ಆಯುಧ ಪೂಜಾ: ರಾಯಚೂರಿನ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರೋ ಜೋರು
ರಾಯಚೂರು, ಅಕ್ಟೋಬರ್, 4: ನವರಾತ್ರಿಯ ಕೊನೆಯ ದಿನವಾದ ಆಯುಧಪೂಜೆಯ ಒಂದು ದಿನದ ಮುಂಚೆಯೇ ಸೋಮವಾರ ಜಿಲ್ಲೆಯ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಕಂಡುಬಂದಿತ್ತು.
ರಾಯಚೂರಿನ ಭಂಗಿಕುಂಟಾ ರಸ್ತೆಯುದ್ದಕ್ಕೂ ಜನದಟ್ಟಣೆ ಹಾಗೂ ಫಲ, ಪುಷ್ಪ ಮಾರಾಟ ಮಾಡುವವರು ನೆರೆದಿದ್ದರು. ಎಲ್ಲರ ಕೈಯಲ್ಲೂ ಹೂವುಗಳು, ಬಾಳೆ ಗಿಡಗಳು, ಮಾವಿನ ತೋರಣ, ಹಣ್ಣುಗಳು, ತೆಂಗಿನಕಾಯಿ, ಕರ್ಪೂರ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳೊಂದಿಗೆ ಮಾರುಕಟ್ಟೆಯಿಂದ ಮನೆಗಳತ್ತ ತೆರಳುತ್ತಿದ್ದರು. ಈಗಷ್ಟೇ ಮಾರುಕಟ್ಟೆಗೆ ಬರುತ್ತಿದ್ದ ಜನರು ಫಲ, ಪುಷ್ಪಗಳ ಖರೀದಿಗೆ ಚೌಕಾಸಿ ಮಾಡಿ ಖರೀದಿ ಭರಾಟೆಯಲ್ಲಿ ಮುಗಿಬಿದ್ದಿದ್ದರು. ತಡರಾತ್ರಿವರೆಗೂ ಖರೀದಿ, ಮಾರಾಟ ಭರಾಟೆ ಮುಂದುವರೆದಿತ್ತು.
ರಾಯಚೂರು ಜಿಲ್ಲೆಯ ಐತಿಹಾಸಿಕ ಕರಡಕಲ್ಲ ಕೆರೆಗೆ ಹೊಸ ಸ್ಪರ್ಶ
ಕೋವಿಡ್ ಮಹಾಮಾರಿಯಿಂದ ಎರಡು ವರ್ಷಗಳ ಕಾಲ ಹಬ್ಬದ ಸಂಭ್ರಮ ಕಳೆಗುಂದಿತ್ತು. ಈ ವರ್ಷ ಮಹಾನವಮಿ ಸಂಭ್ರಮ, ಸಡಗರವು ಎಲ್ಲೆಡೆಯಲ್ಲೂ ಗಮನ ಸೆಳೆಯುತ್ತಿದೆ. ನಗರದ ಜನರು ಮತ್ತು ಗ್ರಾಮೀಣ ಭಾಗಗಳಿಂದ ಮಾರುಕಟ್ಟೆಗೆ ಧಾವಿಸುತ್ತಿರುವ ಜನರು ವಿವಿಧ ಸಾಮಗ್ರಿಗಳು ಮತ್ತು ಬಟ್ಟೆ ಖರೀದಿಯತ್ತ ಹೆಜ್ಜೆಹಾಕುವುದು ಸಾಮಾನ್ಯವಾಗಿತ್ತು. ಮಹಾನವಮಿಯ ವಿಶೇಷ ಸಂದರ್ಭದಲ್ಲಿ ಹೊಸ ವ್ಯಾಪಾರಿ ಮಳಿಗೆಗಳು ಉದ್ಘಾಟನೆ ಆಗಿದ್ದು, ಜನರು ಪೂಜಾ ಸಾಮಗ್ರಿಗಳನ್ನು ಖರೀದಿಸಲು ಮುಗಿಬಿದ್ದಿದ್ದರು. ಇಂದು ಮನೆಗಳಲ್ಲಿರುವ ಲೋಹದ ಸಾಮಗ್ರಿಗಳಿಗೆ ಪೂಜೆ ಸಲ್ಲಿಸುವುದು, ವಾಹನಗಳನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.
ದೇವಸ್ಥಾನಗಳ ಮುಂದೆ ಸರದಿಯಲ್ಲಿ ನಿಂತ ಜನ
ರಾಯಚೂರು ಜಿಲ್ಲೆಯಲ್ಲಿ ವಿಜಯದಶಮಿ ದಿನದಂದು ಮನೆಗಳಿಗೆ ಹೊಸ ವಾಹನಗಳನ್ನು ತರುವುದು ವ್ಯಾಪಕವಾಗಿದೆ. ಜಿಲ್ಲಾದ್ಯಂತ ಯಾವುದೇ ಬೈಕ್ ಶೋ ರೂಂ, ಕಾರುಗಳ ಶೋ ರೂಂಗಳಲ್ಲಿ ವಾಹನಗಳ ಖರೀದಿಗಾಗಿ ಜನರು ನೆರೆದಿರುವುದು ಕಂಡುಬರುತ್ತಿದೆ. ದಸರಾ ಸಂದರ್ಭದಲ್ಲಿ ಖರೀದಿಸುವ ವಾಹನಗಳಿಗೆ ವಿಶೇಷ ರಿಯಾಯ್ತಿಗಳನ್ನು ಕಂಪೆನಿಗಳು ಘೋಷಿಸಿವೆ. ಬ್ಯಾಂಕ್ ಸಾಲ ಸಹಿತ, ತಿಂಗಳು ಕಂತು ಆಧರಿಸಿ ವಾಹನಗಳ ಖರೀದಿಗೆ ಗ್ರಾಹಕರನ್ನು ಸೆಳೆಯಲು ಶೋರೂಮ್ಗಳ ಮಾಲೀಕರು ಸಾಕಷ್ಟು ರಿಯಾಯಿತಿ ಯೋಜನೆಗಳನ್ನು ಘೋಷಿಸಿದ್ದಾರೆ. 'ಮಹಾನವಮಿ ಸಂದರ್ಭದಲ್ಲಿ ಸಾಮಾನ್ಯವಾಗಿ ಜನರು ಹೊಸ ವಾಹನಗಳನ್ನು ಖರೀದಿಸುವುದು ಹೆಚ್ಚಾಗಿರುತ್ತದೆ. ಆರಂಭದಲ್ಲಿ ಶೋ ರೂಂಗಳಲ್ಲಿ ಮಾತ್ರ ಎಷ್ಟು ಖರೀದಿ ಆಗಿವೆ ಎನ್ನುವ ಮಾಹಿತಿ ಇರುತ್ತದೆ. ನೋಂದಣಿ ಪ್ರಕ್ರಿಯೆ ಮುಗಿದು ತಿಂಗಳ ಕೊನೆಯಲ್ಲಿ ಆರ್ಟಿಓ ಕಚೇರಿಯಲ್ಲಿ ನಿಖರವಾದ ಸಂಖ್ಯೆ ಸಿಗುತ್ತದೆ' ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯ್ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಬಾರಿ ಕಳೆಗಟ್ಟಿದ ನಾಡಹಬ್ಬ ದಸರಾ
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಆಯುಧಪೂಜೆ ಮತ್ತು ವಿಜಯದಶಮಿಯನ್ನು ಸರಳವಾಗಿ ಆಚರಿಸಲಾಯಿತು. ಹೀಗಾಗಿ, ಈ ಬಾರಿ ಅದ್ಧೂರಿಯಾಗಿ ದಸರಾ ಆಚರಣೆ ನಡೆಯುತ್ತಿದೆ. ಇದಕ್ಕಾಗಿ ಅಂಗಡಿಗಳು, ಕಚೇರಿಗಳು, ವಾಹನಗಳನ್ನು ಅಲಂಕರಿಸಲಾಗಿದೆ. ಜೊತೆಗೆ ಮನೆಗಳಲ್ಲಿ ಕೂಡ ತಳಿರು-ತೋರಣಗಳನ್ನು ಕಟ್ಟಲು ಖರೀದಿಯೂ ಜೋರಾಗಿ ನಡೆದಿತ್ತು. ಮಹಿಳೆಯರು ಹಬ್ಬಕ್ಕಾಗಿ ಹೊಸ ಬಟ್ಟೆ, ಅಲಂಕಾರಕ್ಕೆ ಬೇಕಾದ ವಸ್ತುಗಳನ್ನು ಅತ್ಯಂತ ಖುಷಿಯಿಂದ ಖರೀದಿಸುತ್ತಿದ್ದರು. ಹಲವರಿಗೆ ದಸರಾ ಎಂಬುದು ದೊಡ್ಡ ಹಬ್ಬವಾಗಿದೆ. ಹೀಗಾಗಿ ಈ ಬಾರಿ ಹಬ್ಬ ಎಲ್ಲೆಲ್ಲೂ ಸಂಭ್ರಮದಿಂದ ಕಳೆಗಟ್ಟಿದೆ.
ಪೂಜಾ ಸಾಮಗ್ರಿ ಖರೀದಿಗೆ ಮುಗಿಬಿದ್ದ ಜನರು
ಇನ್ನು ನಾಡಹಬ್ಬ ದಸರಾಗೆ ಖರೀದಿ ಭರಾಟೆಯೂ ಜೋರಾಗಿದೆ. ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಬೂದುಗುಂಬಳ, ನಿಂಬೆಹಣ್ಣು ಹೇರಳವಾಗಿ ಬಂದಿದೆ. ಖರೀದಿದಾರರು ಕೂಡ ಹೂವು, ಹಣ್ಣು ಹಾಗೂ ಇತರೆ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ. ಹೂವು, ಹಣ್ಣುಗಳ ಬೆಲೆ ಸಗಟು ಮಾರುಕಟ್ಟೆಯಲ್ಲಿ ತೀರಾ ದುಬಾರಿ ಇಲ್ಲದಿದ್ದರೂ ಚಿಲ್ಲರೆ ಮಾರಾಟಗಾರರು ಸ್ವಲ್ಪ ದರ ಏರಿಸಿಯೇ ಮಾರುತ್ತಿದ್ದಾರೆ. ಗ್ರಾಹಕರಿಗೆ ಸಂಪ್ರದಾಯ ಬದ್ಧವಾಗಿ ಹಬ್ಬದ ಆಚರಣೆ ಮಾಡುವುದು ಮುಖ್ಯವಾಗಿದೆ. ಹೀಗಾಗಿ ಚೌಕಾಸಿ ಮಾಡುತ್ತಲೇ ಹಬ್ಬದ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ.
ಕಂಗೊಳಿಸುತ್ತಿರುವ ದೇವಸ್ಥಾನಗಳು
ದೇವಸ್ಥಾನಗಳಲ್ಲಿ ಕೂಡ ಎರಡು ವರ್ಷಗಳಿಂದ ಭಕ್ತರಿಗೆ ಮಂಗಳಾರತಿ, ತೀರ್ಥ ಪ್ರಸಾದಗಳನ್ನು ನೀಡದೆ, ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ದೇವಾಲಯಗಳಲ್ಲಿ ಕೂಡ ವಿಶೇಷ ಅಲಂಕಾರಗಳು, ಪೂಜೆ, ಹೋಮ, ಹವನಗಳು, ವಾಹನಗಳಿಗೆ ಪೂಜೆ ಮಾಡಿಸುವ ಮೂಲಕ ಸಡಗರ, ಸಂಭ್ರಮದಿಂದ ಹಬ್ಬವನ್ನು ಆಚರಿಸಲು ತಯಾರಿ ನಡೆಸಿದ್ದಾರೆ. ಇಂದು ಮತ್ತು ನಾಳೆ ದೇವಾಲಯಗಳಿಗೆ ಹೆಚ್ಚಿನ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಎಲ್ಲಾ ಸಿದ್ಧತೆಗಳು ನಡೆದಿವೆ.