ಅನುಮೋದನೆ ಸಿಕ್ಕಿರುವ ರಸ್ತೆ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ?
ದೇವದುರ್ಗ, ಜೂನ್.10 : ಅದು ನೂರಾರು ಕೋಟಿ ಮೊತ್ತದ ರಸ್ತೆ ಕಾಮಗಾರಿ. ರೋಡ್ ನಿರ್ಮಿಸಲು ಟೆಂಡರ್ ನೀಡಿ ದಶಕಗಳೇ ಕಳೆಯುತ್ತ ಬಂದವು. ಆದರೆ ರಸ್ತೆ ಮಾತ್ರ ಇನ್ನೂ ನಿರ್ಮಾಣವಾಗಿಲ್ಲ. ಇದರಿಂದ ಸಾರ್ವಜನಿಕರು ಸಂಚಾರಕ್ಕೆ ಪರದಾಡುತ್ತಿದ್ದರೆ, ವಿದ್ಯಾರ್ಥಿಗಳು ಶಿಕ್ಷಣದಿಂದಲೇ ವಂಚಿತರಾಗುತ್ತಿದ್ದಾರೆ.
ಡಾಂಬರ್ ಇಲ್ಲದ ರಸ್ತೆ, ಕಿತ್ತೋದ ಕಲ್ಲುಗಳು, ವಾಹನಗಳು ಚಲಿಸಿದ್ರೆ ದಟ್ಟವಾಗಿ ಆವರಿಸಿಕೊಳ್ಳುವ ಧೂಳು, ರಸ್ತೆ ಸಮಸ್ಯೆಯಿಂದ ಸ್ಥಗಿತಗೊಂಡ ಸರ್ಕಾರಿ ಬಸ್ ಸಂಚಾರ. ಈ ದೃಶ್ಯ ಕಂಡು ಬರೋದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಟು ಗೂಗಲ್ ಗ್ರಾಮದ ಮಾರ್ಗದಲ್ಲಿ.
ಚುನಾವಣೆ ಮುಗಿದರೂ ಆರಂಭವಾಗದೆ ಅರ್ಧಕ್ಕೆ ನಿಂತ ವೈಟ್ ಟಾಪಿಂಗ್ ಕಾಮಗಾರಿ
ಜಾಲಹಳ್ಳಿ, ಅರಕೇರಾ, ಸುಂಕೇಶ್ವರಹಾಳ ಹಾಗೂ ಗೂಗಲ್ ಗ್ರಾಮಗಳ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದು. ಈ ಭಾಗದಲ್ಲಿ ಸುಮಾರು 10ಕ್ಕೂ ಹೆಚ್ಚು ಗ್ರಾಮಗಳು ಬರುತ್ತವೆ. ರಸ್ತೆ ಸರಿ ಇಲ್ಲದಿರುವುದರಿಂದ ಬಸ್ಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.
ಕಳೆದೆರಡು ದಶಕಗಳಿಂದ ಜನ ಸಂಚಾರಕ್ಕಾಗಿ ಪರದಾಡುತ್ತಿದ್ದಾರೆ. ಅಲ್ಲದೇ ಶಾಲಾ-ಕಾಲೇಜು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಸುಂಕೇಶ್ವರಹಾಳದಿಂದ ಗೂಗಲ್ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಗಾಗಿ 2012ರಲ್ಲಿ ಅನುಮೋದನೆ ನೀಡಲಾಗಿದೆ. ಎರಡು ರಸ್ತೆಗಳ ಅಭಿವೃದ್ಧಿಗಾಗಿ ಒಟ್ಟು 160 ಕೋಟಿ ರೂಪಾಯಿ ಮಂಜೂರಾಗಿದ್ದು ಗುತ್ತಿಗೆದಾರರಿಗೆ ನೀಡಲಾಗಿದೆ.
ಆದರೆ ಗುತ್ತಿಗೆದಾರರು, ಸ್ಥಳೀಯ ಶಾಸಕ ಕೆ.ಶಿವನಗೌಡ ನಾಯಕ, ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿ ನಡುವಿನ ಸಮಸ್ಯೆಯಿಂದ ರಸ್ತೆ ಕಾಮಗಾರಿ ನೆನಗುದಿಗೆ ಬಿದ್ದಿದೆ. ಅಲ್ಲದೇ ರಸ್ತೆ ಕಾಮಗಾರಿಯ ಟೆಂಡರ್ ಪಡೆದಿದ್ದ ಗುತ್ತಿಗೆದಾರರು ಹಿಂದೆ ಸರಿದಿದ್ದು, ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕಾದ ಜನಪ್ರತಿನಿಧಿಗಳೇ ಜನರ ಸಮಸ್ಯೆ ಮುಂದೂಡುತ್ತಿದ್ದಾರೆ. ರಸ್ತೆ ಸಂಪರ್ಕದ ಅನಾನುಕೂಲದಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ರೋಗಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ.
ಅನುಮೋದನೆ ಸಿಕ್ಕಿರುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಾರಾ? ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.