ಅಜಿತ್ ನಡೆಯ ಹಿಂದೆ ನನ್ನ ಕೈವಾಡವಿಲ್ಲ: ಶರದ್ ಪವಾರ್
ಪುಣೆ, ನವೆಂಬರ್ 25: ಬಿಜೆಪಿ ಜತೆ ಸೇರಿ ಸರ್ಕಾರ ರಚಿಸುವ ಅಜಿತ್ ಪವಾರ್ ಅವರ ಗುಪ್ತ ನಡೆಯ ಹಿಂದೆ ತಮ್ಮ ಕೈವಾಡವಿದೆ ಎಂಬ ಆರೋಪಗಳನ್ನು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅಲ್ಲಗಳೆದಿದ್ದಾರೆ. ಶಿವಸೇನಾ ನೇತೃತ್ವದಲ್ಲಿ ಎನ್ಸಿಪಿ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗುವುದು ಖಚಿತ ಎಂದು ಅವರು ಹೇಳಿದ್ದಾರೆ.
ಸತಾರ ಜಿಲ್ಲೆಯ ಕರಾದ್ ಪಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡ ನಿರ್ಧಾರವು ಅಜಿತ್ ಪವಾರ್ ಅವರ ವೈಯಕ್ತಿಕವಾದುದ್ದೇ ಹೊರತು ಎನ್ಸಿಪಿಯದ್ದಲ್ಲ ಎಂದು ಪುನರುಚ್ಚರಿಸಿದರು.
ಮಹಾರಾಷ್ಟ್ರ: ಅಜಿತ್ ಪವಾರ್ಗೆ ಹಗರಣ ಆರೋಪದಿಂದ ಕ್ಲೀನ್ಚಿಟ್ ಗಿಫ್ಟ್?
'ಇದು ಪಕ್ಷದ ನಿರ್ಧಾರವಲ್ಲ. ಅಜಿತ್ ಪವಾರ್ ಅವರ ನಡೆಯನ್ನು ನಾವು ಬೆಂಬಲಿಸುವುದೂ ಇಲ್ಲ' ಎಂದು ಮತ್ತೆ ಹೇಳಿದ ಶರದ್, 'ಅಜಿತ್ ಪವಾರ್ ಅವರ ಬಂಡಾಯದ ಹಿಂದೆ ನನ್ನ ಕೈವಾಡ ಇದೆ ಎಂಬ ಆರೋಪವು ಸತ್ಯಕ್ಕೆ ದೂರವಾಗಿದೆ' ಎಂದು ಸ್ಪಷ್ಟನೆ ನೀಡಿದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರದಲ್ಲಿ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಸರ್ಕಾರ ರಚನೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಉಚ್ಚಾಟನೆ ಬಗ್ಗ ಸಭೆಯಲ್ಲಿ ತೀರ್ಮಾನ
ತಮ್ಮ ಅಣ್ಣನ ಮಗ ಅಜಿತ್ ಪವಾರ್ ಅವರೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದರು. ಅಜಿತ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ, ಈ ನಿರ್ಧಾರವನ್ನು ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದರು.
ಕಷ್ಟಗಳು ತಾತ್ಕಾಲಿಕ
'ನನ್ನ 50 ವರ್ಷದ ರಾಜಕೀಯ ಬದುಕಿನಲ್ಲಿ ಇಂತಹ ಅನೇಕ ಸಂದರ್ಭಗಳನ್ನು ನೋಡಿದ್ದೇನೆ. ಕಷ್ಟಗಳು ಬರುತ್ತವೆ, ಆದರೆ ಅವು ತಾತ್ಕಾಲಿಕ. ಹಾಗೆಯೇ ನನ್ನ ಅನುಭವದ ಪ್ರಕಾರ ರಾಜ್ಯದ ಜನರು ದೃಢವಾಗಿ ನಿಲ್ಲುತ್ತಾರೆ' ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಮತ್ತೊಂದು ಬೆಳವಣಿಗೆ: ರಾಜ್ಯಪಾಲರಿಗೆ ಸಂಕಟ
ಶಿವಸೇನಾಗೆ ಅವಿರೋಧ ಬೆಂಬಲ
ರಾಜ್ಯದಲ್ಲಿ ಬಿಜೆಪಿ-ಎನ್ಸಿಪಿ ಸರ್ಕಾರ ಸ್ಥಿರ ಆಡಳಿತ ನೀಡುತ್ತದೆ. ಅದಕ್ಕೆ ಪಕ್ಷದ ಬೆಂಬಲ ಸಿಗುತ್ತದೆ ಎಂಬ ಅಜಿತ್ ಪವಾರ್ ಟ್ವೀಟ್ಗೆ ಭಾನುವಾರ ಪ್ರತಿಕ್ರಿಯಿಸಿದ್ದ ಶರದ್, ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಎನ್ಸಿಪಿಯು ಶಿವಸೇನಾ ಮತ್ತು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವುದರ ಬಗ್ಗೆ ಅವಿರೋಧವಾಗಿ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದಿದ್ದರು.
ತಪ್ಪುದಾರಿಗೆ ಎಳೆಯುವ ಪ್ರಯತ್ನ
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರಕ್ಕೆ ಎನ್ಸಿಪಿಯ ಹಿರಿಯ ನಾಯಕರು ಬೆಂಬಲ ನೀಡಲಿದ್ದಾರೆ ಎಂಬ ಅಜಿತ್ ಪವಾರ್ ಹೇಳಿಕೆ ಸುಳ್ಳು ಮತ್ತು ತಪ್ಪುದಾರಿಗೆ ಎಳೆಯುವ ಮೂಲಕ ಜನರಲ್ಲಿ ಗೊಂದಲ ಮೂಡಿಸುವ ಹಾಗೂ ಮಿಥ್ಯ ಅಭಿಪ್ರಾಯ ಮೂಡಿಸುವ ಪ್ರಯತ್ನವಾಗಿದೆ ಎಂದು ಶರದ್ ಪವಾರ್ ಟ್ವೀಟ್ ಮಾಡಿದ್ದರು.