ಶಿರಡಿ ಸಾಯಿಬಾಬಾ ಆಡಳಿತ ಮಂಡಳಿ ನಿರ್ಧಾರದಿಂದ ಭಕ್ತರಿಗೆ ಆಘಾತ
ಶಿರಡಿ, ಜನವರಿ 18: ಸಾಯಿಬಾಬಾ ಅವರ ಜನ್ಮಸ್ಥಾನದ ಕುರಿತಾದ ವಿವಾದ ಭುಗಿಲೆದ್ದಿದ್ದು, ಶಿರಡಿಯ ಸಾಯಿಬಾಬಾ ದೇವಸ್ಥಾನ ಭಾನುವಾರದಿಂದ ಅನಿರ್ದಿಷ್ಟಾವಧಿವರೆಗೆ ಬಂದ್ ಆಗಲಿದೆ. ಹೀಗಾಗಿ ಶಿರಡಿಗೆ ತೆರಳುವ ಸಾಯಿಬಾಬಾ ಭಕ್ತರಿಗೆ ಜ. 19ರಿಂದ ದೇವರ ದರ್ಶನ ಸಿಗುವುದಿಲ್ಲ.
ಸಾಯಿಬಾಬಾ ಅವರು ಹುಟ್ಟಿದ ಸ್ಥಳ ಪರ್ಭಾನಿಯ ಪತ್ರಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಈ ಹೇಳಿಕೆ ವಿರುದ್ಧ ಸಿಡಿದೆದ್ದಿರುವ ಸಾಯಿ ಬಾಬಾ ಸಮಾಧಿ ಆಡಳಿತ ಮಂಡಳಿ ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ. ಅದಕ್ಕಾಗಿ ಸಾಯಿಬಾಬಾ ದೇವಾಲಯವನ್ನು ಭಾನುವಾರದಿಂದ ಅನಿರ್ದಿಷ್ಟಾವಧಿಗೆ ಮುಚ್ಚಲು ನಿರ್ಧರಿಸಿದೆ. ಆಡಳಿತ ಮಂಡಳಿಯು ಶನಿವಾರ ಸಂಜೆ ಸ್ಥಳೀಯರೊಂದಿಗೆ ಸಭೆ ನಡೆಸಲಿದ್ದು, ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಿದೆ.
'ಸಾಯಿಬಾಬಾ ಅವರ ಜನ್ಮಸ್ಥಳದ ಕುರಿತಾಗಿ ವದಂತಿಗಳನ್ನು ಹರಡಿಸುವುದನ್ನು ವಿರೋಧಿಸಿ ಜ. 19ರಿಂದ ಶಿರಡಿಯನ್ನು ಬಂದ್ ಮಾಡುತ್ತಿರುವುದಾಗಿ ಪ್ರಕಟಿಸುತ್ತಿದ್ದೇವೆ' ಎಂದು ಸಾಯಿಬಾಬಾ ಸಂಸ್ಥಾನ ಟ್ರಸ್ಟ್ನ ಬಾವು ಸಾಹೇಬ್ ವಕ್ಚೌರೆ ಹೇಳಿದ್ದಾರೆ.
ಆದರೆ ದೇವಸ್ಥಾನ ತೆರೆದಿರಲಿದೆ ಎಂದು ಶಿರಡಿ ಟ್ರಸ್ಟ್ ಸಾರ್ವಜನಿಕ ಸಂಪರ್ಕಾಧಿಕಾರಿ ಮೋಹನ್ ಯಾದವ್ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಸ್ಥಳೀಯರ ಸಭೆ
'ಸಾಯಿ ಬಾಬಾ ಜನ್ಮಸ್ಥಳ ಪತ್ರಿ ಎಂದು ಉದ್ಧವ್ ಠಾಕ್ರೆ ಹೇಳಿಕೆ ನೀಡಿದ್ದಾರೆ. ಈ ವಿವಾದದ ಕುರಿತು ಚರ್ಚೆ ನಡೆಸಲು ಶನಿವಾರ ಸಂಜೆ ಗ್ರಾಮಸ್ಥರೊಂದಿಗೆ ಸಭೆ ಕರೆಯಲಾಗಿದೆ. ಆದರೆ ಶಿರಡಿಗೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು' ಎಂದು ಅವರು ತಿಳಿಸಿದ್ದಾರೆ.
ಶಿರಡಿ ದರ್ಶನಕ್ಕೆ IRCTC ಘೋಷಿಸಿದೆ ವಿಶೇಷ ಪ್ಯಾಕೇಜ್ ಟೂರ್
ಉದ್ಧವ್ ಠಾಕ್ರೆ ಹೇಳಿದ್ದೇನು?
ಕಳೆದ ವಾರ ಪರ್ಭಾನಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಕುರಿತಾದ ಪರಾಮರ್ಶನ ಸಭೆಯಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಪತ್ರಿ ಸಾಯಿಬಾಬಾ ಅವರ ಜನ್ಮಸ್ಥಳವಾಗಿರುವುದರಿಂದ ಅದನ್ನು ಧಾರ್ಮಿಕ ಪ್ರವಾಸೋದ್ಯಮದ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.
ಮಹತ್ವ ಕಳೆದುಕೊಳ್ಳುತ್ತದೆ ಶಿರಡಿ
ಶಿರಡಿಯ ಸಾಯಿಬಾಬಾ ದೇವಸ್ಥಾನವು ದೇಶದ ಅತ್ಯಂತ ಜನಪ್ರಿಯ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಸಾಯಿಬಾಬಾ ಜನ್ಮಸ್ಥಳವೆಂದು ಪತ್ರಿಯನ್ನು ಅಭಿವೃದ್ಧಿಪಡಿಸುವುದರ ಕುರಿತು ಇಲ್ಲಿನ ಸ್ಥಳೀಯರು ಆತಂಕ ಹೊಂದಿದ್ದಾರೆ. ಒಂದು ವೇಳೆ ಪತ್ರಿ ಅಭಿವೃದ್ಧಿ ಹೊಂದಿದರೆ ಶಿರಡಿ ತನ್ನ ಪ್ರಾಮುಖ್ಯ ಕಳೆದುಕೊಳ್ಳುತ್ತದೆ ಎಂದು ಅವರು ಹೇಳುತ್ತಾರೆ.
ಶಿರಡಿ ಸಾಯಿಬಾಬಾ ದೇಗುಲಕ್ಕೆ ಬರುತ್ತಿರುವ ಲಕ್ಷಗಟ್ಟಲೆ ನಾಣ್ಯಗಳ ಕಾಣಿಕೆಯೇ ಸಮಸ್ಯೆ
ಜನ್ಮಸ್ಥಳ, ಜನ್ಮದಿನಾಂಕ ಗೊಂದಲ
ಸಾಯಿಬಾಬಾ ಜನ್ಮದಿನಾಂಕ ಮತ್ತು ಜನ್ಮಸ್ಥಳದ ಕುರಿತು ಹಲವು ವರ್ಷಗಳಿಂದಲೂ ಗೊಂದಲಗಳಿವೆ. ಅವರ ಜನ್ಮಸ್ಥಳ ಯಾವುದೆಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ. ಹಾಗೆಯೇ ಅವರ ನಿಜವಾದ ಹೆಸರೂ ಯಾರಿಗೂ ತಿಳಿದಿಲ್ಲ. ಅವರು ಶಿರಡಿಯ ಸುತ್ತಮುತ್ತಲಿನ ಸ್ಥಳದಲ್ಲಿಯೇ ಜನಿಸಿದ್ದಾರೆ. ಅವರ ಪೋಷಕರು ಪತ್ರಿ ಗ್ರಾಮದವರು ಎಂದು ಹೇಳಲಾಗಿದೆ. 16 ವರ್ಷದವರಿದ್ದಾಗ ಸಾಯಿಬಾಬಾ ಶಿರಡಿಗೆ ಬಂದಿದ್ದರು ಎಂದು ನಂಬಲಾಗಿದೆ.
ಶಿರಡಿ ಸಾಯಿಬಾಬಾಗೆ 2 ಕೆ.ಜಿ. ತೂಕದ ಚಿನ್ನದ ಪಾದುಕೆ ನೀಡಿದ ಭಕ್ತೆ
ದಿನವಿಡೀ ಪೂಜಾ ಕಾರ್ಯಕ್ರಮ
ಶಿರಡಿ ಸಾಯಿಬಾಬಾ ದೇವಸ್ಥಾನವು ಭಕ್ತರಿಗೆ ಹೆಚ್ಚು ಸಮಯ ದರ್ಶನ ಅವಕಾಶ ನೀಡುವ ದೇವಾಲಯಗಳಲ್ಲಿ ಒಂದು. ಬೆಳಿಗ್ಗೆ 4 ಗಂಟೆಗೆ ಬಾಗಿಲು ತೆರೆದ ಬಳಿಕ ನಿರಂತರವಾಗಿ ಪೂಜಾಕೈಂಕರ್ಯಗಳು ನಡೆಯುತ್ತವೆ. ವಿವಿಧ ಬಗೆಯ ಆರತಿ, ಅಭಿಷೇಕ, ಪೂಜೆಗಳು ನಡೆಯುತ್ತವೆ. ರಾತ್ರಿಯ ಬಳಿಕ ಒಂದೊಂದೇ ವಿಭಾಗಗಳು ಬಂದ್ ಆಗುತ್ತವೆ. ರಾತ್ರಿ 11.15ಕ್ಕೆ ಸಮಾಧಿ ಮಂದಿರವನ್ನು ರಾತ್ರಿ ಆರತಿಯ ಬಳಿಕ ಮುಚ್ಚಲಾಗುತ್ತದೆ. ಆದರೆ ಆಡಳಿತ ಮಂಡಳಿಯ ನಿರ್ಧಾರದಂತೆ ಭಾನುವಾರದಿಂದ ದೇಗುಲದ ಬಾಗಿಲು ತೆರೆಯುವುದು ಅನುಮಾನ.
ಪತ್ರಿಯಲ್ಲಿ ಹುಟ್ಟಿದ್ದಕ್ಕೆ ಪುರಾವೆ ಇದೆ
ಸಾಯಿಬಾಬಾ ಅವರ ಜನ್ಮಸ್ಥಳ ಪತ್ರಿ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಎನ್ಸಿಪಿ ಶಾಸಕ ದುರ್ರಾನಿ ಅಬ್ದುಲ್ಲಾ ಖಾನ್ ಹೇಳಿದ್ದಾರೆ. ಪತ್ರಿ ಅಭಿವೃದ್ಧಿ ಹೊಂದಿದರೆ ಶಿರಡಿಯ ಮಹತ್ವ ಕಡಿಮೆಯಾಗುತ್ತದೆ ಎಂಬ ಭಯದಿಂದ ಅದಕ್ಕೆ ವಿರೋಧ ಮಾಡಲಾಗುತ್ತಿದೆ ಎಂದಿದ್ದಾರೆ. ಶಿರಡಿಯು ಸಾಯಿಬಾಬಾ ಅವರ ಕರ್ಮಭೂಮಿ. ಹಾಗೆಯೇ ಪತ್ರಿ ಅವರ ಜನ್ಮಭೂಮಿ. ಎರಡೂ ಸ್ಥಳಗಳಿಗೆ ತಮ್ಮದೇ ಆದ ಮಹತ್ವವಿದೆ. ಪತ್ರಿ ಅವರ ಜನ್ಮಸ್ಥಳ ಎನ್ನುವುದಕ್ಕೆ ಅನೇಕ ಪುರಾವೆಗಳಿವೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರೂ ಈ ವಾಸ್ತವವನ್ನು ಅನುಮೋದಿಸಿದ್ದರು ಎಂದು ಖಾನ್ ಹೇಳಿದ್ದಾರೆ.
100 ಕೋಟಿ ರೂ. ನೀಡಲು ಒಪ್ಪಿಗೆ
ಪತ್ರಿಯ ಅಭಿವೃದ್ಧಿಗೆ ಮುಖ್ಯಮಂತ್ರಿ 100 ಕೋಟಿ ರೂ. ನೀಡಲು ಒಪ್ಪಿಕೊಂಡಿದ್ದಾರೆ. ಶಿರಡಿಯ ಜನರಿಗೆ ಅನುದಾನದ ಬಗ್ಗೆ ಚಿಂತೆಯಿಲ್ಲ. ಅವರು ಪತ್ರಿಯನ್ನು ಸಾಯಿಬಾಬಾರ ಜನ್ಮಸ್ಥಳ ಎಂದು ಕರೆಯುವುದನ್ನು ಬಯಸುತ್ತಿಲ್ಲ. ಈಗ ಅಲ್ಲಿ ಉತ್ತಮ ಮೂಲಸೌಕರ್ಯದ ಕೊರತೆ ಇದೆ. ಪತ್ರಿ ಅಭಿವೃದ್ಧಿಯಾದರೆ ದೇಶ ಮತ್ತು ಜಗತ್ತಿನಾದ್ಯಂತ ಭಕ್ತರು ಭಾರಿ ಸಂಖ್ಯೆಯಲ್ಲಿ ಅಲ್ಲಿಗೆ ಭೇಟಿ ನೀಡಲಿದ್ದಾರೆ. ಇದರಿಂದ ಪತ್ರಿ ಜನಪ್ರಿಯವಾಗಿ ಶಿರಡಿಗೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಲಿದೆ ಎನ್ನುವುದು ಅವರ ಭಯ ಎಂದು ಟೀಕಿಸಿದ್ದಾರೆ.