'ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ'
ರಾಯಚೂರು, ಜನವರಿ 12 : 2018ರ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಎದುರಿಸಲು ಸೂಚಿಸಿದೆ. ಇನ್ನು ನಾನು ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿ ಇಲ್ಲ. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಇಲ್ಲಿ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್ ಹಾಗೂ ನಾನು ಸೇರಿ ಪಕ್ಷ ಸಂಘಟಿಸುತ್ತಿದ್ದೇವೆ. ಕಾಂಗ್ರೆಸ್ ಶಾಸಕರು ಇಲ್ಲದ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದೇವೆ. ಎಲ್ಲ ಕಡೆ ಪಕ್ಷಕ್ಕೆ ಉತ್ತಮ ಬೆಂಬಲ ಸಿಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಸ ಜನರಿಗೆ ಮೆಚ್ಚುಗೆಯಾಗಿದೆ. ಎಲ್ಲ ವರ್ಗದ ಜನರಿಗೆ ರಾಜ್ಯ ಸರಕಾರ ಅನುಕೂಲ ಮಾಡಿದೆ ಎಂದರು.
'ಬಿಜೆಪಿ ಸೋಲುವ ಭೀತಿಯಿಂದ ಪದೇಪದೇ ರಾಜ್ಯಕ್ಕೆ ಬರುತ್ತಿರುವ ಅಮಿತ್ ಶಾ'
ಜನಸಂಖ್ಯೆ ಆಧಾರದ ಮೇಲೆ ಅನುದಾನ ನೀಡಲು ಬಹಳ ವರ್ಷಗಳಿಂದ ಕೇಳುತ್ತಿದ್ದೇವೆ. ಆ ಪದ್ಧತಿಯನ್ನು ಸಿದ್ದರಾಮಯ್ಯ ಸರಕಾರ ಜಾರಿ ಮಾಡಿದೆ. ದೇಶದಲ್ಲೇ ಇದೇ ಮೊದಲು ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ರಾಜ್ಯ ಸರಕಾರ ನೀಡಿದೆ. ಗಾಂಧೀಜಿಯ ರಾಮರಾಜ್ಯದ ಕನಸು ಸಿದ್ದರಾಮಯ್ಯ ನನಸು ಮಾಡಿದ್ದಾರೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಮುನಿಯಪ್ಪ ಹೇಳಿದರು.
ಸದಾಶಿವ ಆಯೋಗ ವರದಿ ಜಾರಿಗೆ ಎಲ್ಲ ದಲಿತ ಸಂಘಟನೆಗಳು ಒಂದಾಗಿವೆ. ಮೀಸಲಾತಿಯನ್ನು ಹಂಚಿಕೊಂಡು ತಿನ್ನಲು ನಾವು ಒಂದಾಗಿದ್ದೇವೆ. ಎಲ್ಲ ಜಾತಿಯ ಬಂಧುಗಳಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ಬೇಡಿಕೆ. ಸದಾಶಿವ ಆಯೋಗದ ವರದಿ ಜಾರಿಯಿಂದ ಯಾವುದೇ ಜಾತಿಗೂ ಅನ್ಯಾಯವಾಗಲ್ಲ. ಒಳಮೀಸಲಾತಿಯಲ್ಲಿ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದರು.
ತಾವೇ ಜವಾಬ್ದಾರಿ ತೆಗೆದುಕೊಂಡು ನ್ಯಾಯ ಕೊಡಿಸಬೇಕು ಎಂದು ಖರ್ಗೆ ಅವರಿಗೂ ಮನವಿ ಮಾಡಿದ್ದೇವೆ. ಅವರು ರಾಷ್ಟ್ರ ನಾಯಕರು. ಅವರೇ ಸದಾಶಿವ ಆಯೋಗದ ವರದಿ ಜಾರಿ ವಿಚಾರದಲ್ಲಿ ನ್ಯಾಯ ಕೊಡಿಸಬೇಕು. ಈ ಸಂಬಂಧ ಖರ್ಗೆ ಅವರ ಜೊತೆ ಮಾತಾಡಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗಬೇಕು ಎಂದಿರುವುದಾಗಿ ತಿಳಿಸಿದರು.