ಒಂದು ಸಮುದಾಯದ ಜನರನ್ನು ಓಲೈಸಲು ಬಿಎಸ್ವೈಗೆ ಮನ್ನಣೆ: ಹೆಚ್ಡಿಕೆ ವ್ಯಂಗ್ಯ
ರಾಯಚೂರು, ಆಗಸ್ಟ್ 19: ರಾಜ್ಯದಲ್ಲಿ ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪ ಅವರಿಗೆ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯತ್ವ ನೀಡಿದೆ. ಚುನಾವಣೆ ಮುಗಿದ ನಂತರ ಇವರನ್ನು ಮನೆಗೆ ಕಳುಹಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.
ಅವರಿಂದು ಮಾನ್ವಿ ಪಟ್ಟಣದಲ್ಲಿ ಆಯೋಜಿಸಿದ ಶಾಸಕ ರಾಜಾ ವೆಂಕಟಪ್ಪ ನಾಯಕ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಯಡಿಯೂರಪ್ಪ ಅವರ ನೇಮಕದಿಂದ ಆನೆಬಲ ಬಂದಿದೆ ಎಂದು ಹೇಳಿಕೊಳ್ಳುತ್ತಿರುವುದನ್ನು ಅಪಹಾಸ್ಯ ಮಾಡಿದ ಅವರು "ಆನೆ ಬಲ ಎಂದರೆ ಏನು? ಎಂದು ಪ್ರಶ್ನಿಸಿ, ಕರ್ನಾಟಕದಲ್ಲಿ ಬಿಜೆಪಿಗೆ ನಾವು ಕೊಟ್ಟ ಜೀವದಿಂದಾಗಿ ಇಂದು ಅಧಿಕಾರಕ್ಕೆ ಬಂದು ಲೂಟಿ ಮಾಡುತ್ತಿದ್ದಾರೆ. ಒಂದು ಸಮುದಾಯವನ್ನು ಓಲೈಸಲು ಯಡಿಯೂರಪ್ಪರಿಗೆ ಸಂಸದೀಯ ಸ್ಥಾನ ನೀಡುವುದು ಬಿಟ್ಟರೆ, ಇದರಲ್ಲಿ ಯಾವುದೇ ಮಹತ್ವವಿಲ್ಲ" ಎಂದು ಪ್ರತಿಕ್ರಿಯಿಸಿದರು.
ಸುಳ್ಳಿಗೆ ಮತ್ತೊಂದು ಹೆಸರೇ ಬಿಜೆಪಿ ಮತ್ತು ಬಿಜೆಪಿ ಶಾಸಕರು: ಡಿಕೆ ಶಿವಕುಮಾರ್ ಆಗ್ರಹ
ರಾಷ್ಟ್ರೀಯ ಪಕ್ಷಗಳಿಂದ ಪ್ರಾದೇಶಿಕ ಅಸ್ಮಿತೆಗೆ ಧಕ್ಕೆಯಾಗುತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಾಯಕರು ಅಧಿಕಾರದ ಆಸೆಗೆ ಮನಸೋ ಇಚ್ಛೆ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ದ್ವೇಷ ರಾಜಕಾರಣ ಮೂಲಕ ಕಾನೂನು ಸುವ್ಯವಸ್ಥೆ ದುರ್ಬಲಗೊಳಿಸಲಾಗುತ್ತಿದೆ. ಬಿಜೆಪಿ ಪಕ್ಷ ಜನಾಭಿಪ್ರಾಯದೊಂದಿಗೆ ಅಧಿಕಾರಕ್ಕೆ ಬಂದಿಲ್ಲ. ಕಳ್ಳಮಾರ್ಗದಿಂದ ಅಧಿಕಾರಕ್ಕೆ ಬಂದು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ಇದನ್ನು ಎದುರಿಸುವಲ್ಲಿ ಕಾಂಗ್ರೆಸ್ ಪಕ್ಷ ಅಸಮರ್ಥವಾಗಿದೆ. ಪ್ರಾದೇಶಿಕ ಜಾದಳ ಪಕ್ಷಕ್ಕೆ ಇರುವ ಬದ್ಧತೆ ರಾಷ್ಟ್ರೀಯ ಪಕ್ಷಗಳಿಗೆ ಇಲ್ಲ. ಕೃಷ್ಣಾ ನೀರು ಬಳಕೆ ಮಾಡಲು ಆಡಳಿತರೂಢ ಬಿಜೆಪಿ ಪಕ್ಷ ಗಮನ ನೀಡುತ್ತಿಲ್ಲ ಈ ಬಗ್ಗೆ ಜನ ಜಾಗೃತಿಗೊಳ್ಳಬೇಕಾಗಿದೆ ಎಂದು ಕಿಡಿ ಕಾರಿದರು.
ರಾಯಚೂರನ್ನು ಬಿಟ್ಟುಕೊಡುವ ಮಾತು ಆಡಬಾರದು
ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ ಕ್ಷೇತ್ರಕ್ಕೆ ಕೊಟ್ಟಿರುವ ಅನುದಾನ ಸರಿಯಾಗಿ ಬಳಕೆ ಮಾಡಿಕೊಳ್ಳದೆ, ಅನುದಾನ ಲೂಟಿ ಮಾಡುವ ಕೆಲಸ ಮಾಡಿದ್ದಾರೆ. ತಮ್ಮ ದುರ್ಬಲತೆ ಮುಚ್ಚಿಕೊಳ್ಳಲು ರಾಯಚೂರನ್ನು ತೆಲಂಗಾಣದತ್ತ ತೆಗೆದುಕೊಂಡು ಹೋಗುವ ಪ್ರಸ್ತಾಪ ಮಾಡಿದ್ದಾರೆ. ಶಾಸಕರ ಈ ದೌರ್ಬಲ್ಯದ ಹೇಳಿಕೆಯನ್ನು ಅವಕಾಶ ಮಾಡಿಕೊಂಡ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರು ಈಗ ಹೇಳಿಕೆ ನೀಡಿದ್ದಾರೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಈ ವಿಷಯ ಮತ್ತೆ ಪ್ರಸ್ತಾಪಿಸಬಾರದು ಎನ್ನುವುದು ನನ್ನ ಮನವಿ ಮಾಡುತ್ತೇನೆ ಎಂದರು.
ಕೃಷ್ಣಾ ನದಿ ಮೂರನೇ ಹಂತದ ಯೋಜನೆಗೆ ಮನವಿ
ಎಚ್.ಡಿ.ದೇವೇಗೌಡರ ಕಾಲದಲ್ಲಿ ಬಚಾವತ್ ತೀರ್ಪಿನ ಬಳಿಕ ಆಂಧ್ರಪ್ರದೇಶದಿಂದ ಸಾಕಷ್ಟು ಜನರು ರಾಯಚೂರು ಜಿಲ್ಲೆಯಲ್ಲಿ ಜಮೀನು ಖರೀದಿಸಿ ಕ್ಯಾಂಪ್ ಮಾಡಿಕೊಂಡು ನೆಲೆಸಿದ್ದಾರೆ. ಅವರೆಲ್ಲರೂ ಈಗ ನಮ್ಮವರಾಗಿದ್ದಾರೆ. ಅವರಿಗೆ ಕನ್ನಡಿಗರು ಸಹಕಾರ ನೀಡಿದ್ದಾರೆ. ರಾಯಚೂರಿನಿಂದಲೇ ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಆ ರಾಜ್ಯಗಳಿಗೆ ಹರಿದುಹೋಗುತ್ತವೆ. ಆದರೂ ರಾಯಚೂರಿನಲ್ಲಿ ಬರಡು ಭೂಮಿಗಳಿವೆ. ಈ ಭಾಗದಲ್ಲಿ ಕೃಷ್ಣಾ ನದಿ ಮೂರನೇ ಹಂತದ ಯೋಜನೆಗಳನ್ನು ಜಾರಿಗೊಳಿಸಲು ತೆಲಂಗಾಣದ ಮುಖ್ಯಮಂತ್ರಿ ಕೂಡಾ ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ನೆಲ, ಜಲ ವಿಚಾರದಲ್ಲಿ ರಾಜಿಯಿಲ್ಲ
ತೆಲಂಗಾಣ ಮುಖ್ಯಮಂತ್ರಿ ನಮ್ಮೊಂದಿಗೆ ಆತ್ಮೀಯರಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ನೆಲ, ಜಲ ವಿಚಾರದಲ್ಲಿ ಅವರೊಂದಿಗೆ ನಾನು ರಾಜಿ ಕೆಲಸಕ್ಕೆ ಹೋಗುವುದಿಲ್ಲ. ಕೆಸಿಆರ್ ಹೇಳಿಕೆ ನೀಡಿದ ಮಾತ್ರಕ್ಕೆ ರಾಯಚೂರು ರಾಜ್ಯದ ಭಾಗವನ್ನು ಬಿಟ್ಟು ಹೋಗುವುದಿಲ್ಲ. ಆಂಧ್ರ, ತೆಲಂಗಾಣ ವಲಸಿಗರನ್ನು ನಮ್ಮವರಂತೆ ಕಂಡು ಇಲ್ಲಿ ಕೃಷಿ ಅವಕಾಶ ಮಾಡಿಕೊಟ್ಟಿದ್ದೇವೆ. ಈ ಸೌಹಾರ್ದತೆಗೆ ನೆರೆ ಮುಖ್ಯಮಂತ್ರಿ ಧಕ್ಕೆ ಬರುವ ರೀತಿಯಲ್ಲಿ ಮಾತನಾಡಬಾರದು ಎಂದರು.
ಮೊಟ್ಟೆ ಎಸೆಯುವುದು ಖಂಡನೀಯ
ಶಾಲೆಗಳಲ್ಲಿ ಗಣೇಶೋತ್ಸವ ಆಚರಣೆ ವಿಷಯಕ್ಕೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಷ್ಟು ದಿನ ಇಲ್ಲದಿರುವಂತಹ ವಿವಾದವನ್ನು ಈಗ ಏಕೆ ಹುಟ್ಟು ಹಾಕಲಾಗಿದೆ ಎಂದು ಪ್ರಶ್ನಿಸಿದರು. ವಿರೋಧ ಪಕ್ಷದವರ ಮೇಲೆ ಮೊಟ್ಟೆ ಎಸೆಯುವುದು ಖಂಡನೀಯ ಎಂದ ಅವರು, ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ಕೊಲೆ ಮಾಡಿದವರನ್ನು ಸ್ವಾತಂತ್ರ ಹೋರಾಟಗಾರರೆಂದು ಬಿಂಬಿಸುತ್ತಿರುವುದು ವಿಷಾದನೀಯ ಎಂದರು.