ರಾಯಚೂರಿನ ಜೆಎಂಎಫ್ಸಿ ಕೋರ್ಟಿಗೆ ಹಾಜರಾದ ಪೂಜಾ ಗಾಂಧಿ
ರಾಯಚೂರು, ಅಕ್ಟೋಬರ್ 26: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪೂಜಾ ಗಾಂಧಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ರಾಯಚೂರಿನ ಜೆಎಂಎಫ್ ಸಿ 2ನೇ ನ್ಯಾಯಾಲಯಕ್ಕೆ ನಟಿ ಹಾಜರಾದರು. ವಿಚಾರಣೆಗೆ ಬಂದಿರುವ ನಟಿ ಪೂಜಾಗಾಂಧಿಗೆ ಕೊರ್ಟ್ ಹಾಲ್ ನಲ್ಲಿ ಕಾದು ಕುಳಿತುಕೊಳ್ಳುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.
2013ರ ವಿಧಾನಸಭೆ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಬಾರಿ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ, ನ್ಯಾಯಾಲಯವು ನಟಿ ಪೂಜಾಗಾಂಧಿಗೆ ವಾರೆಂಟ್ ಜಾರಿಗೊಳಿಸಿತ್ತು.
ಪೂಜಾಗಾಂಧಿ ಹಾಜರಾದರೂ ವಿಚಾರಣೆ ಕಾಯ್ದಿರಿಸಿರುವ ನ್ಯಾಯಾಧೀಶೆ ಪೂರ್ಣಿಮಾ ಯಾದವ್ ಅವರು ಸಂಜೆ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಜೂನ್ 19 ರಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಹಾಜರಾಗದ ಕಾರಣ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು. ಕೊನೆಗೆ ಪೊಲೀಸರು ಬೆಂಗಳೂರಿಗೆ ಹೋಗಿ ವಿಚಾರಣೆಗೆ ಕರೆತಂದಿದ್ದಾರೆ.
ವಿಚಾರಣೆಗೆ ಹಾಜರಾಗದಿರುವುದಕ್ಕೆ ಕೋಪಗೊಂಡ ನ್ಯಾಯಾಧೀಶೆ ಪೂರ್ಣಿಮಾ ಯಾದವ್ ಅವರು ನಟಿ ಪೂಜಾಗಾಂಧಿಗೆ ಕಾದು ಕುಳಿತುಕೊಳ್ಳುವಂತೆ ಸೂಚಿಸಿದ್ದಾರೆ. ಮಧ್ಯಾಹ್ನ ಭೋಜನ ವಿರಾಮ ವೇಳೆಯಾದರೂ ಎರಡೂವರೆ ಗಂಟೆಯಿಂದ ಕಾದು ಕುಳಿತ್ತಿದ್ದಾರೆ. ಸಂಜೆ ವೇಳೆಗೆ ಜಾಮೀನು ವಿಚಾರಣೆ ನಡೆಯಬಹುದು ಎಂದು ವಕೀಲರು ತಿಳಿಸಿದ್ದಾರೆ. ಈ ನಡುವೆ ಜಾಮೀನು ಸಿಗದಿದ್ದರೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಯಿದೆ. ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂಜಾ ಅವರು ಜಾಮೀನು ಪಡೆದುಕೊಂಡಿದ್ದಾರೆ.
ಚುನಾವಣೆಯಲ್ಲಿ ಬಿಎಸ್ ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ ಅವರು ಅನುಮತಿ ಇಲ್ಲದ ವಾಹನವನ್ನು ಚುನಾವಣಾ ಪ್ರಚಾರಕ್ಕೆ ಬಳಸಿದ್ದರು. ಈ ಕುರಿತಂತೆ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.