ವೋಟು ಮೋದಿಗೆ ಹಾಕ್ತೀರಿ, ಸಮಸ್ಯೆ ನಾನು ಬಗೆಹರಿಸಬೇಕಾ?: ಪ್ರತಿಭಟನಾಕಾರರ ವಿರುದ್ಧ ಸಿಎಂ ಕಿಡಿ
ರಾಯಚೂರು, ಜೂನ್ 26: ಮೋದಿ ಅವರಿಗೆ ವೋಟು ಹಾಕ್ತೀರಿ, ಸಮಸ್ಯೆ ಬಗ್ಗೆ ನನ್ನ ಬಳಿ ಕೇಳಿದರೆ ನಾನು ಬಗೆಹರಿಸಬೇಕಾ? - ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ ಪರಿ ಇದು.
ರಾಯಚೂರಿನ ಮಾನ್ವಿ ತಾಲ್ಲೂಕಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯ ನಡೆಸಲು ಬುಧವಾರ ಬೆಳಿಗ್ಗೆ ಹೊರಟಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿದ್ದ ಕೆಎಸ್ಆರ್ಟಿಸಿ ಬಸ್ಅನ್ನು ನೂರಾರು ಪ್ರತಿಭಟನಾಕಾರರು ಅಡ್ಡಗಟ್ಟಿದರು.
ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ವೈಟಿಪಿಎಸ್ನ ನೂರಾರು ಕಾರ್ಮಿಕರು ಕುಮಾರಸ್ವಾಮಿ ಅವರಿದ್ದ ಬಸ್ಗೆ ಸುಮಾರು 15 ನಿಮಿಷ ಮುತ್ತಿಗೆ ಹಾಕಿದರು. ಸುದೀರ್ಘಾವಧಿಯಿಂದ ಬಾಕಿ ಉಳಿದಿರುವ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಶಿವನಗೌಡರಿಂದ ನಮ್ಮ ಕುಟುಂಬ ಕಲಿಯಬೇಕಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ
ಇದಕ್ಕೆ ಸಿಟ್ಟಿಗೆದ್ದ ಸಿಎಂ, ಮೋದಿ ಅವರಿಗೆ ವೋಟ್ ಹಾಕ್ತೀರ. ಸಮಸ್ಯೆ ನಾನು ಬಗೆಹರಿಸಬೇಕೇ? ಇದು ಕೇಳುವ ರೀತಿಯೇ? ನಿಮ್ಮ ಮೇಲೆ ಲಾಠಿ ಚಾರ್ಜ್ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ನಾಯಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಮೋದಿ ಅವರಿಗೆ ಮತ ಹಾಕಿದ್ದಾರೆ ಎಂಬ ಕಾರಣಕ್ಕೆ ಕೆಟ್ಟದಾಗಿ ಮಾತನಾಡುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.
ಮೋದಿಗೆ ವೋಟ್ ಹಾಕಿ ನನಗೆ ಕೇಳ್ತೀರಾ?
ವೈಟಿಪಿಎಸ್ ಕಾರ್ಮಿಕರು ಬಸ್ಗೆ ಮುತ್ತಿಗೆ ಹಾಕಿದಾಗ ಕುಮಾರಸ್ವಾಮಿ ಸಿಟ್ಟಿಗೆದ್ದು ಪ್ರತಿಭಟನಾಕಾರರ ವಿರುದ್ಧ ರೇಗಾಡಿದರು. ನರೇಂದ್ರ ಮೋದಿ ಅವರಿಗೆ ವೋಟ್ ಹಾಕುತ್ತೀರ. ಸಮಸ್ಯೆ ಬಗೆಹರಿಸಿ ಎಂದು ನಮ್ಮ ಹತ್ತಿರ ಹೇಳುತ್ತೀರ. ಮರ್ಯಾದೆ ಕೊಡುತ್ತೀರಾ ನೀವು? ನಿಮ್ಮ ಮೇಲೆ ಲಾಠಿ ಚಾರ್ಜ್ ಮಾಡಬೇಕು. ನೀವು ಹೀಗೆ ಮಾಡಿದರೆ ನಾನು ಗ್ರಾಮ ವಾಸ್ತವ್ಯ ಮಾಡುವುದಿಲ್ಲ ಎಂದು ಕೋಪದಿಂದ ಹೇಳಿದರು.
ಬಳಿಕ ಬಸ್ ಒಳಗೆ ಕುಳಿತೇ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ರಸ್ತೆ ತಡೆದು ಏಕೆ ಪ್ರತಿಭಟನೆ ನಡೆಸುತ್ತೀರಿ? ನೇರವಾಗಿ ನನ್ನ ಬಳಿ ಬರಬಹುದ್ದಿತ್ತಲ್ಲ? ಮೋದಿ ಅವರಿಗೆ ವೋಟ್ ಹಾಕಿ ಸಮಸ್ಯೆಗೆ ಪರಿಹಾರಕ್ಕೆ ನನ್ನ ಬಳಿ ಬರುತ್ತೀರಿ ಎಂದು ಕಿಡಿಕಾರಿದರು.
'ಕೊಳಕು ಮನಸು ತೋರಿಸುತ್ತದೆ'
ಮುಖ್ಯಮಂತ್ರಿಗಳು ಈ ರೀತಿ ಸಂಯಮ ಕಳೆದುಕೊಳ್ಳುತ್ತಿರುವುದು ಇದು ಮೊದಲನೇ ಬಾರಿ ಏನು ಅಲ್ಲ. ಯಾವಾಗಲೂ ಅವರಿಗೆ ಜನರೆಂದರೆ, ಅದರಲ್ಲೂ ಉತ್ತರ ಕರ್ನಾಟಕದ ಜನತೆ ಅಂದರೆ ಆಗುವುದಿಲ್ಲ ಅವರ ಗ್ರಾಮ ವಾಸ್ತವ್ಯ ಬೂಟಾಟಿಕೆ ಎಂದು ಮತ್ತೆ ಬಿಂಬಿಸಿದ್ದಾರೆ.
ಮುಖ್ಯಮಂತ್ರಿಯವರು ಜನರ ಬಗ್ಗೆ ಇರುವ ಅದರಲ್ಲೂ ರಾಜ್ಯದಲ್ಲಿ ಬಿಜೆಪಿ ಗೆದ್ದ ಕಾರಣ ಸಂಯಮ ಕಳೆದುಕೊಳ್ಳುತ್ತಿರುವುದು ಅವರ ಕೊಳಕು ಮನಸ್ಸನ್ನು ಎತ್ತಿ ತೋರಿಸುತ್ತದೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಮೋದಿಗೆ ಮತ ಹಾಕ್ತೀರಿ : ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಆಕ್ರೋಶ
ಮುಖ್ಯಮಂತ್ರಿ ಸ್ಥಾನಕ್ಕೆ ಅವಮಾನ
ಮೋದಿಗೆ, ಬಿಜೆಪಿಗೆ ಮತ ಹಾಕಿದರು ಎಂಬ ಕಾರಣಕ್ಕೆ ಹಿಯಾಳಿಸಿ ಮಾತನಾಡುವುದು ಒಬ್ಬ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ಮಾಡಿದ ಅವಮಾನ. ಹಳ್ಳಿಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜನರ ಭಾವನೆಗಳನ್ನು ಹತ್ತಿಕ್ಕಿ ನೀವು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಮತ್ತು ಜನ ವಿರೋಧಿ ಕ್ರಮ.
ಈ ರೀತಿ ದೌರ್ಜನ್ಯದಿಂದ ಕೂಡಿದ ನಿಮ್ಮ ಗ್ರಾಮ ವಾಸ್ತವ್ಯವನ್ನು ಜನ ಸಹಿಸುವುದಿಲ್ಲ. ನಿಮ್ಮ ವರ್ತನೆ ಕೂಡ ದೌರ್ಜನ್ಯದಿಂದ ಕೂಡಿದೆ, ಇದೇ ರೀತಿ ನೀವು ಜನರ ಮೇಲೆ ಮಾನಸಿಕ ದೌರ್ಜನ್ಯ ಮುಂದುವರಿಸಿದರೆ ಭಾರತೀಯ ಜನತಾ ಪಾರ್ಟಿ ಪಕ್ಷ ಸಹಿಸುವುದಿಲ್ಲ ಮತ್ತು ನಾವು ರಾಜ್ಯವ್ಯಾಪಿ ಆಂದೋಲನ ಹಮ್ಮಿಕೊಳ್ಳುತ್ತೇವೆ. ಸಮಯ ಬಂದರೆ ನಿಮ್ಮ ಗ್ರಾಮ ವಾಸ್ತವ್ಯವೂ ನಡೆಯದಂತೆ ನೋಡಿಕೊಳ್ಳುತ್ತೇವೆ. ಜನವಿರೋಧಿ ಗ್ರಾಮ ವಾಸ್ತವ್ಯಕ್ಕೆ ನಮ್ಮ ಧಿಕ್ಕಾರ ಎಂದು ಯಡಿಯೂರಪ್ಪ ಹೇಳಿದ್ದಾರೆ.
ತಾಳ್ಮೆಯಿಂದ ಹೇಳಿದರೂ ಕೇಳಲಿಲ್ಲ
ನಿಮ್ಮ ಸಮಸ್ಯೆಗಳನ್ನು ಆಲಿಸಲು ಬರುತ್ತೇನೆ ಎಂದಿದ್ದೆ. ಆದರೆ ಅವರು ಬಸ್ ತಡೆದರು. ತಾಳ್ಮೆಯಿಂದ ಹೇಳಿದರೂ ಕೇಳಲಿಲ್ಲ. ಪೊಲೀಸರ ಮಾತಿಗೂ ಜಗ್ಗಲಿಲ್ಲ. ಹೀಗಾಗಿ ರೇಗಾಡಿದ್ದು ನಿಜ. ಅದು ಉದ್ದೇಶಪೂರ್ವಕವಾಗಿ ನಡೆದ ಪ್ರತಿಭಟನೆ. ಶಾಂತಿಯುತವಾಗಿ ಪ್ರತಿಭಟನೆ ಮಾಡಿದರೆ ಅಭ್ಯಂತರವಿಲ್ಲ. ವಿರೋಧಪಕ್ಷದವರ ಕೈವಾಡ ಇದರಲ್ಲಿ ಇದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಮೋದಿಗೆ ಮತ ಹಾಕ್ತೀರಿ : ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಆಕ್ರೋಶ
ಜನಗಳ ಮಧ್ಯೆಯೇ ಇರುವವನು
ನಾನು ಜನರ ನಡುವೆ ಇರುವವನು. ಈಗಲೂ ಸಾವಿರಾರು ಜನರ ಮಧ್ಯೆ ಇದ್ದೇನೆ. ನನ್ನ ಜೀವನವೇ ಜನರ ನಡುವೆ ಇರುತ್ತದೆ. ಆದಷ್ಟು ತಾಳ್ಮೆಯಿಂದ ನಡೆದುಕೊಳ್ಳುವವನು. ಮನೆ ಮನೆಗೆ ಹೋಗಿ ಜನಸೇವೆ ಮಾಡುತ್ತೇನೆ. ನಾಡಿನ ಯಾವುದೇ ಪ್ರಜೆ ಇರಲಿ, ಯಾವ ಪಕ್ಷ ಅಥವಾ ಜಾತಿ ಕೇಳುವುದಿಲ್ಲ. ಅವರ ಕಷ್ಟ ಕೇಳಿ ಸ್ಪಂದಿಸುತ್ತೇನೆ. ಮೋದಿ ಅವರ ಮುಖ ನೋಡಿ ವೋಟ್ ಹಾಕ್ತೀರಿ, ನಾನು ಹೋಗುವ ವಾಹನ ಅಡ್ಡಗಟ್ಟುತ್ತೀರಿ ಎಂದೆ. ಮೋದಿ ಅವರು ಹೋಗುವ ಬೆಂಗಾವಲು ಪಡೆಯನ್ನು ಅಡ್ಡಗಟ್ಟಿದರೆ ಸುಮ್ಮನೆ ಬಿಡುತ್ತಾರೆಯೇ? ಎತ್ತಿ ಹೊರಗೆ ಹಾಕುತ್ತಾರೆ. ನಾನು ಹಾಗೆ ಮಾಡುವುದಿಲ್ಲ ಎಂದು ಹೇಳಿದರು.
ಹೇಳಿಕೆ ವಾಪಸ್ ಪ್ರಶ್ನೆಯೇ ಇಲ್ಲ
ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೋರಬೇಕೆಂಬ ಬಿಜೆಪಿಯವರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದರು. ನಾನು ವಾಪಸ್ ಪಡೆದುಕೊಳ್ಳಬೇಕಾದ ಯಾವ ಪದವನ್ನೂ ಬಳಸಿಲ್ಲ. ನನ್ನ 15 ನಿಮಿಷ ಸಮಯ ವ್ಯರ್ಥ ಮಾಡಿದ್ದಕ್ಕೆ ಕೋಪಗೊಂಡಿದ್ದೇನೆ. ಜನರು ಯಾರಿಗೆ ವೋಟ್ ಹಾಕಿದ್ದಾರೆಂದು ನಾನು ನೋಡುವುದಿಲ್ಲ. ರಾಜ್ಯದ 6.5 ಕೋಟಿ ಜನರ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದರು.