ಲಸಿಕೆಗಳು ಸುರಕ್ಷಿತ: ಬೆಂಕಿ ಅವಘಡದ ಬಳಿಕ ಅದಾರ್ ಸ್ಪಷ್ಟನೆ
ಪುಣೆ, ಜನವರಿ 22: ಕೊರೊನಾ ವೈರಸ್ ಲಸಿಕೆ ಕೋವಿಶೀಲ್ಡ್ನ ಉತ್ಪಾದನೆ ಮತ್ತು ಪೂರೈಕೆಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲ ತಿಳಿಸಿದ್ದಾರೆ. ಪುಣೆಯಲ್ಲಿನ ಲಸಿಕೆ ತಯಾರಿಕಾ ಕೇಂದ್ರದ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಐವರು ಕಾರ್ಮಿಕರು ಮೃತಪಟ್ಟ ಬಳಿಕ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜತೆ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
'ಇದು ಹೊಸ ಕಟ್ಟಡವಾಗಿತ್ತು. ಬಿಸಿಜಿ ಮತ್ತು ರೊಟಾವೈರಸ್ ಲಸಿಕೆಯ ಭವಿಷ್ಯದ ಉತ್ಪಾದನೆಗೆ ಮೀಸಲಾಗಿತ್ತು. ಅಲ್ಲಿ ವಾಸ್ತವವಾಗಿ ಯಾವುದೇ ಲಸಿಕೆ ಉತ್ಪಾದನೆಯಾಗುತ್ತಿರಲಿಲ್ಲ. ಹೀಗಾಗಿ ಯಾವ ಲಸಿಕೆಗೂ ಹಾನಿಯಾಗಿಲ್ಲ' ಎಂದು ತಿಳಿಸಿದ್ದಾರೆ.
ಸೆರಂ ಇನ್ ಸ್ಟಿಟ್ಯೂಟ್ ನಲ್ಲಿ ಬೆಂಕಿ ಅವಘಡ; ವೆಲ್ಡಿಂಗ್ ವೇಳೆ ಅನಾಹುತ...
ಆಸ್ಟ್ರಾಜೆನಿಕಾ-ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಸೆರಮ್ ಸಂಸ್ಥೆ ಉತ್ಪಾದಿಸುತ್ತಿದೆ. ಪ್ರಸ್ತುತ ಈ ಲಸಿಕೆ ತುರ್ತು ಬಳಕೆಯಲ್ಲಿದ್ದು, ವಿದೇಶಗಳಿಗೂ ರಫ್ತಾಗುತ್ತಿದೆ. ಘಟನೆಯಲ್ಲಿ ಕೋವಿಶೀಲ್ಡ್ಗೆ ಹಾನಿಯಾಗಿಲ್ಲ. ಕೋವಿಶೀಲ್ಡ್ ಉತ್ಪಾದನೆ ಮತ್ತು ಸಂಗ್ರಹಿಸಿರುವ ಸ್ಥಳ ಸುರಕ್ಷಿತವಾಗಿದೆ ಎಂದಿದ್ದಾರೆ.
ಬೆಂಕಿ ಅವಘಡದಲ್ಲಿ 1,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಸಲಕರಣೆ ಹಾಗೂ ಉತ್ಪನ್ನಗಳು ಹಾನಿಗೊಳಗಾಗಿವೆ. ನಷ್ಟ ಮುಖ್ಯವಾಗಿ ಆರ್ಥಿಕವಾಗಿದೆ. ಲಸಿಕೆ ಪೂರೈಕೆಯಂತಹ ಚಟುವಟಿಕೆಗಳಿಗೆ ಅಡ್ಡಿಯಿಲ್ಲ ಎಂದು ತಿಳಿಸಿದ್ದಾರೆ.
ಸೆರಮ್ ಸಂಸ್ಥೆಯ ಕಟ್ಟಡದಲ್ಲಿ ಮತ್ತೆ ಕಾಣಿಸಿಕೊಂಡ ಬೆಂಕಿ
ಘಟನೆ ಬಗ್ಗೆ ತನಿಖೆ ಪೂರ್ಣಗೊಂಡು ವರದಿ ಬರುವವರೆಗೂ ನಾವು ಯಾವುದೇ ಹೇಳಿಕೆ ನೀಡಲು ಆಗುವುದಿಲ್ಲ. ವರದಿ ಬಂದ ಬಳಿಕ ಅದು ನಿರ್ಲಕ್ಷ್ಯದಿಂದ ಆದ ಘಟನೆಯೇ ಅಥವಾ ಅಲ್ಲವೇ ಎನ್ನುವುದು ಗೊತ್ತಾಗಲಿದೆ ಎಂದು ಉದ್ಧವ್ ಠಾಕ್ರೆ ತಿಳಿಸಿದ್ದಾರೆ.