ರಾಯಚೂರು: ದಿನೇ ದಿನೇ ಬೆಳೆಯುತ್ತಲೇ ಇದೆ ಹಾರುಬೂದಿ ಆತಂಕ
ರಾಯಚೂರು, ಜೂನ್.29: ರಾಜ್ಯಕ್ಕೆ ಬೆಳಕು ನೀಡುತ್ತಿರುವ ಆರ್ಟಿಪಿಎಸ್ ಮತ್ತು ವೈಟಪಿಎಸ್ ಘಟಕಗಳು ಮುಂದಿನ ವರ್ಷಗಳಲ್ಲಿ ಬೀಗ ಹಾಕಲಿವೆಯಾ? ಹೀಗೊಂದು ಆತಂಕ ಇದೀಗ ದಟ್ಟವಾಗುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿದ್ಯುತ್ ಉತ್ಪಾದನೆ ಬಳಿಕ ಉಂಟಾಗುವ ಹಾರು ಬೂದಿ ಸಮಸ್ಯೆ ದಿನೇ ದಿನೇ ಬೆಳೆಯುತ್ತಿದೆ.
ಈ ಸಂಬಂಧ ಕೇಂದ್ರದ ಹಾರುಬೂದಿ ಹೊಂಡ ಅಧ್ಯಯನ ಸಮಿತಿ ವರದಿ ನೀಡಿದೆ. ರಾಜ್ಯ ಬೆಳಕಿನಲ್ಲಿರಬೇಕಾದರೆ ರಾಯಚೂರು ಬಳಿಯ ಆರ್ಟಿಪಿಎಸ್ ಮತ್ತು ವೈಟಿಪಿಎಸ್ ಘಟಕಗಳಲ್ಲಿ ಕಲ್ಲಿದ್ದಲು ಸದಾ ಸುಡುತ್ತಲಿರಬೇಕು. ಇಡೀ ರಾಜ್ಯದ ಶೇಕಡ 40ರಷ್ಟು ವಿದ್ಯುತ್ ಕ್ಷಾಮವನ್ನು ಆರ್ಟಿಪಿಎಸ್ ಹಾಗೂ ವೈಟಿಪಿಎಸ್ ಘಟಕಗಳು ನಿಭಾಯಿಸುತ್ತವೆ.
ರಾಯಚೂರು: ಹೆಚ್ಚಿದ ಮಳೆ, ಕಡಿಮೆಯಾಯ್ತು ವಿದ್ಯುತ್ ಬೇಡಿಕೆ
ಆರ್ಟಿಪಿಎಸ್ ಮತ್ತು ವೈಟಪಿಎಸ್ನಲ್ಲಿ 10 ವಿದ್ಯುತ್ ಉತ್ಪಾದನಾ ಘಟಕಗಳಿದ್ದು, ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ಕಲ್ಲಿದ್ದಲು ಬಳಕೆಯಾಗುತ್ತಿದೆ. ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸಿದ ನಂತರ ಉಂಟಾಗುವ ಹಾರುಬೂದಿಯಿಂದ ಆರ್ಟಿಪಿಎಸ್ ಹಾಗೂ ವೈಟಿಪಿಎಸ್ಗೆ ಆತಂಕ ಎದುರಾಗಿದೆ.
ಹಾರುಬೂದಿ ಸಂಗ್ರಹಣೆ ಮತ್ತು ನಿರ್ವಹಣೆ ಕೊರತೆಯಿಂದ ವಿದ್ಯುತ್ ಉತ್ಪಾದನಾ ಘಟಕಗಳು ಮುಂದಿನ ದಿನಗಳಲ್ಲಿ ಬಂದ್ ಆಗುವ ಸಾಧ್ಯತೆಯಿದೆ. ಈ ಸಂಬಂಧ ಅಧ್ಯಯನ ಸಮಿತಿಯೊಂದು ಕೆಪಿಸಿಎಲ್ಗೆ ಎಚ್ಚರಿಕೆ ನೀಡಿದೆ.
ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳನ್ನು ಆರಂಭಿಸುವಾಗ ಹಾರು ಬೂದಿಯ ನಿರ್ವಹಣೆಗೂ ಯೋಜನೆ ರೂಪಿಸಲಾಗಿದೆ. ಅದರಂತೆ ಆರ್ಟಿಪಿಎಸ್ ಘಟಕದ ಬಳಿ ಸಾವಿರಾರು ಎಕರೆ ಪ್ರದೇಶದಲ್ಲಿ ಹಾರುಬೂದಿ ಸಂಗ್ರಹ ಹೊಂಡಗಳನ್ನು ಸ್ಥಾಪಿಸಲಾಗಿದೆ.
ಯೋಜನೆಯಂತೆ ಹಾರು ಬೂದಿ ಹೊಂಡಗಳು 2021ರ ವೇಳೆಗೆ ಭರ್ತಿಯಾಗಬೇಕು. ಆದರೆ ಆರ್ಟಿಪಿಎಸ್ ಹಾಗೂ ವೈಟಿಪಿಎಸ್ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಮುಂದಿನ ಎರಡು ವರ್ಷಗಳಲ್ಲಿ ಹಾರು ಬೂದಿ ಹೊಂಡಗಳು ತುಂಬಲಿದೆ.
ಹಾಗಾದರೆ ಮುಂದೆ ಹಾರುಬೂದಿ ನಿರ್ವಹಣೆ ಹೇಗೆ ಎಂಬುದು ಪ್ರಶ್ನೆಯಾಗಿದೆ. ವಿದ್ಯುತ್ ಸ್ಥಾವರಗಳಿಂದ ಹೊರಹೊಮ್ಮುವ ಹಾರು ಬೂದಿಯ 75ರಷ್ಟು ಭಾಗವನ್ನು ಸಿಮೆಂಟ್ ಸೇರಿದಂತೆ ಸಣ್ಣ ಕೈಗಾರಿಕೆಗಳಿಗೆ ವಿತರಿಸಬೇಕು. ಇನ್ನುಳಿದ ಭಾಗವನ್ನು ನೀರಿನಲ್ಲಿ ಮಿಶ್ರಣ ಮಾಡಿ ಹೊಂಡಕ್ಕೆ ಬಿಡಬೇಕು.
ಆದರೆ ನಿಯಮ ಪಾಲನೆಯಾಗುತ್ತಿಲ್ಲದ್ದರಿಂದ ಹಾರು ಬೂದಿ ಸಮಸ್ಯೆ ಬೃಹತ್ ಪ್ರಮಾಣದಲ್ಲಿ ಬೆಳೆದಿದೆ.
ಅವೈಜ್ಞಾನಿಕ ಹಾರು ಬೂದಿ ವಿಲೇವಾರಿ ಬಗ್ಗೆ ಕೇಂದ್ರದ ಹಾರುಬೂದಿ ಹೊಂಡ ಅಧ್ಯಯನ ಸಮಿತಿ ವರದಿ ನೀಡಿದ್ದು, ಸದ್ಯ ಇರುವ ಹೊಂಡವನ್ನ 5 ಮೀಟರ್ ಎತ್ತರ ಹಾಗೂ ಮೂರೂವರೆ ಕಿಲೋ ಮೀಟರ್ ಉದ್ದ ಹೆಚ್ಚಿಸುವ ಯೋಜನೆ ಕೈಗೆತ್ತಿಕೊಂಡಿದ್ದಾರೆ.
ಶೇಕಡ 75ರಷ್ಟು ಹಾರುಬೂದಿಯನ್ನ ವಿತರಣೆ ಮಾಡದೇ ಮುಂದುವರೆಸಿದರೆ ಸುತ್ತಲಿನ ಪರಿಸರ, ಜೀವ ಸಂಕುಲಕ್ಕೆ ಧಕ್ಕೆ ಎದುರಾಗಲಿದೆ. ಹೀಗಾಗಿ ಆರ್ಟಿಪಿಎಸ್ ಹಾಗೂ ವೈಟಿಪಿಎಸ್ ಅಧಿಕಾರಿಗಳು ಯಾವ ಮುಂಜಾಗ್ರತ ಕ್ರಮಕೈಗೊಳ್ಳುತ್ತಾರೆಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.