ಶಿಕ್ಷಕ ಬಸವರಾಜ ಸಾವಿಗೆ ನಿಂಬೆ ರಸ ಕಾರಣವಲ್ಲ; ಸ್ಪಷ್ಟನೆ ನೀಡಿದ ಮೃತರ ಸಹೋದರ
ರಾಯಚೂರು, ಏಪ್ರಿಲ್ 29: ರಾಯಚೂರು ಜಿಲ್ಲೆಯ ಸಿಂಧನೂರು ನಗರದ ನಟರಾಜ ಕಾಲೊನಿಯ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜ (45) ಎಂಬುವರು ಮೂಗಿನಲ್ಲಿ ನಿಂಬೆ ರಸ ಹಾಕಿಕೊಂಡು ಬುಧವಾರ ನಿಧನರಾಗಿದ್ದಾರೆಂದು ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಇದೀಗ ಮೃತರ ಸಹೋದರ ಮಹಾಂತೇಶ ಅವರು ಶಿಕ್ಷಕ ಬಸವರಾಜ ಅವರ ಸಾವಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಶಿಕ್ಷಕ ಬಸವರಾಜ ಮೂಗಿನಲ್ಲಿ ನಿಂಬೆ ರಸ ಹಾಕಿಕೊಂಡಿದ್ದರಿಂದ ಸತ್ತಿಲ್ಲ, ಬದಲಾಗಿ ಲೋ ಬಿಪಿ ಮತ್ತು ಅದಕ್ಕೆ ಸಂಭವಿಸಿದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಮೃತರ ಸಹೋದರ ಮಹಾಂತೇಶ ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ನಮ್ಮ ಸಹೋದರನಿಗೆ ಬಿಪಿ ಲೋ ಆಗಿತ್ತು, ಆದ್ದರಿಂದ ಹೃದಯಘಾತವಾಗಿದೆ. ಬಿಪಿ ಲೋ ಆಗುತ್ತಿದ್ದಂತೆ ಅವರನ್ನು ತಕ್ಷಣವೇ ಸಿಂಧನೂರು ನಗರದ ಶಾಂತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರೊಳಗೆ ಅವರು ಮೃತಪಟ್ಟಿದ್ದನ್ನು ಅಲ್ಲಿನ ವೈದ್ಯರು ಖಚಿತಪಡಿಸಿದರು ಎಂದರು.
ಈ ಕುರಿತು ಆಸ್ಪತ್ರೆ ವೈದ್ಯ ಡಾ.ಸುರೇಶ ಮಾಹಿತಿ ನೀಡಿದ್ದು, 'ಬಸವರಾಜ ಅವರನ್ನು ನಮ್ಮ ಆಸ್ಪತ್ರೆಗೆ ಕರೆತರುವ ಮೊದಲೇ ಅವರ ಪ್ರಾಣ ಹೋಗಿತ್ತು. ಅವರು ತೀರಿಕೊಂಡಿದ್ದನ್ನು ಮಾತ್ರ ನಾನು ಹೇಳಬಹುದು. ಹೇಗೆ ಪ್ರಾಣ ಹೋಯಿತು ಎಂಬುದನ್ನು ತಿಳಿಯಲು ಪೋಸ್ಟ್ ಮಾರ್ಟಮ್ ಮಾಡಬೇಕಾಗುತ್ತದೆ' ಎಂದು ಹೇಳಿದರು.
Recommended Video
ಶಿಕ್ಷಕ ಬಸವರಾಜ ಹೃದಯಾಘಾತದಿಂದ ಮೃತರಾಗಿದ್ದರೂ, ಮೂಗಿಗೆ ನಿಂಬೆ ರಸ ಹಾಕಿಕೊಂಡಿದ್ದರಿಂದ ಏಕಾಏಕಿ ಒದ್ದಾಡಿ ಮೃತಪಟ್ಟಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದಕ್ಕೆ ಮೃತನ ಕುಟುಂಬ ವರ್ಗ ಬೇಸರ ವ್ಯಕ್ತಪಡಿಸಿದೆ.