ಸೀರಂ ಸಂಸ್ಥೆಯ ಸಿಇಓ ಅದಾರ್ ಪೂನಾವಾಲಾರಿಗೆ 'Y' ವರ್ಗದ ಭದ್ರತೆ
ಪುಣೆ, ಏಪ್ರಿಲ್ 28: ಕೊರೊನಾವೈರಸ್ ಸೋಂಕಿಗಾಗಿ ಕೊವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿರುವ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅದಾರ್ ಪೂನಾವಾಲಾ ಅವರಿಗೆ Y ಕೆಟಗರಿ ಭದ್ರತೆ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಬುಧವಾರ ಆದೇಶ ಹೊರಡಿಸಿದೆ. ಕೇಂದ್ರ ಸಶಸ್ತ್ರ ಮೀಸಲು ಪಡೆಯು Y ಕೆಟಗರಿ ಭದ್ರತೆಯನ್ನು ನೀಡಲಿದೆ.
ಏಪ್ರಿಲ್ 16ರಂದು ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಪುಣೆ ಮೂಲದ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಿಇಓ ಪೂನಾವಾಲಾರಿಗೆ ಭದ್ರತೆ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರದಿದ್ದರು. ಈ ಪತ್ರಕ್ಕೆ ಸ್ಪಂದಿಸಿದ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
ಕೊರೊನಾ ಲಸಿಕೆ ವಿತರಣೆಯಲ್ಲಿ ಚೀನಾ, ಅಮೆರಿಕಾವನ್ನು ಹಿಂದಿಕ್ಕಿದ ಭಾರತ
ದೇಶದಲ್ಲಿ ಕೊರೊನಾವೈರಸ್ ಸೋಂಕಿನ ಏರಿಕೆ ನಡುವೆ ಕೊವಿಶೀಲ್ಡ್ ಲಸಿಕಗೆ ಬೇಡಿಕೆ ಹೆಚ್ಚುತ್ತಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಕೊವಿಶೀಲ್ಡ್ ಲಸಿಕೆ ಸರಬರಾಜು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ಐಐ ಸಿಇಓ ಆಗಿರುವ ಪೂನಾವಾಲಾ ಅವರಿಗೆ ಹಲವು ಕಡೆಗಳಿಂದ ಬೆದರಿಕೆಗಳು ಕೇಳಿ ಬಂದಿವೆ. ಈ ಹಿನ್ನೆಲೆ ಹೆಚ್ಚಿನ ಭದ್ರತೆ ನೀಡುವಂತೆ ಮನವಿ ಸಲ್ಲಿಸಲಾಗಿತ್ತು.
ಕೊವಿಶೀಲ್ಡ್ ಉತ್ಪಾದಿಸುತ್ತಿರುವ ಎಸ್ಐಐ:
ಭಾರತದಲ್ಲಿ ಕೊರೊನಾವೈರಸ್ ಆತಂಕದ ನಡುವೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆಗಳು ಸಂಶೋಧಿಸಿದ ಕೊವಿಶೀಲ್ಡ್ ಲಸಿಕೆಯನ್ನು ಇದೇ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಲಾಗುತ್ತೆದೆ.