ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳ: ಶಿರಡಿ ದೇವಾಲಯ ಬಂದ್
ಮುಂಬೈ, ಏಪ್ರಿಲ್ 05: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿರುವ ಶಿರಡಿ ಸಾಯಿಬಾಬಾ ದೇವಸ್ಥಾನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇಂದು ರಾತ್ರಿ 8 ಗಂಟೆಯಿಂದ ಶಿರಡಿ ಸಾಯಿಬಾಬಾ ದೇವಸ್ಥಾನ ಬಂದ್ ಇರಲಿದೆ. ಅಷ್ಟೇ ಅಲ್ಲದೆ ಪ್ರಸಾದಾಲಯ, ಭಕ್ತ ನಿವಾಸವನ್ನು ಕೂಡ ಮುಚ್ಚಲಾಗಿದೆ.
ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಭಾಗಶಃ ಲಾಕ್ಡೌನ್ ವಿಧಿಸಲು ನಿರ್ಧರಿಸಿದೆ. ಕಳೆದ ವರ್ಷ ಜಾರಿಗೆ ತಂದಿದ್ದ ಲಾಕ್ಡೌನ್ ನಿಯಮಗಳಿಗೆ ಹೋಲು ನಿರ್ಬಂಧಗಳನ್ನು ತರಲು ರಾಜ್ಯ ಸಂಪುಟ ಸಭೆ ನಿರ್ಧರಿಸಿದೆ.
ಭಾರತದಲ್ಲಿ ಮತ್ತೆ ಲಕ್ಷ ದಾಟಿದ ಕೊರೊನಾ ಪ್ರಕರಣ; 1,03,558 ಹೊಸ ಪ್ರಕರಣ ದಾಖಲು
ಏಪ್ರಿಲ್ 30ರವರೆಗೆ ನಿರ್ಬಂಧಗಳು ಜಾರಿಲ್ಲಿರುತ್ತವೆ. ವಾರಾಂತ್ಯ ಲಾಕ್ಡೌನ್ ಇರಲಿದ್ದು, 144 ಸೆಕ್ಷನ್ ಇಡೀ ದಿನ ಜಾರಿಯಲ್ಲಿರಲಿದೆ. ಯಾವುದೇ ಪ್ರಮುಖ ಕಾರಣಗಳಿಲ್ಲದೆ ಜನರು ಮನೆಯ ಹೊರಗೆ ಓಡಾಡುವಂತಿಲ್ಲ. ತುರ್ತು ಸಂದರ್ಭಗಳಲ್ಲಿ ಹೊರಗೆ ತೆರಳಬಹುದು.
ಕಳೆದ 24 ಗಂಟೆಯಲ್ಲಿ 1,03,558 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 478 ಮಂದಿ ಸಾವನ್ನಪ್ಪಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಹೆಲ್ತ್ ಬುಲೆಟಿನ್ನಲ್ಲಿ ಈ ಕುರಿತು ಮಾಹಿತಿ ನೀಡಿದೆ.
ದೇಶದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1,25,89,067ಕ್ಕೆ ಏರಿಕೆಯಾಗಿದೆ. ಸದ್ಯಕ್ಕೆ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 7,41,830 ಆಗಿದೆ. ಕಳೆದ 24 ಗಂಟೆಯಲ್ಲಿ 478 ಮಂದಿ ಸಾವನ್ನಪ್ಪಿದ್ದು, ಇದುವರೆಗೂ ಒಟ್ಟು 1,65,101 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.