ಉಸಿರುಗಟ್ಟುವ ವಾತಾವರಣದಲ್ಲಿ ಅಂಬೇಡ್ಕರ್ ಹಾಸ್ಟೆಲ್ ವಿದ್ಯಾರ್ಥಿಗಳು
ರಾಯಚೂರು, ನ.27: ಇಲ್ಲಿರುವುದು ಸೂಕ್ತ ಗಾಳಿ, ಬೆಳಕಿಲ್ಲದ 10 ಕೊಠಡಿಗಳು. ಇಲ್ಲಿ ವಾಸ್ತವ್ಯ ಹೂಡಿರುವುದು ಬರೋಬ್ಬರಿ 250 ವಿದ್ಯಾರ್ಥಿಗಳು. ಇಕ್ಕಟ್ಟಾದ ಈ ಕೋಣೆಗಳಲ್ಲೇ, ಉಸಿರುಗಟ್ಟುವ ವಾತಾವರಣದಲ್ಲಿ ಉಳಿದುಕೊಳ್ಳುವ ಅನಿವಾರ್ಯತೆ ಇಲ್ಲಿನ ವಿದ್ಯಾರ್ಥಿಗಳದ್ದು. ಸಮಾಜ ಕಲ್ಯಾಣ ಇಲಾಖೆಯ ಅಧೀನಕ್ಕೆ ಒಳಪಟ್ಟ ಹಾಸ್ಟೆಲ್ನಲ್ಲಿನ ವಿದ್ಯಾರ್ಥಿಗಳ ಸಂಕಷ್ಟದ ಪರಿಸ್ಥಿತಿಯಿದು.
ರಾಯಚೂರು ಪಟ್ಟಣದ ಬಳಗಾನೂರು ರಸ್ತೆಯಲ್ಲಿನ ಖಾಸಗಿ ಕಟ್ಟಡದಲ್ಲಿ ಎರಡು ವರ್ಷಗಳಿಂದ ನಡೆಯುತ್ತಿರುವ ಡಾ. ಬಿ. ಆರ್. ಅಂಬೇಡ್ಕರ್ ಕಾಲೇಜು ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಹೇಳತೀರದಾಗಿದೆ.
ಈ ಖಾಸಗಿ ಕಟ್ಟಡದ 11 ಕೊಠಡಿಗಳಲ್ಲಿ ಒಂದನ್ನು ಅಡುಗೆಗಾಗಿ ಮೀಸಲಾಗಿಡಲಾಗಿದೆ. ಉಳಿದ 10 ಚಿಕ್ಕ ಕೊಠಡಿಗಳಲ್ಲಿ 5 ರಿಂದ 6 ಮಂಚಗಳನ್ನು ಹಾಕಲಾಗಿದ್ದು, 20 ರಿಂದ 22 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಉಸಿರುಗಟ್ಟುವ ವಾತಾವರಣದಲ್ಲಿ ವಿದ್ಯಾರ್ಥಿಗಳ ಕಲಿಕಾಭ್ಯಾಸ ನಡೆದಿದೆ.
ಪ್ರತಿ ಕೊಠಡಿಯಲ್ಲಿ ಒಂದೊಂದು ಶೌಚಾಲಯ ಹಾಗೂ ಸ್ನಾನದ ಸೌಲಭ್ಯಗಳಿದ್ದು, ವಿದ್ಯಾರ್ಥಿಗಳು ಪರದಾಡುವಂತ ಪರಿಸ್ಥಿತಿ ಇದೆ. ಕಟ್ಟಡದ ಮೇಲ್ಭಾಗದ ಛಾವಣಿ ಮೇಲೆಯೇ ಬಹುತೇಕ ವಿದ್ಯಾರ್ಥಿಗಳು ಸ್ಥಾನ ಮಾಡುವ ಪರಿಸ್ಥಿತಿ ಇದೆ.
ಮೂಲ ಸೌಕರ್ಯ ಕೊರತೆ; ಅಂಬೇಡ್ಕರ್ ಹಾಸ್ಟೆಲ್ನಲ್ಲಿ ಪಿಯುಸಿ ಹಾಗೂ ಡಿಗ್ರಿ ಕಾಲೇಜಿನ 250 ವಿದ್ಯಾರ್ಥಿಗಳು ಇದ್ದು ಸರಿಯಾದ ಮಂಚ, ಗಾದಿ, ಹೊದಿಕೆ ವ್ಯವಸ್ಥೆ ಕಲ್ಪಿಸಿಲ್ಲ. ಒಂದೇರಡು ರೂಮ್ಗಳಲ್ಲಿ ಮಾತ್ರ ಸೋಲಾರ್ ಲೈಟ್ ವ್ಯವಸ್ಥೆ ಇದ್ದು, ಕರೆಂಟ್ ಕೈಕೊಟ್ಟರೆ ಉಳಿದ ಕೊಠಡಿಯ ವಿದ್ಯಾರ್ಥಿಗಳು ಕತ್ತಲಲ್ಲೇ ಕಾಲ ಕಳೆಯುವ ಪರಿಸ್ಥಿತಿ ಇದೆ.
ಇತ್ತ, ಹಾಸ್ಟೆಲ್ನಲ್ಲಿ ಮೂರು ತಿಂಗಳಿಗೊಮ್ಮೆ ವಾರ್ಡನ್ ಬದಲಾಗುತ್ತಿದ್ದಾರೆ. ಇದರಿಂದ ಇಲ್ಲಿಯ ಸಮಸ್ಯೆ ಬಗ್ಗೆ ಯಾರು ಹೆಚ್ಚು ಗಮನ ಕೊಡುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ.
ಸರ್ಕಾರ ಒಂದು ಕಡೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳ ವಸತಿ ಶಾಲೆ, ವಸತಿ ನಿಲಯ ಆರಂಭಿಸುತ್ತಿದೆ. ಆದರೆ, ಇರುವ ಹಾಸ್ಟೆಲ್ ಹಾಗೂ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ಹಾಗೂ ಮೂಲ ಸೌಕರ್ಯಗಳನ್ನು ಕೊಡುವಲ್ಲಿ ವಿಫಲವಾಗಿದೆ ಎಂದು ದಲಿತ ಮುಖಂಡ ಹನುಮಂತಪ್ಪ ವೆಂಕಟಾಪೂರ, ಮಲ್ಲಯ್ಯ ಬಳ್ಳಾ ಆರೋಪಿಸಿದ್ದಾರೆ. ಸರ್ಕಾರ ಕೂಡಲೇ ಅಂಬೇಡ್ಕರ್ ಹಾಸ್ಟೆಲ್ಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.