ಪುಣೆ: ಮೋದಿ ಬೆಂಗಾವಲು ಪಡೆಗೆ ಮುತ್ತಿಗೆ ಹಾಕಲು ಹೊರಟ ತೃಪ್ತಿ ದೇಸಾಯಿ ಬಂಧನ
ಪುಣೆ, ಅಕ್ಟೋಬರ್ 19: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಗೆ ಅಡ್ಡಿಪಡಿಸುವುದಾಗಿ ಬೆದರಿಕೆ ಒಡ್ಡಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರನ್ನು ಪುಣೆ ಪೊಲೀಸರು ಶುಕ್ರವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಮೋದಿ ಅವರು ಅವಕಾಶ ನೀಡಬೇಕು. ಒಂದು ವೇಳೆ ನೀಡದೆ ಇದ್ದರೆ, ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿರುವ ಮೋದಿ ಅವರ ಬೆಂಗಾವಲು ಪಡೆಗೆ ಮುತ್ತಿಗೆ ಹಾಕಿ ಅಡ್ಡಿಪಡಿಸುವುದಾಗಿ ತೃಪ್ತಿ ದೇಸಾಯಿ ಎಚ್ಚರಿಕೆ ನೀಡಿದ್ದರು.
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕೆಂಬ ಹೋರಾಟದ ನೇತೃತ್ವ ವಹಿಸಿಕೊಂಡಿರುವ ತೃಪ್ತಿ ದೇಸಾಯಿ, ಮೋದಿ ಅವರೊಂದಿಗೆ ಚರ್ಚೆಗೆ ಅವಕಾಶ ನೀಡುವಂತೆ ಅಹ್ಮದ್ನಗರ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದರು.
ಹೆಲ್ಮೆಟ್ ಧರಿಸಿ ಇಬ್ಬರು ಮಹಿಳೆಯರ ಶಬರಿಮಲೆ ಪ್ರವೇಶ ಕೊನೇ ಕ್ಷಣದಲ್ಲಿ ವಿಫಲ
ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೃಪ್ತಿ ಅವರೊಂದಿಗೆ ಇನ್ನೂ ಅನೇಕ ಮಹಿಳೆಯರನ್ನು ಬಂಧಿಸಲಾಗಿದೆ.
'ಆದೇಶವಿದ್ದರೂ ಬಿಡುತ್ತಿಲ್ಲ'
ತಮ್ಮ ಬಂಧನಕ್ಕೂ ಮುನ್ನ ಮಾತನಾಡಿದ ತೃಪ್ತಿ ದೇಸಾಯಿ, ಸುಪ್ರೀಂಕೋರ್ಟ್ನ ಆದೇಶವಿದ್ದರೂ ಶಬರಿಮಲೆ ದೇವಸ್ಥಾನದೊಳಕ್ಕೆ ಮಹಿಳೆಯರಿಗೆ ಪ್ರವೇಶ ನೀಡುತ್ತಿಲ್ಲ. ಈ ಘಟನೆಯನ್ನು ವರದಿ ಮಾಡಲು ಹೋದ ಪತ್ರಕರ್ತರ ಮೇಲೆಯೂ ಹಲ್ಲೆ ನಡೆಸಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಶಿರಡಿ ಬರುತ್ತಿದ್ದಾರೆ. ಅವರನ್ನು ಭೇಟಿ ಮಾಡಲು ಬಯಸಿದ್ದೇನೆ. ಶಿರಡಿ ಸಾಯಿ ದೇವಸ್ಥಾನದ ಒಳಗೆ ಎಲ್ಲರೂ ಭಯವಿಲ್ಲದೆ ಪ್ರವೇಶಿಸುವಾಗ ಅದು ಶಬರಿಮಲೆಯಲ್ಲಿ ಏಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದರು.
ಶಬರಿಮಲೆ ಗರ್ಭಗುಡಿ ಮುಚ್ಚಲು ರಾಜಮನೆತನದ ಆದೇಶ?
ಹಕ್ಕಿನ ಉಲ್ಲಂಘನೆ
ತಮ್ಮನ್ನು ವಶಕ್ಕೆ ತೆಗೆದುಕೊಂಡಿರುವುದು ಪ್ರತಿಭಟನೆ ನಡೆಸುವ ಪ್ರಜಾಸತ್ತಾತ್ಮಕ ಹಕ್ಕಿನ ಉಲ್ಲಂಘನೆ. ಶಿರಡಿಗೆ ಬೆಳಿಗ್ಗೆ ಹೊರಡುವ ಮುನ್ನವೇ ಬಂದು ಪೊಲೀಸರು ನನ್ನನ್ನು ಬಂಧಿಸಿದ್ದಾರೆ. ಇದೇ ಕ್ರಮವನ್ನು ಕೇರಳದಲ್ಲಿ ತೆಗೆದುಕೊಂಡಿದ್ದರೆ, ಇಂದು ಮಹಿಳೆಯರು ಅಯ್ಯಪ್ಪ ದೇವಸ್ಥಾನದೊಳಗೆ ಪ್ರವೇಶಿಸುತ್ತಿದ್ದರು. ನನಗೆ ಪ್ರತಿಭಟನೆ ನಡೆಸುವ ಹಕ್ಕು ಇದೆ. ಈ ರೀತಿ ಬಂಧಿಸುವ ಮೂಲಕ ಪೊಲೀಸರು ನಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದರು.
ಶಬರಿಮಲೆ ವಿವಾದದ ಬಗ್ಗೆ ಭಾಗವತ್ ವಿಷಾದದ ಪ್ರತಿಕ್ರಿಯೆ
|
ಭದ್ರತಾ ಕಾರಣ
ತೃಪ್ತಿ ದೇಸಾಯಿ ಅವರ ಬಂಧನವನ್ನು ಪೊಲೀಸರು ಭದ್ರತಾ ಕಾರಣಗಳ ಮೂಲಕ ಸಮರ್ಥಿಸಿಕೊಂಡಿದ್ದಾರೆ.
ಭದ್ರತಾ ಕಾರಣಗಳಿಂದ ಅವರು ಶಿರಡಿಗೆ ಹೋಗದಂತೆ ಮನವಿ ಮಾಡಿದ್ದೆವು. ಅವರು ಬಲವಂತವಾಗಿ ಅಲ್ಲಿಗೆ ತೆರಳಲು ಮುಂದಾದರೆ ಅವರನ್ನು ಬಂಧಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದು ಪೊಲೀಸ್ ಅಧಿಕಾರಿ ವಿಜಯ್ ಪುರಾಣಿಕ್ ತಿಳಿಸಿದ್ದಾರೆ.
|
ಹಿಂದೆ ಸರಿದ ಮಹಿಳೆಯರು
ತೀವ್ರ ವಿರೋಧದ ನಡುವೆಯೇ ವಿವಾದಾತ್ಮಕ ಶಬರಿಮಲೆ ಸ್ವಾಮಿ ದೇವಸ್ಥಾನ ಪ್ರವೇಶಿಸಲು ಮುಂದಾಗಿದ್ದ ಇಬ್ಬರು ಮಹಿಳೆಯರು ತಮ್ಮ ನಿರ್ಧಾರದಿಂದ ಕೊನೆಯ ಹಂತದಲ್ಲಿ ಹಿಂದಕ್ಕೆ ಸರಿದಿದ್ದಾರೆ.
ಗಲಭೆ ಪೀಡಿತ ಶಬರಿಮಲೆ ದೇಗುಲವನ್ನು ಪ್ರವೇಶಿಸಲು ಹೈದರಾಬಾದ್ನ ಮೋಜೋ ಟಿವಿಯ ಪತ್ರಕರ್ತೆ ಕವಿತಾ ಜಕ್ಕಲ್ ಮತ್ತು ಎರ್ನಾಕುಲಂನ ರೆಹನಾ ಫಾತಿಮಾ ನೇತೃತ್ವದಲ್ಲಿ ಕೆಲವು ಮಹಿಳೆಯರು ಹೆಲ್ಮೆಟ್ ಧರಿಸಿ ಬೈಕಿನಲ್ಲಿ ದೇಗುಲದ ಬಳಿ ತೆರಳಿದ್ದರು.
ಬಳಿಕ ಸುಮಾರು 300 ಪೊಲೀಸ್ ಕಮಾಂಡೊಗಳ ಸರ್ಪಗಾವಲಿನ ನಡುವೆ ಐದು ಕಿ.ಮೀ.ವರೆಗೆ ನಡೆದುಕೊಂಡು ಅಯ್ಯಪ್ಪನ ಸನ್ನಿಧಾನದತ್ತ ತೆರಳಿದ್ದರು. ದೇವಸ್ಥಾನದ ಪವಿತ್ರ ಮೆಟ್ಟಿಲುಗಳಿಗೆ ಸುಮಾರು 500 ಮೀಟರ್ ದೂರದಲ್ಲಿ ಪ್ರತಿಭಟನೆ ಹೆಚ್ಚಾದ ಕಾರಣ ತಮ್ಮ ಸಾಹಸವನ್ನು ಮೊಟಕುಗೊಳಿಸಿದರು.