ಸೆರಂ ಇನ್ ಸ್ಟಿಟ್ಯೂಟ್ ನಲ್ಲಿ ಬೆಂಕಿ ಅವಘಡ; ವೆಲ್ಡಿಂಗ್ ವೇಳೆ ಅನಾಹುತ...
ಪುಣೆ, ಜನವರಿ 22: ಭಾರತದ ಕೊರೊನಾ ಲಸಿಕೆ ಕೋವಿಶೀಲ್ಡ್ ಉತ್ಪಾದನಾ ಕೇಂದ್ರ, ಪುಣೆಯಲ್ಲಿನ ಸೆರಂ ಇನ್ ಸ್ಟಿಟ್ಯೂಟ್ ನಲ್ಲಿ ಗುರುವಾರ ಮಧ್ಯಾಹ್ನದ ವೇಳೆ ಬೆಂಕಿ ಅವಘಡ ಸಂಭವಿಸಿದ್ದು, ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಪುಣೆಯ ಮಂಜಿರಿ ಪ್ರದೇಶದಲ್ಲಿರುವ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಟರ್ಮಿನಲ್ ಗೇಟ್-1 ಒಳಗಿನ SEZ-3 ಕಟ್ಟಡದ ನಾಲ್ಕನೇ ಮತ್ತು ಐದನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸತತ ಎರಡು ಗಂಟೆಯ ಕಾರ್ಯಾಚರಣೆ ನಂತರ ಬೆಂಕಿ ನಂದಿಸುವಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಕಟ್ಟಡದ ಒಳಗೆ ಸಿಲುಕಿದ್ದ ಸುಮಾರು ಒಂಬತ್ತು ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಆದರೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಳ್ಳಲು ಹಿಂದಿರುವ ನಿಖರ ಕಾರಣದ ಕುರಿತು ತನಿಖೆ ನಡೆಯುತ್ತಿದೆ.
ಪುಣೆ ಸೆರಂ ಇನ್ ಸ್ಟಿಟ್ಯೂಟ್ ಬೆಂಕಿ ಅವಘಡ; ಐವರು ಕಾರ್ಮಿಕರ ದುರ್ಮರಣ
ವಿದ್ಯುತ್ ಕಾರಣದಿಂದಾಗಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ವರದಿ ದೊರೆತಿರುವುದಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ನಿರ್ಮಾಣ ಹಂತದ ಕಟ್ಟಡದಲ್ಲಿ ವೆಲ್ಡಿಂಗ್ ಮಾಡುವ ಸಂದರ್ಭ ಬೆಂಕಿ ಹತ್ತಿಕೊಂಡಿರುವುದಾಗಿ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನ 2.45ರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಿಂಗಳ ನಂತರ ಅದೇ ಕಟ್ಟಡದಲ್ಲಿ ಕೊರೊನಾ ಲಸಿಕೆ ಉತ್ಪಾದನೆ ಮಾಡುವ ಯೋಜನೆಯಿತ್ತು ಎಂದು ತಿಳಿದುಬಂದಿದೆ.
ಈ ಅಗ್ನಿ ಅನಾಹುತದಲ್ಲಿ ಪೀಠೋಪಕರಣ, ವೈರಿಂಗ್, ಕ್ಯಾಬಿನ್ ಗಳು ಸುಟ್ಟು ಕರಕಲಾಗಿವೆ. ಆದರೆ ಲಸಿಕೆ ತಯಾರಿಕೆಗೆ ಇದರಿಂದ ಯಾವುದೇ ತೊಂದರೆಯಿಲ್ಲ ಎಂದು ಸೆರಂ ಇನ್ ಸ್ಟಿಟ್ಯೂಟ್ ನ ಸಿಇಒ ಅದಾರ್ ಪೂನಾವಾಲಾ ತಿಳಿಸಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದ ಐವರು ಕಾರ್ಮಿಕರಿಗೆ 25 ಲಕ್ಷ ಪರಿಹಾರ ಹಣವನ್ನು ಸಂಸ್ಥೆ ಘೋಷಿಸಿದೆ.