ಸಲ್ಮಾನ್ ಬೆಂಬಲದ ನಂತರ 'ಧರ್ಮರಾಯ'ನಿಂದ ಮುಕ್ತಿ
ಪುಣೆ, ಜು.17: ಪುಣೆ ಫಿಲಂ ಇನ್ಸ್ಟಿಟ್ಯೂಟ್ನ ಮುಖ್ಯಸ್ಥ ಟಿವಿ ನಟ ಗಜೇಂದ್ರ ಚೌಹಾಣ್ ನೇಮಕ ವಿರುದ್ಧ ಮುಷ್ಕರ ನಿರತರಾಗಿರುವ ವಿದ್ಯಾರ್ಥಿಗಳಿಗೆ ಬಾಲಿವುಡ್ ನ ಜನಪ್ರಿಯ ನಟ ಸಲ್ಮಾನ್ ಖಾನ್ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಬೆಂಬಲ ನಿಂತ ಬಳಿಕ ಪುಣೆ ಫಿಲಂ ಸಂಸ್ಥೆಯಿಂದ 'ಧರ್ಮರಾಯ' ಅಲಿಯಾಸ್ ಗಜೇಂದ್ರ ಚೌಹಾಣ್ ರನ್ನು ಮುಕ್ತಗೊಳಿಸಿ ಹೊಸ ಮುಖ್ಯಸ್ಥರನ್ನು ನೇಮಿಸಲಾಗಿದೆ.
ಇದೀಗ ಬಂದ ಅಪ್ಡೇಟ್: ಈ ನಡುವೆ ವಿದ್ಯಾರ್ಥಿಗಳ ಆಕ್ರೋಶವನ್ನು ಶಮನಗೊಳಿಸುವ ದೃಷ್ಟಿಯಿಂದ ಹೊಸ ನಿರ್ದೇಶಕರಾಗಿ ಮಹಾರಾಷ್ಟ್ರ ಮೂಲದ ಪ್ರಶಾಂತ್ ಪತ್ರಾಬೆ ಅವರನ್ನು ನೇಮಿಸಲಾಗಿದೆ ಎಂಬ ಸುದ್ದಿ ಬಂದಿದೆ.
ಭಾರತೀಯ ಮಾಹಿತಿ ಸೇವೆ (ಐಐಎಸ್) ನ 1992 ಬ್ಯಾಚಿನ ಪ್ರಶಾಂತ್ ಅವರನ್ನು ತಾತ್ಕಾಲಿಕವಾಗಿ ಗಜೇಂದ್ರ ಚೌಹಾಣ್ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಎಫ್ಟಿಐಐ ಮುಖ್ಯಸ್ಥರಾಗಿ ನೇಮಕಗೊಂಡಿರುವ ಟಿವಿ ಧಾರಾವಾಹಿ 'ಮಹಾಭಾರತ' ದ ಯುಧಿಷ್ಠಿರ ಪಾತ್ರಧಾರಿ ನಟ ಗಜೇಂದ್ರ ಚೌಹಾಣ್ ಅವರು ವಿದ್ಯಾರ್ಥಿಗಳ ಬೇಡಿಕೆಗಳಿಗೆ ಓಗೊಟ್ಟು ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಸಲ್ಮಾನ್ ಆಗ್ರಹಿಸಿದ್ದಾರೆ.
ಇಲ್ಲಿನ ವಿದ್ಯಾರ್ಥಿಗಳೇ ನಮ್ಮ ಉದ್ಯಮವನ್ನು ಅಮೂಲ್ಯವನ್ನಾಗಿಸಿದ್ದಾರೆ, ಪುಣೆ ಸಂಸ್ಥೆಯಿಂದ ಹೊರ ಬಂದ ಪ್ರತಿಭೆಗಳು ಚಿತ್ರರಂಗದ ಆಸ್ತಿ ಎಂದು ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ಎಫ್ ಟಿಐಐ ಮುಖ್ಯಸ್ಥರಾಗಿ ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ಯು.ಆರ್ ಅನಂತಮೂರ್ತಿ, ಮುಖೇಶ್ ಖನ್ನ, ಸಯೀದ್ ಅಖ್ತರ್ ಮಿರ್ಜಾ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಗಜೇಂದ್ರ ಅವರ ಅರ್ಹತೆಯನ್ನು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
'ಭಾಗಬನ್', 'ತುಮಕೋ ನ ಭೂಲ್ ಪಾಯೆಂಗೆ' ಮುಂತಾದ ಹಿಂದಿ ಚಿತ್ರಗಳಲ್ಲಿ ಚೌಹಾಣ್ ಕಾಣಿಸಿಕೊಂಡರೂ ಬಿ.ಆರ್ ಛೋಪ್ರಾ ನಿರ್ಮಾಣದ ಮಹಾಭಾರತ್ ಧಾರಾವಾಹಿಯಲ್ಲಿ ಯುಧಿಷ್ಠಿರನ ಪಾತ್ರಧಾರಿಯಾಗಿ ಈಗಲೂ ಗುರುತಿಸಲ್ಪಡುತ್ತಾರೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಜೊತೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅರುಣ್ ಜೇಟ್ಲಿ ಅವರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಅದರೆ, ಗಜೇಂದ್ರ ಚೌಹಾಣ್ ಅವರ ನೇಮಕಾತಿಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ.(ಪಿಟಿಐ)