿಗೆ ಹೋಗಬೇಕು ಎನ್ನುವ ಪ್ರಶ್ನೆಗೆ ಸ್ಥಳೀಯ ಸಂಸ್ಥೆ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಉತ್ತರಿಸಬೇಕಾಗಿದೆ.
(ಒನ್ಇಂಡಿಯಾ ಸುದ್ದಿ)