ಚಂದ್ರನನ್ನು ಲ್ಯಾಂಡರ್ ತಲುಪದಿರಲು 'ಏಕಾದಶಿ' ಕಾರಣ ಅಂತಿದ್ದಾರೆ ಈತ
ಪುಣೆ, ಸೆಪ್ಟೆಂಬರ್ 9: ಅಮೆರಿಕದಲ್ಲಿನ ಬಾಹ್ಯಾಕಾಶ ವಿಜ್ಞಾನಿಗಳು ತಮ್ಮ ಗಗನ ನೌಕೆಯನ್ನು ಚಂದ್ರನಲ್ಲಿಗೆ ಕಳುಹಿಸುವಲ್ಲಿ ಯಶಸ್ವಿ ಆದದ್ದು 39ನೇ ಪ್ರಯತ್ನದಲ್ಲಿ. ಏಕೆಂದರೆ ಅವರು ಉಡ್ಡಯನ ಮಾಡಿದ್ದು 'ಏಕಾದಶಿ'ಯಂದು ಎಂದು ಆರೆಸ್ಸೆಸ್ ನಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಸಂಭಾಜಿ ಭಿಡೆ ಸೋಮವಾರ ಹೇಳಿದ್ದಾರೆ.
ಚಂದ್ರನ ಬಳಿ ಹೋಗಿ ಆ ನಂತರ ಸಂಪರ್ಕ ಕಳೆದುಕೊಂಡ ಭಾರತದ ಲ್ಯಾಂಡರ್ ವಿಕ್ರಮ್ ಬಗ್ಗೆ ಅವರು ಮಾತನಾಡಿದ್ದಾರೆ. ಭಿಡೆ ಅವರು ಮಹಾರಾಷ್ಟ್ರದಲ್ಲಿ ಶಿವ್ ಪ್ರತಿಷ್ಠಾನ್ ಹಿಂದೂಸ್ತಾನ್ ನ ನೇತೃತ್ವ ವಹಿಸಿಕೊಂಡಿದ್ದಾರೆ. 2018ರ ಜನವರಿಯಲ್ಲಿ ಕೋರೆಗಾಂವ್- ಭೀಮದಲ್ಲಿ ನಡೆದ ಹಿಂಸಾಚಾರದ ಆರೋಪಿ ಅವರು.
ಅಮೆರಿಕವು ತನ್ನ್ ಬಾಹ್ಯಾಕಾಶ ನೌಕೆಯನ್ನು ಚಂದ್ರನಲ್ಲಿ ಕಳುಹಿಸಲು ಈ ಹಿಂದೆ 38 ಬಾರಿ ಪ್ರಯತ್ನಿಸಿ ವಿಫಲವಾಗಿತ್ತು ಎಂದು ಭಿಡೆ ಸೋಲಾಪುರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಆಗ ಅಮೆರಿಕದ ವಿಜ್ಞಾನಿಯೊಬ್ಬರು ಸಲಹೆ ನೀಡಿದರು: ಭಾರತದ ಪದ್ಧತಿಯ ಪ್ರಕಾರ ಕಾಲಮಾನವನ್ನು ಅನುಸರಿಸೋಣ, ನಮ್ಮ ಪದ್ಧತಿ ಬೇಡ ಎಂದರು. ಎಲ್ಲರೂ ಅಚ್ಚರಿಗೊಳ್ಳುವಂತೆ ಅಮೆರಿಕನ್ನರು ಬಾಹ್ಯಾಕಾಶ ನೌಕೆಯನ್ನು ಚಂದ್ರನಲ್ಲಿಗೆ ಕಳುಹಿಸಲು 39ನೇ ಯತ್ನದಲ್ಲಿ ಯಶಸ್ವಿಯಾದರು. ಅದು ಕೂಡ ಭಾರತದ ಕಾಲಮಾನದ ಅನ್ವಯ. ಅವರು ಯಾಕೆ ಯಶಸ್ವಿಯಾದರೆಂದರೆ, ಏಕಾದಶಿಯಂದು ಉಡ್ಡಯನ ಮಾಡಲಾಯಿತು ಎಂದು ಭಿಡೆ ಹೇಳಿದ್ದಾರೆ.
ಏಕಾದಶಿಯು ಪ್ರತಿ ಮಾಸದಲ್ಲಿ ಎರಡು ಬಾರಿ ಬರುತ್ತದೆ. ನಂಬಿಕೆ ಪ್ರಕಾರ, ಕೆಲವರು ಆ ದಿನ ಉಪವಾಸ ಆಚರಿಸುತ್ತಾರೆ. ಅಂದಹಾಗೆ, ಭಿಡೆ ಅವರು ಈ ಹಿಂದೆ ಮತ್ತೊಂದು ಹೇಳಿಕೆ ಮೂಲಕವೂ ಸುದ್ದಿ ಆಗಿದ್ದರು. "ನನ್ನ ತೋಟದಲ್ಲಿ ಬೆಳೆದ ಮಾವಿನ ಹಣ್ಣು ತಿಂದ ಮಹಿಳೆಯರಿಗೆ ಗಂಡು ಮಗು ಆಗಿದೆ" ಎಂದು ನಾಸಿಕ್ ನಲ್ಲಿ ಹೇಳಿದ್ದರು.